ಕೆ. ಬಿ. ಹೆಡ್ಗೆವಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೆ.ಬಿ. ಹೆಡಗೆವಾರ್ ಇಂದ ಪುನರ್ನಿರ್ದೇಶಿತ)
ಕೇಶವ ಬಲಿರಾಂ ಹೆಡ್ಗೆವಾರ್
ಸಂಸ್ಥಾಪಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ
ಜನನ
ಕೇಶವ ಬಲಿರಾಂ ಹೆಡ್ಗೆವಾರ್

ಏಪ್ರಿಲ್ ೧, ೧೮೮೯
ನಾಗಪುರ
ಮರಣಜೂನ್ ೨೧, ೧೯೪೦
ಉದ್ಯೋಗವೈದ್ಯರು, ಸ್ವಾತಂತ್ರ್ಯ ಹೋರಾಟಗಾರರು, ಸಂಘಟನಾಕಾರರು
ಸಕ್ರಿಯ ವರ್ಷಗಳು೧೯೦೭-೧೯೪೦
Organizationರಾಷ್ಟ್ರೀಯ ಸ್ವಯಂಸೇವಕ ಸಂಘ,

ಕೇಶವ ಬಲಿರಾಂ ಹೆಡ್ಗೆವಾರ್ (ಏಪ್ರಿಲ್ ೧, ೧೮೮೯ಜೂನ್ ೨೧, ೧೯೪೦) ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶ್ರೇಷ್ಠ ಸಮಾಜ ಸೇವಕರು ಮತ್ತು ಸುಧಾರಕರು.[೧]

ಜೀವನ[ಬದಲಾಯಿಸಿ]

ರಾಷ್ಟ್ರೀಯ ಸ್ವಯಂ ಸಂಘದ ಸಂಸ್ಥಾಪಕರಾದ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಏಪ್ರಿಲ್ ೧, ೧೮೮೯ ರಂದು, ಯುಗಾದಿಯ ದಿನ ನಾಗಪುರದಲ್ಲಿ ಬಲಿರಾಮ್ ಹೆಡ್ಗೆವಾರ್ ರ ೫ನೇ ಮಗುವಾಗಿ ಒಂದು ಬಡ ಪರಿವಾರದಲ್ಲಿ ಜನಿಸಿದರು. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿನ ಬೋಧನ್ ಎಂಬುದು ಅವರ ಪೂರ್ವಜರ ಊರು. ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು, ವಿನಾಯಕ ದಾಮೋದರ ಸಾವರ್ಕರ್ ಅವರ ಬೋಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಆದರ್ಶಗಳಾಗಬೇಕು ಎಂದು ಕನಸು ಕಂಡವರು. ಹೆಡ್ಗೆವಾರ್ ಅವರು ಕಲ್ಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದ ಡಾಕ್ಟರರು. [೨][೩][೪][೫]


ಕ್ರಾಂತಿಕಾರಿಗಳೊಂದಿಗೆ[ಬದಲಾಯಿಸಿ]

ಪದವಿ ಪಡೆದ ನಂತರದಲ್ಲಿ ಸ್ವಾತಂತ್ರ ಚಳುವಳಿಗಳಲ್ಲಿ ಕ್ರಾಂತಿಕಾರಿ ನಿಲುವುಗಳನ್ನು ತಳೆದಿದ್ದ ಅನುಶೀಲನ ಸಮಿತಿ, ಜುಗಂತರ್ ಮುಂತಾದ ಸಂಘಟನೆಗಳ ಆಕರ್ಷಣೆಗೆ ಹೆಡ್ಗೆವಾರ್ ಸೆಳೆಯಲ್ಪಟ್ಟರು. ರಾಮಪ್ರಸಾದ್ ಬಿಸ್ಮಿಲ್‍ರಂತಹ ಕ್ರಾಂತಿಕಾರಿಗಳ ಸಂಪರ್ಕ ಅವರಿಗಿತ್ತು.

