ಇಡಗುಂಜಿ ಕೃಷ್ಣ ಯಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಡಗುಂಜಿ ಕೃಷ್ಣ ಯಾಜಿ
Occupation(s)ಯಕ್ಷಗಾನ ಕಲಾವಿದರು, ಚಂಡೆ ವಾದಕರು

ಇಡಗುಂಜಿ ಕೃಷ್ಣ ಯಾಜಿ ಯಕ್ಷಗಾನ ಲೋಕದಲ್ಲಿ ಚಂಡೆ ವಾದಕರಾಗಿ ಪ್ರಸಿದ್ಧಿ ಪಡೆದವರಾಗಿದ್ದಾರೆ. ಹೊನ್ನಾವರ ತಾಲೂಕಿನ ಇಡಗುಂಜಿಯ ಕೃಷ್ಣ ಯಾಜಿ ಅವರದು ಐದು ದಶಕಗಳಿಂದ ಯಕ್ಷಗಾನ ಕಲಾಸೇವೆ. ವೇಷಧಾರಿಯಾಗಿ ಯಕ್ಷ ರಂಗಕ್ಕೆ ಕಾಲಿಟ್ಟ ಇಡಗುಂಜಿ ಕೃಷ್ಣ ಯಾಜಿ ಅವರು ನಂತರದಲ್ಲಿ ಹೆಸರು ಮಾಡಿದ್ದು ಚಂಡೆ ವಾದಕರಾಗಿ.

ವೇಷದಾರಿಯಾಗಿ ಪ್ರವೇಶ[ಬದಲಾಯಿಸಿ]

ಯಕ್ಷ ರಂಗವನ್ನು ಪ್ರವೇಶಿಸಿದ್ದು ವೇಷಧಾರಿಯಾಗಿ. ಶುರುವಾದದ್ದು ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷದಿಂದ. ನಂತರ ಸುಬ್ರಹ್ಮಣ್ಯ, ಚಂದ್ರಹಾಸ, ಅಭಿಮನ್ಯು, ಅರ್ಜುನ ಮುಂತಾದ ವೇಷಗಳು ಬರಲಾರಂಭಿಸಿದವು. ಇದ್ದಕ್ಕಿದ್ದಂತೆ ತಿರುವು ಪಡೆದ ಕಲಾಜೀವನ ಅವರನ್ನು ಬಡಗುತಿಟ್ಟಿನ ಖ್ಯಾತ ಚಂಡೆ ವಾದಕರನ್ನಾಗಿ ರೂಪಿಸಿತು.

ಮನಸೆಳೆದ ಮದ್ದಲೆ ವಾದನ[ಬದಲಾಯಿಸಿ]

ಕಲಾವಿದನಾಗಿ ಹೆಸರು ಪಡೆಯುತ್ತಿದ್ದ ಕಾಲದಲ್ಲಿಯೇ ಖ್ಯಾತ ಮದ್ದಲೆ ವಾದಕ ಕಿನ್ನೀರು ನಾರಾಯಣ ಹೆಗ್ಡೆ ಅವರ ಮದ್ದಲೆ ವಾದನ ಇವರನ್ನು ಸೆಳೆಯಿತು. ಅವರ ಬಳಿ ಮದ್ದಲೆ ಅಭ್ಯಾಸ. ನಂತರ ಗುಂಡ್ಮಿ ರಾಮಚಂದ್ರ ನಾವಡರಲ್ಲಿ ಚಂಡೆ ಹಾಗೂ ಮದ್ದಲೆ ವಾದನದಲ್ಲಿ ವಿಶೇಷ ತರಬೇತಿ. ಆ ನಂತರ ಅವರ ಕಾರ್ಯ ಏನಿದ್ದರೂ ಕುಣಿಯುವುದಲ್ಲ, ಕುಣಿಸುವುದು. ನಾಲ್ಕು ದಶಕಗಳಿಂದ ಚಂಡೆ ವಾದನದಲ್ಲಿ ಕೃಷ್ಣ ಯಾಜಿ ದೊಡ್ಡ ಹೆಸರು. ಚಂಡೆಯೊಂದಿಗೆ ಮಾತನಾಡುವ ಕಲಾ ನೈಪುಣ್ಯ ಅವರಿಗೆ ದಕ್ಕಿದೆ. ನಯ ನಾಜೂಕಿನ ವೈವಿಧ್ಯಪೂರ್ಣ ನುಡಿತಗಳು ಸಿದ್ಧಿಸಿವೆ. ಸಂದರ್ಭಾನುಸಾರವಾಗಿ ಅಬ್ಬರದ ಭೋರ್ಗರೆತ, ಮರುಕ್ಷಣ ಕಲ್ಪನೆಗೂ ನಿಲುಕದ ನಾದಸುