ಕಸ್ತೂರಿ (ಮಾಸಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಸ್ತೂರಿ (ಮಾಸಪತ್ರಿಕೆ)
ಪ್ರಕಟಣೆ: ಹುಬ್ಬಳ್ಳಿ
ಈಗಿನ ಸಂಪಾದಕರು: ?
ಜಾಲತಾಣ: ಲಭ್ಯವಿಲ್ಲ
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು
ಕಸ್ತೂರಿಯ ಒಂದು ಹಳೆಯ ಸಂಚಿಕೆ

'ಕಸ್ತೂರಿ ಕನ್ನಡ ಡೈಜೆಸ್ಟ್'[ಬದಲಾಯಿಸಿ]

ಲೋಕ ಶಿಕ್ಷಣ ಟ್ರಸ್ಟ್ನ ವತಿಯಿಂದ ೧೯೫೬ ರಿಂದ ಆರಂಭವಾಗಿ, ಸತತವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ಮಾಸಪತ್ರಿಕೆ, ಕಸ್ತೂರಿ ಒಂದು ರೋಚಕವಾದ ಹಾಗೂ ಸುದೀರ್ಘ ಇತಿಹಾಸವನ್ನು ಹೊಂದಿದೆ. ೧೯೫೬ ರಲ್ಲಿ ೭-೮ ತಿಂಗಳ ಚಿಂತನೆಯ ಫಲಶೃತಿಯಾಗಿ, ೧೯೫೬ ನೇ ಇಸವಿ, ಸೆಪ್ಟೆಂಬರ್ ತಿಂಗಳಿನಲ್ಲಿ ಮಾಸಪತ್ರಿಕೆ ಜನ್ಮಿಸಿತು.

ಇಂಗ್ಲೀಷ್ ರೀಡರ್ಸ್ ಡೈಜೆಸ್ಟ್, ಮಾದರಿಯಲ್ಲಿ ಕಸ್ತೂರಿ ಕನ್ನಡ ಡೈಜೆಸ್ಟ್, ಆರಂಭ[ಬದಲಾಯಿಸಿ]

'Readers' Digest' ಪತ್ರಿಕೆಯ ಮಾದರಿಯ ವಿನ್ಯಾಸಗಳನ್ನು ಕನ್ನಡದ ಡೈಜೆಸ್ಟ್ ನಲ್ಲಿ ತರುವ ಹಂಬಲ, ಸಹಜವಾಗಿ ಅಂದಿನ ಜನನಕ್ಕೆ ಕಾರಣ. ಸಂಯುಕ್ತ ಕರ್ನಾಟಕ' ದಿನಪತ್ರಿಕೆ, ಜಾಬ್ ವಿಭಾಗದಲ್ಲಿ 'ಪಾ. ವೆಂ. ಆಚಾರ್ಯರು ರೀಡರ್ಸ್ ಡೈಜೆಸ್ಟ್ ಪತ್ರಿಕೆಯ ಅಭಿಮಾನಿ-ಓದುಗರಲ್ಲೊಬ್ಬರು. ಅದರ ವಿನ್ಯಾಸ, ಓದುಗರ ಆಸಕ್ತಿಗನುಗುಣವಾಗಿ ವಿಭಾಗಿಸಲ್ಪಟ್ಟ ಅತಿ ಎಚ್ಚರಿಕೆಯಿಂದ ಕಲ್ಪಿಸಿದ ಅಂಕಣಗಳು ಹಾಗೂ ಕೊನೆಯಲ್ಲಿ, 'ಪುಸ್ತಕವಿಭಾಗ,' ಅತಿ ಪ್ರಿಯವಾಗಿತ್ತು. 'ಜನಪ್ರಿಯ ಪೇಪರ್ ಬ್ಯಾಕ್' ಪುಸ್ತಕದ ಸಂಕ್ಷಿಪ್ತ ಭಾಗವನ್ನು ಪ್ರಕಟಿಸುತ್ತಿದ್ದರು. ಇಂತಹ ವಿಷಯಗಳನ್ನೊಳಗೊಂಡ ಸಚಿತ್ರ ಕನ್ನಡ ಪತ್ರಿಕೆಯನ್ನೇಕೆ ತರಬಾರದು ಎನ್ನುವ ತುಡಿತ ಮೊಳಕೆಯೊಡೆಯಿತು. ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ, ಸಂಸ್ಥೆಯ ಹಿರಿಯ ಅಧಿಕಾರಿಗಳ ಹತ್ತಿರ ತಮ್ಮ ಅಳಲನ್ನು ಹೇಳಿಕೊಂಡರು. ಈ ನಿಟ್ಟಿನಲ್ಲಿ ಆಗುವ ಸಾಧ-ಬಾಧಕಗಳ ನಿರಂತರ ವಿಚಾರ-ವಿನಿಮಯ, ಚರ್ಚೆಗಳ ನಂತರ, 'ಮೊಹರೆ ಹನುಮಂತರಾಯರು, ರಂಗನಾಥ ದಿವಾಕರ್, ರವರ ಮುಂದೆ ವಿಷಯವನ್ನು ಮಂಡಿಸಿದಾಗ, ಸಂತಸದಿಂದ ಒಪ್ಪಿಗೆ ಕೊಟ್ಟರು. ಡೈಜೆಸ್ಟ್ ಗೆ ಬೇಕಾದ ಸಹಾಯ ಸಹಕಾರಗಳನ್ನು ನೀಡಿದರು. ಅದರ ಪ್ರಕಟಣೆ ಶುರುವಾದಂದಿನಿಂದ ಯಾವತ್ತೂ ಸ್ಥಗಿತವಾಗದಂತೆ ನೋಡಿಕೊಳ್ಳುವ ಹೊಣೆಯ ಬಗ್ಗೆ ಅತಿಯಾದ ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗೆಗೆ ಚಿಂತನೆ ನಡೆಯಿತು. ಸೂಕ್ತವಾದ ಹೆಸರನ್ನು ಕೊಡುವ ವಿಚಾರಕ್ಕೆ ದಿನಪತ್ರಿಕೆಯಲ್ಲಿ ಜಾಹಿರಾತುಕೊಡುವ ವಿಚಾರ ಬಂತು. ಓದುಗರಿಗೆ ಹೆಸರು ಸೂಚಿಸಲು, ಮನವಿಮಾಡಿಕೊಂಡರು, ಅವರು ಸೂಚಿಸಿದ ಹೆಸರು, ಎಲ್ಲರಿಗೆ ಒಪ್ಪಿಗೆಯಾದಲ್ಲಿ ೫ ವರ್ಷಗಳ ಕಾಲ ಕನ್ನಡ ಡೈಜೆಸ್ಟ್ ಚಂದಾ, ಉಚಿತವೆಂದು ತಿಳಿಸಿದ ಆಸೆತೋರಿಸಿ, ಓದುಗರನ್ನು ಸೆಳೆಯುವ ಮನೋಭಾವವೂ ಇತ್ತು.