ಕಾಂಗ್ರೆಸಲ್ಲಿ[ಬದಲಾಯಿಸಿ]

ಕಲ್ಕತ್ತೆಯಿಂದ ಹಿಂದಿರುಗಿ ಬಂದ ಮೇಲೆ ಹೆಡ್ಗೇವಾರರು ತಿಲಕ್ ಬಣದ(ತೀವ್ರವಾದಿ) ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ೧೯೨೦ರಲ್ಲಿ ನಾಗಪುರ ನಗರದ ಕಾಂಗ್ರೆಸ್ ಸಹಕಾರ್ಯದರ್ಶಿಯಾದರು. ನಾಗಪುರದಲ್ಲಿ ಹಿರಿಯ ನಾಯಕರಾಗಿದ್ದ ಮತ್ತು ಮಹಾನ್ ವಿದ್ವಾಂಸರಾದ ಬಿ.ಎಸ್. ಮೂಂಜೆಯವರ ಮಾರ್ಗದರ್ಶನ ದೊರಕಿತು. ಮೂಂಜೆಯವರು ಹೆಡ್ಗೆವಾರರಿಗೆ ಹಿಂದೂಧರ್ಮ ತತ್ವಶಾಸ್ತ್ರದ ಮಾರ್ಗದರ್ಶಕರಾದರು. ೧೯೨೦ರ ಕಾಂಗ್ರೆಸ್ ಅಧಿವೇಶನ ನಡೆಯುವ ನಿರ್ದಾರ ಮಾಡಲಾಯಿತು. ಹೆಡ್ಗೆವಾರರು ೧೯೧೦ರಿಂದ ಪಾಂಡಿಚೆರಿಯಲ್ಲಿದ್ದ ಅರವಿಂದ ಘೋಷ್ ಅವರನ್ನು ಕಾಂಗ್ರಸ್ಸಿನ ಅಧ್ಯಕ್ಷರನ್ನಾಗಿ ಮಾಡಲು ಯೋಚಿಸಿದು. ಆದರೆ ಅಧ್ಯಾತ್ಮಿಕ ಜೀವನದ ಹಾದಿಯಲ್ಲಿ ಮುಂದುವರೆದಿದ್ದ ಅರವಿಂದರು ಬರಲು ಒಪ್ಪಲಿಲ್ಲ. ನಂತರ ವಿಜಯರಾಘವಾಚಾರ್ಯರು ಅಧ್ಯಕ್ಷರಾದರು. ಹೆಡ್ಗೆವಾರ್ ಅವರು ಕಾಂಗ್ರೆಸ್ ಅಧಿವೇಶನದ ಸ್ವಯಂಸೇವಕರ ಉಪಮುಖ್ಯಸ್ಥರಾಗಿ ನೇಮಿಸಲ್ಪಟ್ಟರು. ಸ್ವತಃ ಪೂರ್ಣಾವಧಿ ತೊಡಗಿ, ೧,೨೦೦ ಸ್ವಯೋಸೇವಕರ ಪಡೆಯನ್ನು ಕಟ್ಟಿ, ಈ ಅಧಿವೇಶನ ಯಶಸ್ವಯಾಗಲು ಮುಖ್ಯ ಭೂಮಿಕೆ ನಿರ್ವಹಿಸಿದರು[೬]. ಅಧಿವೇಶನವು ಒಂದು ರೀತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಚಾಲನೆ ನೀಡಿತ್ತು. ಈ ಸ್ವಯಂಸೇವಕ ಸಂಸ್ಥೆಗೆ ಭಾರತ್ ಸ್ವಯಂಸೇವಕ್ ಮಂಡಲ್ ಎಂದು ಹೆಸರಿತ್ತು. ಈ ಸಂಸ್ಥೆಗೆ ಡಾಕ್ಟರ್ ಲಕ್ಷ್ಮಣ್, ವಿ ಪರಾಂಜಪೆ, ಡಾಕ್ಟರ್ ಹೆಡ್ಗೆವಾರ್ ಅವರು ಉಪಮುಖ್ಯಸ್ಥರೆನಿಸಿದ್ದರು. ಅಧಿವೇಶನದಲ್ಲಿ ಎಲ್ಲ ಸ್ವಯಂಸೇವಕರೂ ಮಿಲಿಟರಿ ಮಾದರಿಯ ಸಮವಸ್ತ್ರ ಧರಿಸಬೇಕೆಂದು ಸೂಚಿಸಿದ್ದರು.

