ಎಸ್.ಎಲ್. ಭೈರಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಸ್.ಎಲ್. ಭೈರಪ್ಪ
S.L.Bhyrappa.jpg
ಶ್ರೀ ಎಸ್.ಎಲ್. ಭೈರಪ್ಪ
ಜನನ: ಆಗಸ್ಟ್ ೨೦, ೧೯೩೧ (1931-08-20) (ವಯಸ್ಸು ೮೧)
ಜನನ ಸ್ಥಳ: ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿ: ಲೇಖಕ
ರಾಷ್ಟ್ರೀಯತೆ: ಭಾರತೀಯ
ಬರವಣಿಗೆಯ ಕಾಲ: (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಸಾಹಿತ್ಯದ ವಿಧ(ಗಳು): ಕಥೆ, ಕಾದಂಬರಿ, ಇತಿಹಾಸ
ಪ್ರಭಾವಗಳು: ಗೊರೂರು ರಾಮಸ್ವಾಮಿ ಅಯ್ಯಂಗಾರ, ಆದಿ ಶಙ್ಕರಾಚಾರ್ಯ, ಮಹಾತ್ಮ ಗಾನ್ಧಿ, ಆನನ್ದ ಕೂಮಾರಸ್ವಾಮಿ, ರಾಮಕೃಷ್ಣ ಪರಮಹಂಸ, ಸ್ವಾಮೀ ವಿವೇಕಾನನ್ದ
ಅಂತರ್ಜಾಲ ತಾಣ: http://www.slbhyrappa.com/
(ಇತರ ವಿಷಯಗಳು)

"ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ" ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇವರ ಕಾದಂಬರಿ ಪ್ರಕಾರ ಹುಲುಸಾಗಿ ಬೆಳೆದು ಅತಿ ಹೆಚ್ಚು ಓದುಗರನ್ನು ತಲುಪಿದೆ. ಒಟ್ಟಾರೆ ಇಪ್ಪತ್ತನೆಯ ಶತಮಾನ ಕಾದಂಬರಿ ಯುಗ ಅನ್ನಿಸಿದೆ. ಈ ಪರಂಪರೆಯಲ್ಲಿ ಜನ ಮನ ಮುಟ್ಟಿದ ಸಾಹಿತಿಗಳು ಬರೆದೇ ಬದುಕು ರೂಪಿಸಿಕೊಂಡವರಿದ್ದಾರೆ. ಇದಲ್ಲದೆ ಬದುಕಿಗೊಂದು ವೃತ್ತಿಯಿದ್ದು ವಿವಿಧ ಓದುಗಳ ನಡುವೆ ಕನ್ನಡ ಸಾಹಿತ್ಯಕ್ಕೆ ಭಾಷೆ, ವಸ್ತು, ವಿನ್ಯಾಸದ ಹೊಸತು ಕೊಟ್ಟವರೂ ಇದ್ದಾರೆ. ಬರವಣಿಗೆ ಪ್ರವೃತ್ತಿಯಾಗಿಸಿಕೊಂಡು, ಅಕೆಡಮಿಕ್ ಆಗಿದ್ದೂ, ಹೆಚ್ಚು ಓದುಗರನ್ನು ತಲುಪಿದ ಜನಪ್ರಿಯ ಕಾದಂಬರಿಕಾರರೆಂದರೆ ಡಾ| ಎಸ್. ಎಲ್. ಭೈರಪ್ಪ ಅವರು.

ತಾವು ಆಯ್ಕೆ ಮಾಡಿಕೊಂಡ ವಸ್ತು, ಅದನ್ನು ನಡೆಸುವ ರೀತಿ, ಅದಕ್ಕೊಂದು ಅಂತ್ಯ ಕೊಡುವ ಲೇಖಕನ ಮನೋಸ್ಥಿತಿ ಬಗ್ಗೆ ಚರ್ಚೆಗಳಲ್ಲಿ ಭಿನ್ನ ಅಭಿಪ್ರಾಯಗಳೂ ಇವೆ. ಇಂಥ ಸಂದರ್ಭದಲ್ಲೂ ಭೈರಪ್ಪನವರ ಕಾದಂಬರಿಗಳು ಬಹು ಓದುಗರ ಚರ್ಚೆಯಲ್ಲಿರುತ್ತವೆ. ಮಾಧ್ಯಮಗಳಲ್ಲಿ ವಿಮರ್ಶೆ ಮೂಲಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಲೆದೋರಿದರೂ ಅದು ಒಂದು ವಲಯದ ಚರ್ಚೆಯೆಂದು ಅಭಿಪ್ರಾಯಿಸುವವರೂ ಇದ್ದಾರೆ.