'ಕನ್ನಡ ಡೈಜೆಸ್ಟ್,' ನ ನಾಮಕರಣ[ಬದಲಾಯಿಸಿ]

ಪತ್ರಿಕೆಯ ಅಭಿಮಾನಿಗಳು, ಹಲವಾರು ಹೆಸರುಗಳನ್ನು ಸೂಚಿಸಿದರು. ಅದನ್ನು ಕುರಿತು ಚರ್ಚೆಗಳೂ ನಡೆದೆದವು. 'ಪರಾಗ' ಎಂಬ ಹೆಸರು ಮೊದಲು ಕೆಲವರಿಗೆ, ಹಿಡಿಸಿತು. ಕರ್ನಾಟಕ ವಿಶ್ವ-ವಿದ್ಯಾಲಯ ಆಡೀಟರ್, 'ಶ್ರೀ ಗಲಗಲಿ,' ಯವರು, ಈ ಹೆಸರಿಡುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರೇ ಒಂದುದಿನ, ಚರಿತ್ರೆಯಲ್ಲಿ ಅಕ್ಬರ್ ತನ್ನ ಮಗನ ಸಲುವಾಗಿ ಕಸ್ತೂರಿ ಹಂಚಿ, ಕಸ್ತೂರಿಯ ಪರಿಮಳದಂತೆ ಮಗನ ಕೀರ್ತಿ ಎಲ್ಲೆಡೆ ಪಸರಲೆಂದು ತಿಳಿಸಿದ ಪ್ರಸಂಗವನ್ನು ಓದಿದಾಗ ಅವರಿಗೆ ಈ ಉದ್ದೇಶ ಹಿಡಿಸಿತು. ತಕ್ಷಣ 'ಕಸ್ತೂರಿ,' ಯೆಂಬ ಹೆಸರನ್ನು ಇಡಲಾಯಿತು. ನಿಶ್ಚಯವಾಗಿ ರಾಜ್ಯದಲ್ಲೆಲ್ಲಾ ಪಸರಿಸುತ್ತದೆ. ಸಹೋದ್ಯೋಗಿಗಳಿಗೆಲ್ಲಾ ಆನಂದವಾಯಿತು. ಸಂಪಾದಕತ್ವದ ಜವಾಬ್ದಾರಿಯನ್ನು ಪಾ.ವೆಂ. ರವರಿಗೆ ವಹಿಸಿಕೊಡಲಾಯಿತು. ೧೯೫೬ ರ ಸೆಪ್ಟೆಂಬರ್ ಮಾಸಿಕ ಪತ್ರಿಕೆ, ಮೊದಲಬಾರಿ ಪ್ರಕಟವಾಯಿತು. ಜಿ. ಜಿ. ಹೆಗಡೆಯೆಂಬ ಉಪಸಂಪಾದಕರೂ ಇದಕ್ಕಾಗಿ ದುಡಿದರು. ಅವರಿಬ್ಬರೂ ಜೊತೆಯಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.

