ಎಂ.ಆರ್.ವಿಠಲ್
ಕನ್ನಡ ಚಿತ್ರರಂಗದ ನಿರ್ದೇಶಕರಲ್ಲಿ ಪ್ರಮುಖ ಹೆಸರಾದ ಮೈಸೂರು ರಾಘವೇಂದ್ರರಾವ್ ವಿಠಲ್ ೧೯೦೮ ಆಗಸ್ಟ್ ೧೯ರಂದು ಜನಿಸಿದರು. ಮೈಸೂರು ಮತ್ತು ಮದ್ರಾಸುಗಳಲ್ಲಿ ವ್ಯಾಸಂಗ ನಡೆಸಿದರು. ಆಟೋಮೊಬೈಲ್ ಮತ್ತು ಇಂಜಿನಿಯರಿಂಗ್ ಪದವೀಧರರಾದ ವಿಠಲ್ ಆ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದರು. ೧೯೨೮ರಲ್ಲಿ ಕೊಲ್ಲಾಪುರದಲ್ಲಿ ಸ್ವಂತ ಕಾಲೇಜನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧ್ವನಿಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು. ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಬಳಿ ಚಲನಚಿತ್ರ ಕಲೆಯನ್ನು ಕಲಿತ ಅವರು ಲಾಹೊರ್ಗೆ ತೆರಳಿ ಶಬ್ದ ಗ್ರಹಣವನ್ನು ವಿಶೇಷವಾಗಿ ಅಧ್ಯಯನ ಮಾಡಿದರು.
೧೯೩೮ ರಲ್ಲಿ ಆಗ್ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ಹಲವಾರು ತಮಿಳು ಮತ್ತು ಮಲೆಯಾಳಂ ಚಿತ್ರಗಳನ್ನು ನಿರ್ದೇಶಿಸಿದರು. ೧೯೫೨ ರಲ್ಲಿ ಬರ್ನಿಂಗ್ ಸಿಟಿ ಎಂಬ ಫ್ರೆಂಚ್ ಭಾಷೆಯ ಚಿತ್ರವನ್ನು ನಿರ್ದೇಶಿಸಿದರು. ವಿಠಲ್ ಕನ್ನಡ ಚಿತ್ರ್ರರಂಗಕ್ಕೆ ಬಂದಿದ್ದು ತಡವಾಗಿ. ಆದರೆ ಕನ್ನಡದಲ್ಲಿ ಅನೇಕ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ೧೯೬೩ರಲ್ಲಿ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದ ನಂದಾದೀಪ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.
ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನೂ, ಯಾರ ಸಾಕ್ಷಿ? ಚಿತ್ರದ ಮೂಲಕ ನಟಿ ಮಂಜುಳ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಹೆಗ್ಗಳಿಕೆ ವಿಠಲ್ ಅವರದು .
ಎಂ.ಆರ್.ವಿಠಲ್ ನಿರ್ದೇಶನದ ಕನ್ನಡ ಚಿತ್ರಗಳು [ಬದಲಾಯಿಸಿ]
- ನಂದಾದೀಪ
- ಮಿಸ್ ಲೀಲಾವತಿ
- ಹಣ್ಣೆಲೆ ಚಿಗುರಿದಾಗ
- ಪ್ರೊಫೆಸರ್ ಹುಚ್ಚುರಾಯ
- ನಕ್ಕರೆ ಅದೇ ಸ್ವರ್ಗ
- ಯಾರ ಸಾಕ್ಷಿ?
- ಕೂಡಿ ಬಾಳೋಣ
- ಮಂಗಳ ಮುಹೂರ್ತ
- ಪ್ರೇಮಮಯಿ
- ಮನಸ್ಸಿದ್ದರೆ ಮಾರ್ಗ
- ಮಾರ್ಗದರ್ಶಿ
- ವರದಕ್ಷಿಣೆ
- ಕಣ್ಣುಮುಚ್ಚಾಲೆ
ಪ್ರಶಸ್ತಿ [ಬದಲಾಯಿಸಿ]
೧೯೯೧ ನೆಯ ಸಾಲಿನ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದಿದ್ದರು.
ನಿಧನ [ಬದಲಾಯಿಸಿ]
ತಮ್ಮ ಜೀವನದ ಕೊನೆಯ ದಿನಗಳನ್ನು ಬರೋಡಾದಲ್ಲಿ ಕಳೆದ ವಿಠಲ್ ೧೯೯೪ರ ಅಕ್ಟೋಬರ್ ೧೨ ರಂದು ನಿಧನರಾದರು.
|
|||||