ಕರ್ಮವೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಯುಕ್ತ ಕರ್ನಾಟಕ ಬಳಗಕ್ಕೆ ಸೇರಿದ ಕರ್ಮವೀರ ವಾರಪತ್ರಿಕೆಯ ಜನನ ೧೯೨೧ರ ಫೆಬ್ರುವರಿ ೧೫ ರಂದು ಧಾರವಾಡದಲ್ಲಾಯಿತು.ದಿವಾಕರ ರಂಗನಾಥರಾಯರು,ಹುಕ್ಕೇರಿಕರರು ಈ ವಾರಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರಾಭಿಮಾನಿ ಲೇಖನಗಳಿಂದ ಸರ್ಕಾರದ ಕಾಕದೃಷ್ಟಿಗೆ ಗುರಿಯಾದರೂ,೧೯೪೨ ರವರೆಗೆ ಕುಂಟುತ್ತಾ ಪತ್ರಿಕೆ ನಡೆದುಕೊಂಡು ಬಂತು. ನಂತರದಲ್ಲಿ ಡಿ.ವಿ.ಜಿ., ಕಾರ್ನಾಡ ಸದಾಶಿವರಾವ್ ಮೊದಲಾದವರ ಸಹಕಾರ ಹಾಗು ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಮುಂದುವರೆದು, ಕರ್ನಾಟಕ ಸ್ಥಾಪನೆಯ ಆಂದೋಲನದ ಪ್ರಸಾರಕ್ಕೆ ಬೆಂಬಲ ನೀಡಿತು.

ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ[ಬದಲಾಯಿಸಿ]

  • ರಾಷ್ಟ್ರದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣಗಳು ಆಗ ಪತ್ರಿಕೆಯ ಮುಖ್ಯ ಧ್ಯೇಯಗಳು. ರಂಗನಾಥ ರಾಮಚಂದ್ರ ದಿವಾಕರ, ರಾಮರಾವ್ ಹುಕ್ಕೇರಿಕರ ಮತ್ತು ಕಬ್ಬೂರ ಮಧ್ವರಾಯರು ಸಂಸ್ಥಾಪಕರು. ಪ್ರಾರಂಭದಲ್ಲಿ ದಿವಾಕರರು ಸಂಪಾದಕರಾಗಿಯೂ ಹುಕ್ಕೇರಿಕರರು ಪ್ರಕಾಶಕ ರಾಗಿಯೂ ಮಧ್ವರಾಯರು ಮುದ್ರಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿದ್ದ ದಿವಾಕರರು ಸರ್ಕಾರದಿಂದ ಬಂಧನಕ್ಕೊಳಗಾದಾಗ ಹುಕ್ಕೇರಿಕರ್ ರಾಮರಾಯರು ಮತ್ತು ಆಲೂರ ವೆಂಕಟರಾಯರು ಸಂಪಾದಕರಾಗಿ ಕೆಲಸ ನಿರ್ವಹಿಸಿದರು.
  • ಪತ್ರಿಕೆ ಪ್ರಾರಂಭವಾದ ಮೂರು ತಿಂಗಳುಗಳಾಗುವಷ್ಟರಲ್ಲಿ ಧಾರವಾಡದ ಕಲೆಕ್ಟರರ ಗಮನ ಸೆಳೆಯಿತು. ಆಲೂರ ವೆಂಕಟರಾಯರು ಬರೆದ ಭೂರಕ್ಕಸಾಯ ಸ್ವಾಹಾ ಎಂಬ ಅಗ್ರ ಲೇಖನ ಆಗಿನ ಸರ್ಕಾರವನ್ನು ಇನ್ನಷ್ಟು ಕೆರಳಿಸಿತು. ಲಾವಣಿಯೊಂದನ್ನು ಮುದ್ರಿಸಿದ್ದಕ್ಕೆ ದಿವಾಕರರು ಶಿಕ್ಷೆ ಅನುಭವಿಸಿದರು. ೧೯೩೨ರಲ್ಲಿ ಕೆಲಕಾಲ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ೧೯೩೫ರಲ್ಲಿ ಇದು ಮತ್ತೆ ಪ್ರಾರಂಭವಾದರೂ ಕೆಲವು ತಿಂಗಳು ನಡೆದು ಅನಂತರ ಸರ್ಕಾರದ ಅವಕೃಪೆಗೆ ಈಡಾಗಿ ಮತ್ತೆ ಇದರ ಪ್ರಕಟಣೆ ನಿಂತಿತು.