'ಪಾ. ವೆಂ', 'ದ. ಲ ಕೆರೂರ್,' ಮತ್ತು ಗೆಳೆಯರ ಕಠಿಣ-ಪರಿಶ್ರಮ, ಫಲಕಾರಿಯಾಯಿತು[ಬದಲಾಯಿಸಿ]

ಲೇಖಕರ, ಚಿತ್ರಕಲಾಕಾರರ, ಪಡಿಯಚ್ಚುಗಾರರ, ಸಹಾಯದ ಅಗತ್ಯತೆ ಹೆಚ್ಚಿತು. ಕೆಲಸಗಾರರ ನೇಮಕಾತಿ ನಡೆಯಿತು. ಆರಂಭದಲ್ಲಿ ಡೈಜೆಸ್ಟ್ ನ ಕೇವಲ ೨೫೦ ಪ್ರತಿಗಳು ಹೊರಬಂದವು. ೮ ಗಂಟೆ ಜಾಬ್ ನಲ್ಲಿ ಮುದ್ರಣಕಾರ್ಯ ವಿ. ವೈ. ಜಠಾರ ರವರ, ಸಮ್ಮುಖದಲ್ಲಿ, ನಡೆದಿತ್ತು. ಅಕ್ಷರ ಜೋಡಣೆ, ಕೆಲಸವನ್ನು ವೈ. ನಾರಾಯಣರಾವ್ ನೋಡಿಕೊಳ್ಳುತ್ತಿದ್ದರು. ಬೈಂಡಿಂಗ್ ನಂತರ, ಪ್ರತಿಗಳನ್ನು ಪ್ರಸಾರಾಂಗ ವಿಭಾಗಕ್ಕೆ ಸಲ್ಲಿಸುತ್ತಿದ್ದರು. ಸದಾಶಿವ ಎಂಬುವರು, ಡೈಜೆಸ್ಟ್ ನ ಮೊದಲ ಕಲಾವಿದರು. ಜಾರ್ಜ್, ಬಂಡಿವಾಡ, ಜೈನಾಪುರ, ಟಿ. ಕೆ. ರಾವ್, ಕೆ. ಬಿ. ಕುಲಕರ್ಣಿ, ಪಿ. ಆರ್. ಪಾಟೀಲ್, ಶಶಿಧರ್, ಮುಂತಾದ ಹಿರಿಯ ಕಲಾವಿದರು, ಡೈಜೆಸ್ಟ್ ನ ಸೇವೆಸಲ್ಲಿಸಿ, ಪ್ರತಿ ಸಂಚಿಕೆ ಅಂದವಾಗಿಯೂ ಪ್ರಕಟವಾಗುವಂತೆ, ಸಹಕರಿಸಿದರು. 'ಪ್ರಭಾತ್ ಸ್ಟುಡಿಯೊ', ಚಿತ್ರಗಳ ಬ್ಲಾಕ್ ತಯಾರಿಸಿ, ೩ ಬಣ್ಣಗಳ ಮುಖಪುಟ ಕವರ್ ನ್ನು ಬಾಂಬೆಯ ಕಲಾವಿದ ಎನ್. ಸಿ. ದೇಸಾಯ್, ಮಾಡಿಕಳಿಸಿಕೊಡುತ್ತಿದ್ದರು. ೩ ಬಣ್ಣ ಬಾಕ್ ಗಳ ಬೆಂಗಳೂರು, ಮದ್ರಾಸ್, ಬೊಂಬಾಯಿಗಳಲ್ಲಿ ಮಾತ್ರ ಮಾಡಲ್ಪಡುತ್ತಿದ್ದವು.