ಪರಿವಿಡಿ

[ಬದಲಾಯಿಸಿ] ಜೀವನ

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೦-೮-೧೯೩೧ ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು.ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರ ಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತತೆಯನ್ನು ಮೈಗೂಡಿಸಿಕೊಂಡರು.ವಯಸ್ಸು ೫ ರ ಆಸು ಪಾಸಿನಲ್ಲಿ ತಾಯಿಯೂ ಬಡತನ - ಪ್ಲೇಗ್ ಗಳಿಗೆ ಜೀವವನ್ನು ಬಿಟ್ಟು ಕೊಟ್ಟಾಗ ಬದುಕಿನ ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳ ತೊಡಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ ೧೩ ವರ್ಷ!

ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ. ಎ. ನಲ್ಲಿ ಸುವರ್ಣಪದಕ ದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿ೦ದ ``ಸತ್ಯ ಮತ್ತು ಸೌಂದರ್ಯ" , ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು. ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೬೧ ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ ನಾಲ್ಕು ದಶಕಗಳಲ್ಲಿ ೨೧ ಕಾದಂಬರಿಗಳನ್ನು ಬರೆದಿದ್ದಾರೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೊಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದವಾಗಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.

ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ಮೂಡಿಸಿದ್ದಾರೆ.

ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆ ಆಗಿದ್ದರು.

ಹೆಚ್ಚಿನ ಓದು : ಭೈರಪ್ಪನವರ ಬಾಲ್ಯಕಾಲದ ಹೃದಯಸ್ಪರ್ಶೀ ಚಿತ್ರಣಕ್ಕಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ "ಮರೆಯಲಾದೀತೇ" ವ್ಯಕ್ತಿಚಿತ್ರ ಸಂಗ್ರಹದಲ್ಲಿ ಭೈರಪ್ಪನವರ ಬಗೆಗಿನ ಅಧ್ಯಾಯವನ್ನು ಓದಿ.

[ಬದಲಾಯಿಸಿ] ವಿವಾದಗಳು

ಭೈರಪ್ಪನವರು ಅವರ ನಿಲುವುಗಳಿಂದ ಹಾಗೂ ತಮ್ಮ ಕಾದಂಬರಿಗಳನ್ನು ಬರೆಯಲು ಆಯ್ಕೆ ಮಾಡುವ ವಿಷಯಗಳಿಂದ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ. ಅವರ ಕೆಲವು ಪ್ರಮುಖ ಕೃತಿಗಳು (ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ಪರ್ವ, ಸಾರ್ಥ) ಭಾರತದ ಪುರಾತನ ಸಂಸ್ಕೃತಿಯ ಸಾರವನ್ನು ಹೊಂದಿವೆ. ಆದ್ದರಿಂದ ಇವರು ಕೆಲವು ಸಾಹಿತಿಗಳಿಂದ, ವಿಶೇಷವಾಗಿ ನವ್ಯ ಸಾಹಿತಿಗಳಿಂದ ಟೀಕೆಗೆ ಗುರಿಯಾಗಬೇಕಾಯಿತು.

ರಾಷ್ಟ್ರಗೀತೆಯನ್ನು ವಾದ್ಯಗಳಲ್ಲಿ ನುಡಿಸಿದ ಪ್ರಸಂಗದಲ್ಲಿ ಎನ್. ಆರ್. ನಾರಾಯಣಮೂರ್ತಿಯವರನ್ನು ಭೈರಪ್ಪನವರು ಬೆಂಬಲಿಸಿದ್ದರು. ಕಾವೇರಿ ವಿವಾದ ಗಲಭೆಗಳಿಗೆ ಪ್ರತಿಭಟನೆಗಳಿಗೆ ತಿರುಗಿದ ಸಂದರ್ಭದಲ್ಲಿ ಗಲಭೆಗಳಿಂದ, ಪ್ರತಿಭಟನೆಗಳಿಂದ ವಿವಾದದ ಇತ್ಯರ್ಥ ಸಾಧ್ಯವಾಗುವುದಿಲ್ಲ ಎಂಬ ನಾರಾಯಣಮೂರ್ತಿಯವರ ವಾದವನ್ನು ಕೂಡ ಇವರು ಸಮಾರ್ಥಿಸಿದ್ದರು.

