ಎಸ್.ಜಾನಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಸ್. ಜಾನಕಿ

ಜಾನಕಿಯವರ ೨೦೦೭ರ ವರ್ಷದ ಚಿತ್ರ
ಜನನ ಏಪ್ರಿಲ್ ೨೩, ೧೯೩೮
ಗುಂಟೂರು ಜಿಲ್ಲೆಯ ರೇಪಲ್ಲೆ
ವೃತ್ತಿ ಚಲನಚಿತ್ರ ಹಿನ್ನೆಲೆ ಗಾಯಕಿ
ಸಕ್ರಿಯ ವರ್ಷಗಳು ೧೯೫೭–ಪ್ರಸಕ್ತದವರೆಗೆ

ಎಸ್. ಜಾನಕಿ (ಏಪ್ರಿಲ್ ೨೩, ೧೯೩೮) ಭಾರತದ ಮಹಾನ್ ಚಲನಚಿತ್ರ ಹಿನ್ನೆಲೆ ಗಾಯಕಿ.

ಪರಿವಿಡಿ

ಜೀವನ [ಬದಲಾಯಿಸಿ]

ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ೨೩ನೇ ಏಪ್ರಿಲ್ ೧೯೩೮ರ ವರ್ಷದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ, ತೆಲುಗು ಬ್ರಾಹ್ಮಣೀಯ ಕುಟುಂಬವೊಂದರಲ್ಲಿ ಜನಿಸಿದರು. ತಮ್ಮ ಮೂರನೆಯ ವಯಸ್ಸಿನಲ್ಲೇ ಸಂಗೀತಗಾರ್ತಿಯ ಸಕಲ ಸುಲಕ್ಷಣಗಳನ್ನೂ ಹೊರಹೊಮ್ಮಿಸಿದ ಬಾಲಕಿ ಜಾನಕಿ, ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.

೧೯೫೬ರ ವರ್ಷದಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ ಜಾನಕಿ, ಮುಂದೆ ಚೆನ್ನೈಗೆ ಬಂದು ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಅವರ ‘ರಸಿಕ್ ಬಲಮಾ’ ಎಂಬ ಸುಪ್ರಸಿದ್ಧ ಗೀತೆಯನ್ನು ಮನೋಜ್ಞವಾಗಿ ಹಾಡಿ ಪ್ರಸಿದ್ಧ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದರು.

ಚಲನಚಿತ್ರ ರಂಗದ ಪ್ರಾರಂಭದ ವರ್ಷಗಳು [ಬದಲಾಯಿಸಿ]

೧೯೫೭ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದು ಎಂದು ಹರಿದು ಬರಲು ಪ್ರಾರಂಭವಾದವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದರು. ಜೊತೆಗೆ ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯವನ್ನು ಬಿತ್ತರಿಸಿದರು.

ತಮಿಳಿನಲ್ಲಿ ೧೯೫೮ರ ಸುಮಾರಿನಲ್ಲಿ ಅವರು ಹಾಡಿದ ‘ಸಿಂಗಾರವೇಲನೆ ದೇವ’ ಎಂಬ ಮಹಾನ್ ನಾದಸ್ವರ ವಿದ್ವಾನ್ ಅರುಣಾಚಲಂ ಅವರ ನಾದಸ್ವರದೊಂದಿಗೆ ಮೇಳೈಸಿ ಹಾಡಿದ ಗೀತೆ ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ದೇಶ ಗುರುತಿಸುವಂತೆ ಮಾಡಿತು. ಆ ನಂತರದಲ್ಲಿ ಅವರು ಹಾಡಿರುವ ಗೀತೆಗಳ ಸಂಖ್ಯೆ ೨೦,೦೦೦ವನ್ನು ಮೀರಿದೆ.