ಅಧಿವೇಶನದ ನಂತರ ಅವರು ಇಡೀ ಪ್ರಾಂತ್ಯದಲ್ಲಿ ಒಬ್ಬ ಮುಖ್ಯ ನಾಯಕರಾದು. "ತಿಲಕ್ ಸ್ವರಾಜ್ಯ ಫಂಡ್"ನ ಓರ್ವ ಸದಸ್ಯರಾದರು[೭]. ಇದರ ನಂತರ ನಡೆದ ಅಸಹಕಾರ ಚಲುವಳಿಯಲ್ಲಿ ಭಾಗವಹಿಸಿದಕ್ಕಾಗಿ ರಾಜದ್ರೋಹದ ಆರೋಪದ ಮೇಲೆ ಅವರಿಗೆ ೧೯೨೧ರಲ್ಲಿ ಒಂದು ವರ್ಷದ ಕಾರಗೃಹವಾಸ ವಿಧಿಸಲಾಯಿತು. ಶಿಕ್ಷೆ ಮುಗಿದ ಮೇಲೆ ಅವರು ಮತ್ತೆ ಸಾರ್ವಜನಿಕ ಜೀವನದಲ್ಲಿ ಮುಂದುವರೆದರು[೮].

ಮುಂದೆ ೧೯೩೦ರಲ್ಲಿ ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕಾರಣ 9 ತಿಂಗಳುಗಳ ಕಾಲ ಹೆಡ್ಗೆವಾರರನ್ನು ಬ್ರಿಟಿಷ್ ಸರ್ಕಾರ ಬಂಧನದಲ್ಲಿರಿಸಿತ್ತು. ಈ ಚಲುವಳಿಯಲ್ಲಿ ಹಲವಾರು ಸ್ವಯೋಸೇವಕರು ವಯಕ್ತಿಕ ನೆಲೆಗಟ್ಟಿನಲ್ಲಿ ಜೊತೆಯಾದರು. ಆದರೆ ಈ ಸಮಯದಲ್ಲಿ ಲ.ವಾ.ಪರಾಂಜಪೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿ ತಾತ್ಕಾಲಿಕವಾಗಿ ಹೆಡ್ಗೆವಾರರ ಸ್ಥಾನವನ್ನು ತುಂಬಿದರು[೯].

ಹೊಸ ಚಿಂತನೆ[ಬದಲಾಯಿಸಿ]

ಕ್ರಾಂತಿಕಾರಿ ಹೋರಾಟಗಾರರ ಸಂಪರ್ಕದಲ್ಲಿದ್ದಾಗ್ಯೂ ಅವರು ಸುದೀರ್ಘವಾಗಿ ಹೊಸ ದೃಷ್ಟಿಯಿಂದ ಯೋಚಿಸಲಾರಂಭಿಸಿದರು. ಕ್ರಾಂತಿಕಾರಿಗಳಲ್ಲಿ ಅಚಲ ನಿಷ್ಠೆ ಇದೆ ಎಂಬುದೇನೋ ನಿಜ. ಹಾಗೆಂದ ಮಾತ್ರಕ್ಕೆ ಅಷ್ಟು ಮಾತ್ರದಿಂದಲೇ ಮಿಲಿಟರಿ ಶಕ್ತಿಯನ್ನು ಹೊಂದಿರುವ ಒಂದು ಬೃಹತ್ ವ್ಯವಸ್ಥೆಯ ವಿರುದ್ಧ ಹೋರಾಡುವುದಕ್ಕೆ ಸಾಧ್ಯವಿಲ್ಲ ಎಂಬ ಅರಿವು ಅವರಲ್ಲಿ ಸ್ಪಷ್ಟವಾಗತೊಡಗಿತು. ಹೀಗಾಗಿ ಅವರು ಕ್ರಾಂತಿಕಾರಿ ಮಾರ್ಗಗಳಲ್ಲಿದ್ದ ಸೀಮಿತತೆಯ ಕುರಿತು ನಿರಾಶರಾಗಿ ನಾಗಪುರಕ್ಕೆ ಹಂದಿರುಗಿದರು. ಮುಂದೆ ಆರ್ ಎಸ್ ಎಸ್ ಸಂಸ್ಥೆಯ ಮೂರನೆಯ ಸರಸಂಘಚಾಲಕರಾದ (ಮುಖ್ಯಸ್ಥ) ಬಾಳಾಸಾಹೇಬ್ ದೇವರಸ್ ಅವರು, ಕ್ರಾಂತಿಕಾರಿಗಳ ಜೊತೆಯಲ್ಲಿ ಅಪಾಯದಲ್ಲಿ ಜೀವಿಸುವ ಬದುಕಿನಿಂದ ತಮ್ಮನ್ನು ಹೇಗೆ ಪಾರುಮಾಡಿದರು ಎಂಬುದರ ಕುರಿತು ವಿಸ್ತಾರವಾಗಿ ಬರೆದಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಚಾಲನೆ[ಬದಲಾಯಿಸಿ]