ಪುನಃ ಆರಂಭವಾದದ್ದು[ಬದಲಾಯಿಸಿ]

  • ಪತ್ರಿಕೆಯ ಪ್ರಕಟಣೆ ಪುನಃ ಆರಂಭವಾದದ್ದು ೧೯೪೦ರಲ್ಲಿ. ಹ.ರಾ. ಪುರೋಹಿತರು ಸಂಪಾದಕರಾಗಿ ಇದರ ಏಳ್ಗೆಗೆ ತುಂಬ ಶ್ರಮಿಸಿದರು. ೧೯೬೮ರಲ್ಲಿ ಇವರು ನಿವೃತ್ತರಾದಾಗ ದಿವಾಕರ ರಂಗರಾಯರು ಮತ್ತೆ ಇದರ ಸಂಪಾದಕತ್ವ ವಹಿಸಿಕೊಂಡರು. ಮೊಹರೆ ಹಣಮಂತರಾಯರು ಮುದ್ರಕ ಪ್ರಕಾಶಕರಾಗಿ ಈ ಪತ್ರಿಕೆಯ ಬೆಳೆವಣಿಗೆಗೆ ಬಹಳ ದುಡಿದರು. ಸ್ವತಃ ಅನೇಕ ದಿಟ್ಟ ಲೇಖನಗಳನ್ನು ಬರೆದರು. ಪ್ರಾರಂಭದಲ್ಲಿ ರಾಷ್ಟ್ರೀಯ ಜಾಗೃತಿಗಾಗಿ ಶ್ರಮಿಸಿದ ಈ ಪತ್ರಿಕೆಯಲ್ಲಿ ಆಗ ಅನೇಕ ವೀರ್ಯವತ್ತಾದ ಲೇಖನಗಳು ಪ್ರಕಟವಾದುವು.
  • ಶಂ.ಬಾ. ಜೋಶಿ, ನಾರಾಯಣ ಶರ್ಮ, ಮಿರ್ಜಿ ಮೊದಲಾದವರು ಆ ಕಾಲದ ಕೆಲವು ಲೇಖಕರು. ಪತ್ರಿಕೆಯ ಪ್ರಕಟಣೆಯನ್ನು ಪುನಃ ಪ್ರಾರಂಭಿಸಿದ ಅನಂತರವೂ ಇದರ ರಾಷ್ಟ್ರಾಭಿಮಾನ ಮುಂದುವರಿಯಿತು. ಜೊತೆಗೆ ಜನತೆಯ ಜ್ಞಾನಭಂಡಾರ ಬೆಳೆಸುವ ಮೇಲ್ಮಟ್ಟದ ಸಾಪ್ತಾಹಿಕ ಪತ್ರಿಕೆಯಾಗಿಯೂ ಇದು ಕಾರ್ಯನಿರ್ವಹಿಸಲಾರಂಭಿಸಿತು. ಮಧ್ಯದಲ್ಲಿ ಕೆಲಕಾಲ ಗಾಂಧಿಯವರ ಹರಿಜನ ಪುರವಣಿಯನ್ನು ಕನ್ನಡದಲ್ಲಿ ಪ್ರಕಟಿಸಲಾಗುತ್ತಿತ್ತು.