ನಾನು ಹಾಡುವುದೇ ಇಲ್ಲ! ಆತನ ಕಾಯಕವದು [ಬದಲಾಯಿಸಿ]

ಒಮ್ಮೆ ಒಂದು ಸಂದರ್ಶನದಲ್ಲಿ ಅವರೊಂದಿಗೆ ಬಹಳಷ್ಟು ವರ್ಷಗಳವರೆಗೆ ಹಾಡುತ್ತ ಬಂದಿರುವ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಹೇಳುತ್ತಿದ್ದರು, “ನಮ್ಮ ಜಾನಕಮ್ಮ ಇದ್ದಾರಲ್ಲ ಅವರು ಯಾವುದೇ ಗೀತೆಯನ್ನಾಗಲೀ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ, ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾನಲಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ ಇದೆಯೆಲ್ಲಾ ಅದೊಂದು ಅಸಾಮಾನ್ಯವಾದ ಸಂಗತಿ”. ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು, ಬಿಮ್ಮುಗಳ, ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡಾ ಅವರು ಮಾಡುವುದಿಲ್ಲ ಎಂಬ ಪ್ರತೀತಿ ಇದೆ. ಎಸ್. ಜಾನಕಿ ಹೇಳುತ್ತಾರೆ ‘ನಾನು ಯಾವುದೇ ವಿಶೇಷ ತಯಾರಿಯನ್ನಾಗಲೀ ಆರೈಕೆಯನ್ನಾಗಲಿ ನನ್ನ ಧ್ವನಿಗೆ ಮಾಡಿಕೊಳ್ಳುವುದಿಲ್ಲ.” ಅವರು ಹೇಳುವ ಮತ್ತೊಂದು ಮಾತು ಅವರ ಎಲ್ಲಾ ಸಾಧನೆಗಳ ಗುಟ್ಟು. ಪರಮಾತ್ಮ ಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಭಕ್ತರಾದ ಆಕೆ ಕೇಳುತ್ತಾರೆ “ನಾನು ಹೇಗೆ ಹಾಡುತ್ತೇನೆ ಗೊತ್ತೇ?” , “ಸತ್ಯ ಹೇಳಬೇಕೆಂದರೆ, ನಾನು ಹಾಡುವುದೇ ಇಲ್ಲ. ಶ್ರೀಕೃಷ್ಣ, ಆ ನನ್ನಂತರಂಗದ ದೈವನಾದ ಆತನ ಕಾಯಕವದು”.

ಮನಮೋಹಕ ಗೀತೆಗಳು [ಬದಲಾಯಿಸಿ]