೧೯೩೯ರಲ್ಲಿ ಸಂಘದ ಕಾರ್ಯಕರ್ತರೊಂದಿಗೆ ಹೆಡಗೇವಾರ್

ರಾಷ್ಟ್ರೀಯ ಸ್ವಯಂಸೇವಕ ಸಂಘವು ರೂಪುಗೊಳ್ಳಲು ಅಂದಿನ ಕೆಲವೊಂದು ಪ್ರಮುಖ ಘಟನೆಗಳು ಕಾರಣವಾದವು. ಕಾಕೋರಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವು ಎಲ್ಲಾ ಪೋಲಿಸ್ ಹುದ್ದೆಗಳು ಮತ್ತು ಮ್ಯಾಜಿಸ್ಟ್ರೇಟ್ ಹುದ್ದೆಗಳಿಗೆ ಮುಸ್ಲಿಂ ಅಧಿಕಾರಿಗಳನ್ನು ನೇಮಿಸಿ ತನ್ನ ಕುಯುಕ್ತಿಯನ್ನು ಸಾಧಿಸಿತ್ತು. ಈ ಎಲ್ಲಾ ವಿಚಾರಣೆಗಳಲ್ಲಿ ಕ್ರಾಂತಿಕಾರಿಗಳಿಗೆ ನೇಣು ಅಥವಾ ಕ್ರೂರ ಶಿಕ್ಷೆಗಳು ತಪ್ಪದಂತೆ ಮಾಡುವುದು ಬ್ರಿಟಿಷ್ ಆಡಳಿತದ ಉದ್ಧೇಶವಾಗಿತ್ತು. ಅದು ಹಾಗೆಯೇ ನಡೆಯಿತೆಂಬುದು ಕೊಡಾ ಇತಿಹಾಸದಲ್ಲಿ ಸುಸ್ಪಷ್ಟ. ರಾಮ್ ಬಿಸ್ಮಿಲ್ಲಾ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿರುವಂತೆ ಈ ಕುರಿತಂತೆ ಹಿಂದೂಗಳ ಪ್ರತಿಕ್ರಿಯೆಯು ಇಲ್ಲವೇ ಇಲ್ಲವೇನೋ ಎಂಬಷ್ಟು ನಿಷ್ಕ್ರಿಯವಾಗಿತ್ತು. ಇದೇ ಅಭಿಪ್ರಾಯವನ್ನು ಬನಾರಸಿ ದಾಸ್ ಚತುರ್ವೇದಿ ಅವರು ಕೂಡಾ ತಮ್ಮ ಕಾಕೋರಿ ಕಿ ಶಹೀದ್ ಎಂಬ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಹಿನ್ನೆಲೆಗಳಲ್ಲಿ ತೀವ್ರವಾಗಿ ಚಿಂತಿಸಿದ ಹೆಡ್ಗೆವಾರ್ ಅವರಿಗೆ “ಭಾರತದಲ್ಲಿ ಹಿಂದೂಗಳ ಮೇಲೆ ಹಿಂದಿನಿಂದ ಪ್ರಸಕ್ತದವರೆಗೆ ನಡೆಯುತ್ತಿದ್ದ ವಿದೇಶಿ ದೌರ್ಜನ್ಯದ ಸಹಿಷ್ಣುತಾ ಗುಣ, ಹಿಂದೂಗಳು ಸೃಷ್ಟಿಸಿದ ವರ್ಗೀಕೃತ ಸಮಾಜ, ಅಸ್ಪೃಶ್ಯತೆ ಮುಂತಾದವುಗಳೆಲ್ಲಾ ಹಿಂದೂಗಳ ಮೂಲ ಸ್ವಭಾವದಿಂದಲೇ ಬಂದೊದಗಿರುವಂತದ್ದು” ಎಂಬ ನಿರ್ಧಾರ ದೃಢವಾಗುತ್ತಾ ಬಂತು. ಇವಕ್ಕೆಲ್ಲಾ ಅವರಿಗೆ ಕಂಡ ಪರಿಹಾರವೆಂದರೆ “ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ, ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಒಂದು ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸುವುದು”. ಈ ಕಾರ್ಯಕ್ಕೆ ಅವರಿಗೆ ಅಂದು ರತ್ನಗಿರಿಯಲ್ಲಿ ಸ್ಥಾನಬದ್ಧರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಅಶೀರ್ವಾದವೂ ದೊರಕಿತು. ಮೂಂಜೆ ಮತ್ತು ಎಲ್ ವಿ ಪರಾಂಜಪೆ ಅವರುಗಳು ಹೆಡ್ಗೆವಾರರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಲು ಎಲ್ಲ ರೀತಿಯ ನೆರವನ್ನೂ ನೀಡಿದರು.