ಟಿಪ್ಪು ಸುಲ್ತಾನ್ ಧರ್ಮ ಸಹಿಷ್ಣುವೇ ಅಲ್ಲವೇ ಎಂಬ ವಿಚಾರದಲ್ಲಿ ಗಿರೀಶ್ ಕಾರ್ನಾಡ್‍ರೊಂದಿಗೆ ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ವಾದಿಸಿದ್ದರು. ಕಾರ್ನಾಡ್ ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಕಲ್ಪನೆಗಳನ್ನು ಸಾರುತ್ತಾ ಅವನ ವ್ಯಕ್ತಿತ್ವವನ್ನು ಅನಗತ್ಯವಾಗಿ ಧರ್ಮಸಹಿಷ್ಣು ಎಂಬ ರೀತಿಯಲ್ಲಿ ವೈಭವೀಕರಿಸಿದ್ದಾರೆ ಎಂಬುದು ಭೈರಪ್ಪನವರ ಅನಿಸಿಕೆಯಾಗಿದೆ. ಟಿಪ್ಪು ಸುಲ್ತಾನ್ ಒಬ್ಬ ಧರ್ಮಾಂಧನಾಗಿದ್ದು ಹಿಂದೂಗಳನ್ನು ಸಹಿಸುತ್ತಿರಲಿಲ್ಲ ಎಂಬುದು ಅವರ ವಾದದ ಸಾರವಾಗಿತ್ತು. ಯು. ಆರ್. ಅನಂತ್‍ಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಪ್ರಮುಖ ಟೀಕಾಕಾರ. ಭೈರಪ್ಪನವರು ತಮ್ಮ ಹಾಗೂ ಅನಂತಮೂರ್ತಿಯವರ ನಡುವೆ ನಡೆದ ವಾದ ವಿವಾದಗಳನ್ನು ಭಿತ್ತಿ ಎಂಬ ತಮ್ಮ ಕಾದಂಬರಿಯಲ್ಲಿ ಹಾಗೂ ನಾನೇಕೆ ಬರೆಯುತ್ತೇನೆಯ ಕೆಲವು ಪ್ರಭಂದಗಳಲ್ಲಿ ದಾಖಲಿಸಿದ್ದಾರೆ.

ಮುಸ್ಲೀಮ್ ಆಳ್ವಿಕೆಯು ಭಾರತದ ಸಂಸ್ಕೃತಿ ಹಾಗೂ ಸಾಮಾಜಿಕ ಬೆಳವಣಿಗೆಗಳ ಮೇಲೇ ಬೀರಿದ ಪರಿಣಾಮವನ್ನು ಬಿಂಬಿಸುವ, ಐತಿಹಾಸಿಕ ಸತ್ಯಗಳನ್ನೊಳಗೊಂಡ ಭೈರಪ್ಪನವರ ಇತ್ತೀಚಿನ ಕಾದಂಬರಿ ಆವರಣ ಕರ್ನಾಟಕದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ. ಭೈರಪ್ಪನವರು ಇತಿಹಾಸದ ಹೆಸರಲ್ಲಿ ಸಮಾಜವನ್ನ್ನು ಒಡೆದು ಆಳಲು ಬಯಸುವ ಮೂಲಭೂತವಾದಿ ಹಾಗೂ ಅವರಿಗೆ ಕಾದಂಬರಿ ಬರೆಯುವ ಜ್ಞಾನವಿಲ್ಲ ಎಂದು ಹೇಳಿಕೆ ಕೊಟ್ಟ ಅನಂತಮೂರ್ತಿಯವರು ಸಾಹಿತ್ಯಲೋಕದಲ್ಲಿ ಕಟುಟೀಕೆಗೊಳಗಾದರು. ಆದರೆ ಭೈರಪ್ಪನವರು ತಾವು ಯಾವುದರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದೆ ಮಾಡಿದ ಸತ್ಯಾನ್ವೇಷಣೆಯ ಫಲವೇ ಆವರಣ ಎಂದು ಸಮರ್ಥಿಸಿಕೊಂಡಿದ್ದಾರೆ. ಟೀಕಾಕಾರರು ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಕಾದಂಬರಿಯಲ್ಲಿ ಸೂಚಿಸಿರುವ ಆಕರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಮತಾಂತರ ಮತ್ತು ಕವಲು ಎಂಬ ಲೇಖನಗಳಿಗೆ ಬಹಳ ದಿನಗಳ ಕಾಲ ಪರ ಹಾಗೂ ವಿರೋಧಿ ವಿಮರ್ಶೆಗಳು ಪ್ರಕಟವಾಗಿದ್ದವು. ಜನಸಾಮಾನ್ಯರಿಗಂತೂ ಇದರಿಂದ ಬಹಳ ರೋಚಕ ಅನುಭವವಾಯಿತು.