ಎಸ್. ಜಾನಕಿ ಅವರ ಬಗ್ಗೆ ಹೇಳಬೇಕೆಂದರೆ ಮಹಾಸಾಗರದ ಆಳವನ್ನು ಅರಸಹೊರಟಂತೆ. ಅವರ ಹಾಡುಗಳ ಬಗ್ಗೆ ಹೇಳುವಾಗ ಈ ಕ್ಷಣಕ್ಕೆ ಬಂದ ನೆನಪುಗಳನ್ನು ಹೇಳಬಹುದೇ ವಿನಃ ಅವರು ಹಾಡಿರುವ ಶ್ರೇಷ್ಠ ಗೀತೆಗಳ ಒಂದು ಸಣ್ಣ ಅಳತೆಯನ್ನು ಕೂಡಾ ನಾವು ಕ್ರಮಿಸಲಾರೆವೇನೋ. ‘ನೋಡು ಬಾ ನೋಡು ಬಾ ನಮ್ಮೂರ’, 'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ', 'ಯುಗ ಯುಗಾದಿ ಕಳೆದರೂ', ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’, ‘ದೋಣಿ ಸಾಗಲಿ ಮುಂದೆ ಹೋಗಲಿ', 'ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ’, ‘ಜಯಗೌರಿ ಜಗದೀಶ್ವರಿ’, 'ಆಡೋಣ ಬಾ ಬಾ ಗೋಪಾಲ', ‘ನಂಬಿದೆ ನಿನ್ನ ನಾದ ದೇವತೆಯೇ ಅಭಿಮಾನ ತಳೆದ ತಾಯೆ ಭಾರತಿಯೇ’, ‘ಭಾರತ ಭೂಷಿರ ಮಂದಿರ ಸುಂದರಿ’, 'ಶರಣು ವಿರೂಪಾಕ್ಷ ಶಶಿಶೇಖರ', ‘ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ’, ‘ಬಾನಲ್ಲು ನೀನೆ ಭುವಿಯಲ್ಲು ನೀನೆ’, ‘ಬಿಸಿಲಾದರೇನು ಮಳೆಯಾದರೇನು’, ‘ಪೋಗದಿರೆಲೋ ರಂಗ’, ‘ಕರೆಯೇ ಕೋಗಿಲೆ ಮಾಧವನ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’, 'ಪಂಚಮವೇದ ಪ್ರೇಮದ ನಾದ', ‘ನಾ ಮೆಚ್ಚಿದ ಹುಡುಗನಿಗೆ’, ‘ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ’, ‘ಕಂಗಳು ತುಂಬಿರಲು ಕಂಬನಿಧಾರೆ’, ‘ತುಂಬಿತು ಮನವಾ ತಂದಿತು ಸುಖವಾ’, ‘ಪೂಜಿಸಲೆಂದೇ ಹೂಗಳ ತಂದೆ’, ‘ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ’, ‘ದೇವರ ಆಟ ಬಲ್ಲವರಾರು’, ‘ಹೂವೊಂದು ಬೇಕು ಬಳ್ಳಿಗೆ’, ‘ರಾಘವೇಂದ್ರ ನೀ ಮೌನವಾದರೆ ನನ್ನ ಗತಿ ಏನು’ ಹೀಗೆ ಹೇಳುತ್ತಾ ಹೋಗಬಹುದು. ಹೇಮಾವತಿ ಚಿತ್ರದ ಶಿವಶಿವ ಎನ್ನದ ನಾಲಿಗೆಯೇಕೆ ಎಂಬ ಹಾಡು ಅವರಿಗೆ ಅತ್ಯಂತ ಛಾಲೆಂಜಿಂಗ್ ಹಾಡು ಎಂದು ಅವರು ಬಹಳಷ್ಟು ಕಡೆ ಹೇಳಿರುವುದನ್ನು ಓದಿದ್ದೇನೆ. (ಗಾಯಕಿಯಾಗಿ ಆ ಹಾಡಿನಲ್ಲಿ ಅವರ ಪ್ರತಿಭೆ ಅನನ್ಯ ಎನಿಸಿದರೂ ಕೇಳುಗನ ದೃಷ್ಟಿಯಲ್ಲಿ ಯಾಕೋ ಅದೊಂದು ಸಂಗೀತದ ಸರ್ಕಸ್ ತರಹದಲ್ಲಿದೆ ಎಂಬ ಕಾರಣಕ್ಕಾಗಿ ವೈಯಕ್ತಿಕವಾಗಿ ನನಗೆ ಆ ಹಾಡು ಖುಷಿ ಕೊಡುವುದಿಲ್ಲ.). ಅವರು ಹಾಡಿರುವ ಭಕ್ತಿಗೀತೆಗಳು ಅನೇಕವಾಗಿದ್ದು 'ಗಜಮುಖನೆ ಗಣಪತಿಯೇ' , ‘ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ’, ‘ಇವಳೇ ವೀಣಾಪಾಣಿ’ ಮುಂತಾದ ಹಾಡುಗಳಂತೂ ಎಲ್ಲೆಲ್ಲೂ ತುಂಬಿತುಳುಕಿದೆ.