ಈ ಹಿಂದೆ ಹೆಡ್ಗೆವಾರ್ ಅವರು ತಾವಿದ್ದ ಹಿಂದೂಸ್ಥಾನ್ ರಿಪಬ್ಲಿಕನ್ ಒಕ್ಕೂಟದ ಸಂವಿಧಾನವನ್ನೇ ರಾಷ್ಟ್ರೀಯ ಸ್ವಯಂಸಂಘಕ್ಕೂ ಅನ್ವಯಿಸುವಂತೆ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಮೊದಲಬಾರಿಗೆ ೧೯೨೫ರ ವರ್ಷದಲ್ಲಿ ಕಾಕೋರಿ ರೈಲು ದರೋಡೆ ಪ್ರಕರಣವಾದ ಒಂದು ತಿಂಗಳ ಅವಧಿಯಲ್ಲಿ ವಿಜಯದಶಮಿಯಂದು ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಸ್ವರೂಪವೆಂದರೆ ಪ್ರತಿಯೊಂದು ಗ್ರಾಮ ಇಲ್ಲವೇ ಹಳ್ಳಿಯಲ್ಲೂ ಶಾಖೆಯನ್ನು ಹೊಂದುವುದು ಮತ್ತು ಆ ಶಾಖೆಯಲ್ಲಿ ಸ್ವಯಂಸೇವಕರು ಒಂದಾಗಿ ವ್ಯಾಯಾಮ, ಆಟ, ಚರ್ಚೆ, ಪ್ರಾರ್ಥನೆ ಇವೇ ಮುಂತಾಗಿ ಕಡೇಪಕ್ಷ ಒಂದು ಗಂಟೆಯ ಅವಧಿಯವರೆಗಿನ ಕಾರ್ಯಕ್ರಮಗಳನ್ನು ನಡೆಸುವುದು.

೧೯೨೫ರಿಂದ ೧೯೪೦ರ ವರೆಗೆ ಮಿಲಿಟರಿ ಮಾದರಿಯ ಸಮವಸ್ತ್ರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧಿಕೃತ ಸಮವಸ್ತ್ರವೆಂದೆನಿಸಿತ್ತು.

ಪ್ರಥಮ ಅನುಯಾಯಿಗಳು[ಬದಲಾಯಿಸಿ]

ರಾಷ್ಟ್ರೀಯ ಸ್ವಯಂಸಂಘದಲ್ಲಿ ಹೆಡ್ಗೆವಾರ್ ಅವರ ಪ್ರಥಮ ಅನುಯಾಯಿಗಳೆಂದರೆ ಅಪ್ಪಾಜಿ ಜೋಶಿ, ಭಯ್ಯಾಜಿ ದಾನಿ, ಬಾಬಾ ಸಾಹೇಬ್ ಆಪ್ಟೆ, ಗೋಪಾಲ್ ರಾವ್, ಯೆರುಕುಂಟವಾರ್, ದಾದಾ ರಾವ್ ಪರಮಾರ್ಥ್, ಬಾಳಾಸಾಹೇಬ್ ದೇವರಸ್, ಯಾದವ ರಾವ್ ಜೋಶಿ, ಬಹುರಾವ್ ದೇವರಸ್, ಮೊರೆಶ್ವರ್ ಮುಂಜೆ, ಕೆ.ಡಿ. ಜೋಶಿ, ರಾಜಾ ಭಾವ್ ಪತುರ್ಕರ್, ಬಾಬು ರಾವ್ ಬಿಷಿಕರ್, ಅಬಾಜಿ ಹೆಡ್ಗೆವಾರ್, ಮಧುಕರ್ ರಾವ್ ಭಗವತ್, ವಿತ್ಥಲ್ ರಾವ್ ಪಟ್ಕಿ, ಬಾಪು ರಾವ್ ದಿವಾಕರ್ ಮತ್ತು ಕೆ ಎಸ್ ಪಟೈಟ್. ಯಾದವ ರಾವ್ ಜೋಶಿಯವರು ಮುಂದೆ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸಂಘವನ್ನು ಬೆಳಿಸಿದರು.