ಅವರ ಇತ್ತೀಚಿನ 'ಕವಲು' ಕಾದಂಬರಿ ಕೂಡಾ ಸಾಕಷ್ಟು ಚರ್ಚೆ-ವಿವಾದಗಳಿಗೆ ಗ್ರಾಸವಾಗಿತ್ತು. ಕಾದಂಬರಿಯಲ್ಲಿ 'ಆಧುನಿಕ ಮಹಿಳಾ ಸಿಧ್ಧಾಂತ'ದಲ್ಲಿನ ಪೊಳ್ಳುತನಗಳು ಹಾಗೂ ಅದರ ಸಾಮಾಜಿಕ ಪರಿಣಾಮವನ್ನೇ ವಸ್ತುವನ್ನಾಗಿರಿಸಿಕೊಂಡು ಬರೆಯಲಾಗಿದ್ದರಿಂದ ಅದಕ್ಕೆ 'ಮಹಿಳಾ ಪ್ರಗತಿ ವಿರೋಧಿ' ಎಂಬ ಹಣೆಪಟ್ಟಿಯನ್ನೂ ಕಟ್ಟಲಾಗಿತ್ತು.ಇದೇ ಕಾರಣಕ್ಕಾಗಿ ಖ್ಯಾತ ಕಥೆ,ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್ ರವರು ಆ ಕಾದಂಬರಿಯನ್ನು ಯಾರೂ ಓದಕೂಡದೆಂದು ಸಮಾರಂಭವೊಂದರಲ್ಲಿ ಹೇಳಿದ್ದರು, ಇದೂ ಕೂಡಾ ಸಾಕಷ್ಟು ಚರ್ಚೆ,ವಿವಾದಗಳಿಗೆ ನಾಂದಿ ಹಾಡಿತ್ತು. 'ಭೈರಪ್ಪನವರು ಬಲಪಂಥೀಯರು' ಎಂಬುದು ಅವರ ಮೇಲಿನ ಪುರಾತನ ಆರೋಪ!.

[ಬದಲಾಯಿಸಿ] ಪ್ರಶಸ್ತಿಗಳು

  • ‌ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೬೬
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ) ೧೯೭೫
  • ಪಂಪ ಪ್ರಶಸ್ತಿ - ೨೦೦೫
  • ಎನ್ ಟಿ ಆರ್‍ ರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿ, ೨೦೦೭
  • ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು ೨೦೦೭
  • ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ) ೨೦೧೧
  • ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ) ೨೦೧೨

ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್.ಎಲ್. ಭೈರಪ್ಪನವರನ್ನು ೨೦೧೨ರ "ವಾಗ್ವಿಲಾಸಿನಿ ಪುರಸ್ಕಾರ್"ಗೆ ಆಯ್ಕೆ ಮಾಡಲಾಗಿದೆ. ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತೆ. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು ಅವರಲ್ಲಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜ್ರು ಸುಲ್ತಾನ್ಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರೊಬ್ಬರಿಗೆ ನೀಡುತ್ತಿರುವ ಮೊದಲ ಸಂದರ್ಭ ಇದಾಗಿದೆ. ಮಹಾರಾಷ್ಟ್ರದವರು ಭೈರಪ್ಪನವರನ್ನು "ಕನ್ನಡದಲ್ಲಿ ಬರೆಯುತ್ತಿರುವ ಮರಾಠಿ ಲೇಖಕ" ಎಂದೇ ಗುರುತಿಸುತ್ತಾರೆ. ಏಪ್ರಿಲ್ 24ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ."ನಮನ"

[ಬದಲಾಯಿಸಿ] ಕೃತಿಗಳು

ಜೀವನಚರಿತ್ರೆ

ತತ್ತ್ವಶಾಸ್ತ್ರ

  • ಸತ್ಯ ಮತ್ತು ಸೌಂದರ್ಯ (೧೯೬೬)
  • ಸಾಹಿತ್ಯ ಮತ್ತು ಪ್ರತೀಕ (೧೯೬೭)
  • ಕಥೆ ಮತ್ತು ಕಥಾವಸ್ತು (೧೯೬೯)
  • ನಾನೇಕೆ ಬರೆಯುತ್ತೇನೆ? (೧೯೮೦)

[ಬದಲಾಯಿಸಿ] ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು

[ಬದಲಾಯಿಸಿ] ದೃಶ್ಯ ಮಾಧ್ಯಮದಲ್ಲಿ ಭೈರಪ್ಪನವರ ಕಾದಂಬರಿಗಳು

[ಬದಲಾಯಿಸಿ] ಚಲನಚಿತ್ರ

[ಬದಲಾಯಿಸಿ] ಟಿ.ವಿ. ಧಾರಾವಾಹಿ

[ಬದಲಾಯಿಸಿ] ಹೊರಗಿನ ಸಂಪರ್ಕಗಳು