ಯುಗಳ ಗೀತೆಗಳಲ್ಲಿ ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಎಂದು ಹಾಡುವಾಗ ‘ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರ’ ಎಂದು ಅವರು ಹಾಡಿರುವ ದಾಟಿ ನನ್ನನ್ನು ಅತೀವವಾಗಿ ಸೆಳೆದಿದೆ. ಪಿ.ಬಿ.ಎಸ್ ಅವರೊಂದಿಗೆ ಕನ್ಯಾರತ್ನ ಚಿತ್ರದಲ್ಲಿ 'ಸುವ್ವಿ ಸುವ್ವಿ ಸುವ್ವಾಲೆ, ಹೊಂಬಿಸಲು ಚಿತ್ರದ ‘ಜೀವ ವೀಣೆ ನೀಡು ಮಿಡಿತದ ಸಂಗೀತ’, ಗಂಧದ ಗುಡಿ ಚಿತ್ರದಲ್ಲಿ ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯಂತೆ ‘ಎಲ್ಲೂ ಹೋಗೋಲ್ಲಾ ಮಾಮ’ ಎಂದು ಹಾಡುವ ಧಾಟಿ, ದೇವರಗುಡಿಯ ‘ಕಣ್ಣು ಕಣ್ಣು ಒಂದಾಯಿತು’, ಮುಗಿಯದ ಕಥೆ ಚಿತ್ರದ ‘ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ’, ಧರ್ಮಸೆರೆ ಚಿತ್ರದ 'ಈ ಸಂಭಾಷಣೆ', ಹುಡುಗಾಟದ ಹುಡುಗಿ ಚಿತ್ರದ 'ಬೆಳ್ಳಿಯ ತೆರೆಯ ಮೋಡದ ಮರೆಯ', ವಾಣಿ ಜಯರಾಂ ಅವರ ಜೊತೆಯಲ್ಲಿ ವಿಜಯವಾಣಿ ಚಿತ್ರದ 'ಮಧುಮಾಸ ಚಂದ್ರಮ', ರಾಜ್ ಅವರ ಜೊತೆಯಲ್ಲಿ ಶ್ರೀನಿವಾಸ ಕಲ್ಯಾಣದ 'ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ' ಹೀಗೆ ಅವರ ನೂರಾರು ಸುಂದರ ಸುಶ್ರಾವ್ಯ ಹಾಡುಗಳಿವೆ. ಇತರ ಭಾಷೆಗಳಲ್ಲಿರುವ ನನ್ನ ಅಲ್ಪ ಜ್ಞಾನದಲ್ಲಿ ಕೂಡಾ ಪದಿನಾರು ವಯದಿನಿಲೆ ಚಿತ್ರದ ‘ಸಿಂಧೂರ ಪೂವೆ’, ಶಂಕರಾಭರಣಂ ಚಿತ್ರದ ‘ಸಾಮಾಜವರಗಮನ’, ‘ಶಂಕರಾಭರಣಮು’; ಸಾಗರಸಂಗಮಂ ಚಿತ್ರದ ‘ಬಾಲಕನಕಮಯ ಚೇಲ ಸುಜನಪರಿಪಾಲ’, ‘ಓಂ ನಮಃಶಿವಾಯ ಚಂದ್ರಕಳಾಧರ ಸಹೃದಯ’ ಇವೆಲ್ಲಾ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿರುವ ಹಾಡುಗಳು.

ವಾದ್ಯ ನಾದದೊಡನೆ ಗಾನ ಮೆಳೈಕೆ [ಬದಲಾಯಿಸಿ]

ತಮಿಳಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಂದಿಗೆ ತಮ್ಮ ಸ್ವರ ಮೇಳೈಸಿ ಅದ್ಭತವಾಗಿ ಮೂಡಿಸಿದ ಸಿಂಗಾರವೇಲನೆ ದೇವ ಹಾಡಿನಂತೆ,, ಕನ್ನಡದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜೊತೆ ತಮ್ಮ ಗಾನವನ್ನು ಮೇಳೈಸಿ ಹೊರತಂದ ‘ಕರೆದರು ಕೇಳದೆ’ ಗೀತೆ ಕೂಡಾ ಒಂದು ಅಪೂರ್ವ ಗಾಯನವೇ ಸರಿ. ಇಂತಹದ್ದೇ ರೀತಿಯಲ್ಲಿ ಎಸ್ ಜಾನಕಿ ಅವರು ಎಂ. ಎಸ್. ಗೋಪಾಲಕೃಷ್ಣನ್ ಅವರ ಪಿಟೀಲು ವಾದನ, ನಾಮಗಿರಿ ಪೇಟೆ ಕೃಷ್ಣನ್ ನಾದಸ್ವರ ಮತ್ತು ಹರಿಪ್ರಸಾದ್ ಚೌರಾಸಿಯಾ ಅವರ ವೇಣುವಾದನದ ಜೊತೆ ಕೂಡಾ ತಮ್ಮ ಗಾನ ಮಾಧುರ್ಯವನ್ನು ಮೇಳೈಸಿದ್ದಾರೆ.

ಪ್ರಶಸ್ತಿ ಗೌರವಗಳು [ಬದಲಾಯಿಸಿ]

ಎಸ್. ಜಾನಕಿ ಅವರಿಗೆ ಹಲವು ರಾಷ್ಟ್ರಪ್ರಶಸ್ತಿಗಳು, ವಿವಿಧ ರಾಜ್ಯಗಳ ಗೌರವಗಳು ಸಂದಿವೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಹೊರರಾಜ್ಯಗಳ ಗಾಯಕರು ಹಾಡಿದ ಹಾಡಿಗೆ ಪ್ರಶಸ್ತಿ ನೀಡುವುದಿಲ್ಲ ಎಂಬ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಎಸ್. ಜಾನಕಿ, ಎಸ್. ಪಿ. ಬಿ, ಪಿ.ಬಿ.ಎಸ್, ಪಿ. ಸುಶೀಲ, ವಾಣಿ ಜಯರಾಂ ಇಂತಹ ಮಹಾನ್ ಗಾಯಕರಿಗೆ ಅವರ ಉತ್ತಮ ಹಾಡುಗಳಿಗೆ ಪ್ರಶಸ್ತಿ ಈ ರಾಜ್ಯದಲ್ಲಿ ಬಂದಿಲ್ಲ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ಶ್ರೇಷ್ಠ ಪದ್ಧತಿಯಾದರೂ, ಶ್ರೇಷ್ಠ ಗಾಯಕರನ್ನು ಕರೆದು ಹಾಡಿಸಿದ ಮೇಲೆ ಅವರ ಶ್ರೇಷ್ಠ ಪ್ರತಿಭೆಯ ಹಾಡುಗಳ ಮುಂದೆ ನಮ್ಮವರನ್ನು ಹಾಡಿಸಿರುವ ಕ್ಷೀಣ ಗೀತೆಗಳಿಗೆ ಪ್ರಶಸ್ತಿ ಕೊಟ್ಟಿರುವುದು ಪ್ರಶಸ್ತಿ ಪಡೆದವರಿಗೂ ಅಂತಹ ಶ್ರೇಯಸ್ಸನ್ನು ನೀಡುವಂತದಾಗಿರುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಎಸ್. ಜಾನಕಿ ಅವರು ಕೂಡಾ ಈ ಕುರಿತಾದ ನೀತಿ ಕಲಾವಿದರಿಗೆ ಅಗೌರವ ಎಂದು ಭಾವನೆ ವ್ಯಕ್ತಪಡಿಸಿದ್ದುಂಟು. ಆದರೆ ಎಸ್. ಜಾನಕಿ ಅವರು ಪ್ರಶಸ್ತಿಗಳನ್ನು ಮೀರಿದ ಕಲಾವಿದೆ. ಇದನ್ನು ಅರಿತ ಕನ್ನಡ ನಾಡಿನ ಪ್ರಮುಖ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಇತ್ತು ಸನ್ಮಾನಿಸಿದೆ.