ಮರಣ[ಬದಲಾಯಿಸಿ]

ಮೋಹಿತೆವಾಡಾ - ಇಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೊದಲ ಶಾಖೆ ಪ್ರಾಂಭವಾಗಿತ್ತು

೧೯೨೫ರ ನಂತರ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಿದ ಮೇಲೆ ಹೆಡ್ಗೆವಾರರು ಸತತವಾಗಿ ಪ್ರವಾಸದಲ್ಲಿದ್ದರು. ಕೆಲವು ವರ್ಷಗಳಲ್ಲಿ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿತು. ಮೆ ೧, ೧೯೪೦ ಅವರು ಬಿಹಾರದ ರಾಜಗೃಹದಿಂದ ಪುಣೆಗೆ ಹಿಂತಿರುಗಿ ಸಂಘದ ಶಿಬಿರದಲ್ಲಿ ಪಾಲ್ಗೊಂಡರು. ಅಲ್ಲಿಂದ ಮೆ ೧೬, ೧೯೪೦ ನಾಗಪುರಕ್ಕೆ ಸಂಘ ಶಿಕ್ಷಾ ವರ್ಗದ ಶಿಬಿರದಲ್ಲಿ (ಒಂದು ತಿಂಗಳ ಅವಧಿಯದ್ದು) ಪಾಲ್ಗೊಳ್ಳಲು ಮರುಳಿದರು. ಆದರೆ ಅವರ ಆರೋಗ್ಯ ಹದಗೆಟ್ಟ ಕಾರಣ ಅದರಲ್ಲಿ ಬರೇ ೩ ದಿನ (ಮೆ ೧೬. ಜೂನ್ ೨, ಜೂನ್ ೯) ಮಾತ್ರ ಭಾಗವಹಿಸಿದರು. ಜೂನ್ ೯ ಭಾರತದ ಉದ್ದಗಲದಿಂದ ಬಂದಿದ್ದ ೧,೫೦೦ ಸ್ವಯಂಸೇವಕರನ್ನು ಸಂಬೋಧಿಸಿದರು. ಮುಖ್ಯವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ಹಿಂದು ರಕ್ಷಣಾ ದಳವೋ, ಅರೆಸೈನಿಕ ಪಡೆಯೋ ಅಲ್ಲ. ಆದರೆ ಇಡೀ ರಾಷ್ಟ್ರವನ್ನು ಮೌಲ್ಯಾಧಾರಿತ, ವೈಭವಯುತ, ಸರ್ವಾಂಗೀಣ ಉನ್ನತಿಯ ದಾರಿಯಲ್ಲಿ ಕೊಂಡುಹೋಗುವ ಮಹತ್ತರವಾದ ಜವಾಬ್ದಾರಿ ಎಲ್ಲಾ ಸ್ವಯಂಸೇವಕರ ಮೇಲೂಯಿದೆ ಎಂದರು. ಇದೇ ಅವರ ಕಡೆಯ ಸಾರ್ವಜನಿಕ ಸಂಭೋಧನೆಯಾಗಿತ್ತು.[೧೦]