ಹೊಸ-ಮಾಸಪತ್ರಿಕೆಯ ಪ್ರಸಾರ ನಿಧಾನವಾಗಿ ಹೆಚ್ಚುತ್ತಾ ಬಂತು[ಬದಲಾಯಿಸಿ]

ಹೀಗೆ ಶುರುವಾದ ಕನ್ನಡ-ಕಸ್ತೂರಿಯ ಕಂಪು, ನಿಧಾನವಾಗಿ ಬೀರಲು ಆರಂಭಿಸಿತು. ಚೆಂದದ ಕಸ್ತೂರಿ, ಮುಂದೆ, ವರ್ಷದೊಪ್ಪತ್ತಿನಲ್ಲೇ ೧೬-೨೦ ಸಾವಿರ ಪ್ರತಿಗಳನ್ನು ಪ್ರಸಾರವಾಗಹತ್ತಿತು. ಓದುಗರು ಪ್ರತಿ ತಿಂಗಳೂ ಕಾದು ತಮ್ಮ ಪ್ರತಿಗಳನ್ನು ಓದುತ್ತಿದ್ದರು. ಪಾ. ವೆಂ. ರವರು, 'ಲಾಂಗೂಲಾಚಾರ್ಯ' ರೆಂಬ ಅಂಕಿತದಲ್ಲಿ ಬರೆದು ಪ್ರಸಿದ್ಧರಾದರು. ಪಿ. ವಿ. ಆಚಾರ್ಯ ನಂತರ, ದ. ಲ. ಕೆರೂರ ಸಂಪಾದಕರಾದರು. ಪ್ರತಿತಿಂಗಳ ಮೊದಲ ವಾರದಲ್ಲಿ ಓದುಗರು, ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಪ್ರಸಾರಸಂಖ್ಯೆ ೪೦ ಸಾವಿರಕ್ಕೆ ಚಿಮ್ಮಿತು. ಜನಪ್ರಿಯ ಡೈಜೆಸ್ಟ್ ಆಗಿ ರೂಪಿಸಿದವರು, ಪಾ.ವೆಂ.ಆಚಾರ್ಯ, ದ. ಲ. ಕೆರುರ, ಮಾ.ನಾ.ಮಹಿಷಿ, ಗೋಪಾಲ ವಾಜ್ಪೇಯಿ, ಶ್ರೀಕಾಂತ ಮಳಗಿ, ರವಿ ಬೆಳಗೆರೆ, ಮುಂತಾದ ಹಿರಿಯರು. ಪಾ. ವೆಂ ರಂತೂ ಅದರ ಜೀವನಾಡಿಯಾಗಿದ್ದರು.

ಕಸ್ತೂರಿ, ಇಂದಿಗೂ ಬೇರೆ ಪತ್ರಿಕೆಗಳ ಪೈಪೋಟಿಯ ಮಧ್ಯೆಯೂ, ಜೀವಿಸಿದೆ[ಬದಲಾಯಿಸಿ]

ಕಸ್ತೂರಿ ಪತ್ರಿಕೆಗೆ ಪ್ರತಿಸ್ಪರ್ಥಿ ಪತ್ರಿಕೆಗೆಳು ಆಗಲೇ ಶುರುವಾಗಿದ್ದವು. 'ಸಂಗಮ', ಕೈಲಾಸ, ಪಂಚಾಮೃತ, ಮುಂತಾದ ಪತ್ರಿಕೆಗಳು, ದೀರ್ಘಕಾಲ ಓಡಲಿಲ್ಲ. ಈಗಂತೂ ಬೇರೆಬೇರೆ ಪತ್ರಿಕೆಗಳಿದ್ದಾಗ್ಯೂ ಕಸ್ತೂರಿ ಇಂದಿಗೂ ತನ್ನದೇ ಆದ ಪರಿಮಳ ಹಾಗೂ ಓದುಗ ವೃಂದವನ್ನು ಹೊಂದಿದೆ. ೨೦೦೬ ರ ಸೆಪ್ಟೆಂಬರ್, ತನ್ನ 'ಸುವರ್ಣೋತ್ಸವ,' ವನ್ನು ಆಚರಿಸಿಕೊಂಡಿತು. ಕಸ್ತೂರಿಯ ನಿರಂತರ ಸೇವೆಗೆ, ಪರಿವಾರದವರೆಲ್ಲಾ ಒಟ್ಟಾಗಿ ಕುಳಿತು ಓದುವ ಗುಣಮಟ್ಟದ ಲೇಖನಗಳೇ ಅದರ ಉಳಿವಿನ ಗುಟ್ಟು ಆಗಿರಬಹುದು.

ಉಲ್ಲೇಖಗಳು[ಬದಲಾಯಿಸಿ]