ಇತ್ತೀಚೆಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ, ಎಸ್. ಜಾನಕಿಯವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದರು. ಎಸ್. ಜಾನಕಿ ಅವರ ಈ ವಾದದಲ್ಲಿ ಹುರುಳಿಲ್ಲದೆ ಇಲ್ಲ. ಇತ್ತೀಚೆಗೆ ೮೪ ವರ್ಷದ ವಯಸ್ಸಿನಲ್ಲಿ ನಿಧನರಾದ ಪಿ. ಬಿ. ಶ್ರೀನಿವಾಸರಿಗೆ ಯಾವುದೇ ಪದ್ಮ ಪ್ರಶಸ್ತಿ ಸಂದಿಲ್ಲ, ಇಲ್ಲಿನ ಅನೇಕ ಪ್ರಸಿದ್ಧ ಕಲಾವಂತರಿಗೆ ಈ ಪ್ರಶಸ್ತಿ ಸಂದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ನಿಟ್ಟಿನಲ್ಲಿ ಎಸ್. ಜಾನಕಿ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಈ ಪ್ರಶಸ್ತಿಗಳನ್ನು ಮೀರಿದ ಹೆಚ್ಚಿನ ಆರಾಧನಾ ಭಾವವನ್ನು ತಂದಿದೆ.

ಮಹಾನ್ ಗಾಯಕಿ [ಬದಲಾಯಿಸಿ]

ಎಸ್. ಜಾನಕಿ ಅಂತಹ ಮಹಾನ್ ಗಾಯಕರು ಎಷ್ಟು ವರ್ಷ ಹಾಡುತ್ತಿದ್ದರೂ ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಇದೀಗ ೭೫ ವಸಂತಗಳನ್ನು ಕಳೆದಿರುವ ಅವರು, ಈ ಹಿರಿಯ ವಯಸ್ಸಿನಲ್ಲಿ ಒಮ್ಮೊಮ್ಮೆ ಕಾಣಿಸಿಕೊಳ್ಳುವ ದೂರದರ್ಶನದ ಕಾರ್ಯಕ್ರಮಗಳಲ್ಲಿ ಹಾಡಿದರೂ ಆ ಧ್ವನಿ ಮಾಧುರ್ಯ ಈಗಲೂ ಹಾಗೇ ಇದೆಯೆಲ್ಲಾ ಎಂಬ ಅಚ್ಚರಿ ಮೂಡಿಸುತ್ತಾರೆ. ಎಸ್. ಜಾನಕಿ ಅವರೇ ಹೇಳುವಂತೆ ಎಲ್ಲಾ ಅವರ ಅಂತರಂಗದ ಪರಮಾತ್ಮನ ಧ್ವನಿಯೇ ಆಗಿರುವಾಗ ಅದು ಮಾಸುವುದಾದರೂ ಹೇಗೆ. ಶ್ರೀಕೃಷ್ಣಪರಮಾತ್ಮನನ್ನೇ ಅಂತರಂಗದ ದೇವತೆಯಾಗಿ ಹೊಂದಿರುವ ಈ ಮಹಾನ್ ಪ್ರತಿಭೆಗೆ ನಾವೇನು ತಾನೇ ಹೇಳಬಲ್ಲೆವು.

ಡಾ. ಎಸ್.ಜಾನಕಿ ಕಂಠದಲ್ಲಿರುವ ಕೆಲವು ಗೀತೆಗಳು [ಬದಲಾಯಿಸಿ]

"ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ"ಎಂಬ

ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್‍ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಎಲ್.ಆರ್. ಈಶ್ವರಿ | ಬಿ.ಕೆ.ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ

ಎಸ್. ಜಾನಕಿ

"http://kn.wikipedia.org/w/index.php?title=ಎಸ್.ಜಾನಕಿ&oldid=328831" ಇಂದ ಪಡೆಯಲ್ಪಟ್ಟಿದೆ