  • ಎಳೆಯರ ಬಳಗ, ಮಹಿಳಾ ಪ್ರಪಂಚ ಮೊದಲಾದ ವಿಭಾಗಗಳನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ್ದು ಈ ಪತ್ರಿಕೆ, ವೈಚಾರಿಕ ಸಾಹಿತ್ಯ, ಪ್ರಯೋಗಶೀಲತೆ-ಇವು ಇದರ ಇತರ ವೈಶಿಷ್ಟ್ಯಗಳು. ದೀಪಾವಳಿ ಸಂಚಿಕೆಗಳಲ್ಲಿ ಸಾಹಿತ್ಯ, ಧರ್ಮ, ವಿಜ್ಞಾನ, ಅರ್ಥಶಾಸ್ತ್ರಗಳನ್ನು ಕುರಿತ ವೈಚಾರಿಕ ಅಭ್ಯಾಸಪೂರ್ಣ ಲೇಖನಗಳನ್ನು ಪ್ರಕಟಿಸುವುದರೊಂದಿಗೆ, ವಿಚಾರಸಂಕಿರಣ, ವಿವಿಧಭಾಷಾ ಸಾಹಿತ್ಯಗಳ ಪರಿಚಯ, ವಿವಿಧ ಸಮಸ್ಯೆಗಳನ್ನು ಕುರಿತ ಚರ್ಚೆ-ಹೀಗೆ ಒಂದೊಂದು ವರ್ಷ ಒಂದೊಂದು ಹೊಸ ಹೆಜ್ಜೆ ಹಾಕುತ್ತಿದೆ.
  • ಧಾರ್ಮಿಕ ಧುರೀಣರ, ಸಮಾಜಸೇವಕರ, ಹಿರಿಯ ಸಾಹಿತಿಗಳೇ ಮುಂತಾದವರ ವಿಶೇಷ ಸಂದರ್ಶನಗಳ ಪ್ರಕಟಣೆ ಪತ್ರಿಕೆಯ ಇನ್ನೊಂದು ವೈಶಿಷ್ಟ್ಯ. ಈಚೆಗೆ ನಾಡಿನ ಮಹಾಪುರುಷರು ಮತ್ತು ಹಿರಿಯ ಸಾಹಿತಿಗಳನ್ನು ಕುರಿತು ವಿಶೇಷ ಸಂಚಿಕೆಗಳನ್ನು ಪ್ರಕಟಿಸುವ ಕ್ರಮವನ್ನು ಪ್ರ ಪ್ರಥಮ ವಾಗಿ ಪ್ರಾರಂಭಿಸಿದೆ. ಹಿರಿಯರು, ಕಿರಿಯರು, ಗೃಹಿಣಿಯರು ಹೀಗೆ ಎಲ್ಲರಿಗೂ ಬೇಕಾದ ಸಚಿತ್ರ ಕೌಟುಂಬಿಕ ಪತ್ರಿಕೆಯೆನಿಸಿದೆ.
  • ಸ್ವಲ್ಪಕಾಲ ಸ್ಥಗಿತಗೊಂಡಿದ್ದ ಕಿರೀಟ ಚೌಪತ್ರ ಆಕಾರದ ಈ ಪತ್ರಿಕೆಗೆ ಎರಡು ಬಾರಿ ಜೀವದಾನವಾಗಿತ್ತು. ೧೯೯೨ರಲ್ಲಿ ಮತ್ತೆ ಪ್ರಕಟಣೆಗೆ ಪ್ರಾರಂಭಿಸಿದ ಬಳಿಕ ಗರುಡನಗಿರಿ ನಾಗರಾಜ್ ಅವರು ಹೊಣೆ ನಿರ್ವಹಿಸಿದ್ದರು. ಅನಂತರ ಸಂಪಾದಕರು ಸಾಹಿತಿ ಬಾಬುಕೃಷ್ಣಮೂರ್ತಿ. ೮೫ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಾರಪತ್ರಿಕೆ ಕರ್ಮವೀರ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕರ್ಮವೀರ&oldid=1047410" ಇಂದ ಪಡೆಯಲ್ಪಟ್ಟಿದೆ