ಹೆಡ್ಗೆವಾರ್ ಅವರು ಜೂನ್ ೨೧, ೧೯೪೦ರಲ್ಲಿ ನಾಗಪುರದಲ್ಲಿ ನಿಧನರಾದರು. ಅವರ ಅಂತಿಮ ಯಾತ್ರಯಲ್ಲಿ ಸಹಸ್ರಾರು ಜನ ಸೇರಿದ್ದರು. ಹಿತವಾದಿ, ಮರಾಠ, ಮಹಾರಾಷ್ಟ್ರ, ಕೇಸರಿ ಮುಂತಾದ ಪತ್ರಿಕೆಗಳಲ್ಲಿ ಅವರಿಗೆ ಶ್ರದ್ದಾಂಜಲಿ ಸಮರ್ಪಿಸಲಾಯಿತು. ಮಧ್ಯಪ್ರಾಂತ ಮತ್ತು ಮಹಾರಾಷ್ಟ್ರದ ಶಾಲಾ, ಕಾಲೇಜುಗಳಲ್ಲಿ "ಹೆಡ್ಗೆವಾರ್ ದಿನ" ಆಚರಿಸಲಾಯಿತು. ಸಾವರ್ಕರರು "ಹೆಡಗೇವಾರರು ವಿಧಿವಶ-ಹೆಡಗೇವಾರರು ಅಮರ"(Hedgewar is dead...Long live Hedgewar) ಅರ್ಥಪೂರ್ಣ ಲೇಖನ ಬರೆದರು[೧೧].

ಅವರ ಸಮಾಧಿ ಹೆಡಗೇವಾರ್ ಸ್ಮೃತಿ ಮಂದಿರ್‍ ನಾಗಪುರದ ರೇಶಿಮ್ ಭಾಗ್‍ನಲ್ಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆ[ಬದಲಾಯಿಸಿ]

೨೦೦೫ ಸುನಾಮಿ ಸಮಯದಲ್ಲಿ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡ ಸ್ವಯಂಸೇವಕರು

ದೇಶ ಅನುಭವಿಸಿದ ಅನೇಕ ಕಷ್ಟಕರ ಸನ್ನಿವೇಶಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘವು ಮಹತ್ವದ ಕಾಯಕಗಳನ್ನು ನಡೆಸಿವೆ. ಭಾರತದ ಪ್ರಮುಖ ಜನ ಸಮುದಾಯವಾದ ಹಿಂದೂಗಳಲ್ಲಿ ಜಾಗೃತಿಯನ್ನು ತಂದಿದೆ. ಇದು ಹೆಡ್ಗೆವಾರ್ ಅವರ ಚಿಂತನೆಗಳಿಂದ ಮೂಡಿದ್ದು ಎಂಬುದು ಮಹತ್ವದ್ದು. ಈ ಸಂಸ್ಥೆ ದೇಶಕ್ಕೆ ಉತ್ತಮ ಕಾರ್ಯಕರ್ತರನ್ನು, ಉತ್ತಮ ನೇತಾರರನ್ನು ಕೊಟ್ಟಿದೆ ಎಂಬುದು ಕೂಡಾ ಮಹತ್ವದ್ದೇ. ಅಂತೆಯೇ ದೇಶದಲ್ಲಿ ನಡೆದ ಹಲವು ಕ್ಷುದ್ರ ಘಟನೆಗಳ ಸಂದರ್ಭದಲ್ಲೂ ಆರ್ ಎಸ್ ಎಸ್ ಹೆಸರು ಪ್ರಸ್ತಾಪಗೊಂಡಿವೆ. ನಾವು ಆರ್ ಎಸ್ ಎಸ್ ಮೂಲದಿಂದ ಬಂದವರು ಎಂದು ಹೇಳಿಕೊಂಡವರು ಕೂಡಾ ಭ್ರಷ್ಟರಾಗಿರುವುದು ನಮ್ಮ ಕಣ್ಣೆದುರಿಗಿರುವ ದೃಷ್ಟಾಂತಗಳಾಗಿವೆ ಎಂಬುದು ಕೂಡಾ ನಿಜ. ಒಬ್ಬ ಮೌಲ್ಯಯುತ ವ್ಯಕ್ತಿ ನಿರ್ಮಿಸಿದ ಒಂದು ವ್ಯವಸ್ಥೆ ಅಪಮೌಲ್ಯಗೊಳ್ಳಬಲ್ಲದು ಎಂಬುದು ನಮ್ಮ ಬದುಕಿನ ಒಂದು ದುರದೃಷ್ಟ. ಆದರೆ ಆ ಮೌಲ್ಯವನ್ನು ಸೃಷ್ಟಿಸಿದ ಹಿರಿಮೆ ಎಂದೆಂದೂ ಪ್ರಕಾಶಿಸುವಂತದ್ದು.

ಉಲ್ಲೇಖಗಳು[ಬದಲಾಯಿಸಿ]

  1. "ಕೇಶವ ಬಲಿರಾಮ ಹೆಡಗೇವಾರ್". Archived from the original on 2020-08-09. Retrieved 2017-06-25.
  2. N.V.Subramanian (29 August 2012). "All in the Family". News Insight. Archived from the original on 2 ಏಪ್ರಿಲ್ 2015. Retrieved 25 ಜೂನ್ 2017.
  3. "Remembering RSS Founder Dr KB Hedgewar on his 123th Birthday on Yugadi". Archived from the original on 2018-04-28.
  4. Smyth, Douglas C. (1972). "The Social Basis of Militant Hindu Nationalism". The Journal of Developing Areas. 6 (3): 327. JSTOR 4189906.
  5. Goodrick-Clarke,, N. (2000). Hitler's Priestess: Savitri Devi, the Hindu-Aryan Myth, and Neo-Nazism. New York, NY: NYU Press. p. 58. ISBN 0-8147-3110-4.{{cite book}}: CS1 maint: extra punctuation (link)
  6. ಸಿನ್ಹಾ, ರಾಕೇಶ್. ಡಾ. ಕೇಶವ ಬಲಿರಾಮ್ ಹೆಡಗೇವಾರ್ (ಮೊದಲ ಮುದ್ರಣ, ೨೦೧೮ ed.). ಕಾಂಗ್ರೆಸ್ ಗೆ ಪ್ರವೇಶ: ಪ್ರಕಾಶನ ವಿಭಾಗ, ಸೂಚನಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. pp. ೩೬-೩೯. ISBN 9788123028149.
  7. ಸಿನ್ಹಾ, ರಾಕೇಶ್. ಡಾ. ಕೇಶವ ಬಲಿರಾಮ್ ಹೆಡಗೇವಾರ್ (ಮೊದಲ ಮುದ್ರಣ, ೨೦೧೮ ed.). ಕಾಂಗ್ರೆಸ್‍ಗೆ ಪ್ರವೇಶ: ಪ್ರಕಾಶನ ವಿಭಾಗ, ಸೂಚನಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. p. ೩೯. ISBN 9788123028149.
  8. ಸಿನ್ಹಾ, ರಾಕೇಶ್. ಡಾ. ಕೇಶವ ಬಲಿರಾಮ್ ಹೆಡಗೇವಾರ್ (ಮೊದಲ ಮುದ್ರಣ, ೨೦೧೮ ed.). ರಾಜದ್ರೋಹದ ಖಟ್ಲೆ: ಪ್ರಕಾಶನ ವಿಭಾಗ, ಸೂಚನಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. p. ೫೭. ISBN 9788123028149.
  9. ಸಿನ್ಹಾ, ರಾಕೇಶ್. ಡಾ. ಕೇಶವ ಬಲಿರಾಮ್ ಹೆಡಗೇವಾರ್ (ಮೊದಲ ಮುದ್ರಣ, ೨೦೧೮ ed.). ಸ್ವಾತಂತ್ರಯ ಹೋರಾಟ ಮತ್ತು ಡಾ. ಹೆಡ್ಗೆವಾರ್: ಪ್ರಕಾಶನ ವಿಭಾಗ, ಸೂಚನಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. p. ೯೯-೧೦೧. ISBN 9788123028149.
  10. ಸಿನ್ಹಾ, ರಾಕೇಶ್. ಡಾ. ಕೇಶವ ಬಲಿರಾಮ್ ಹೆಡಗೇವಾರ್ (ಮೊದಲ ಮುದ್ರಣ, ೨೦೧೮ ed.). ತತ್ವರೂಪಿ ಹೆಡಗೇವಾರ್: ಪ್ರಕಾಶನ ವಿಭಾಗ, ಸೂಚನಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. pp. ೨೨೭-೨೨೮. ISBN 9788123028149.
  11. ಸಿನ್ಹಾ, ರಾಕೇಶ್. ಡಾ. ಕೇಶವ ಬಲಿರಾಮ್ ಹೆಡಗೇವಾರ್ (ಮೊದಲ ಮುದ್ರಣ, ೨೦೧೮ ed.). ತತ್ವರೂಪಿ ಹೆಡಗೇವಾರ್: ಪ್ರಕಾಶನ ವಿಭಾಗ, ಸೂಚನಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ. pp. ೨೩೧-೨೩೩. ISBN 9788123028149.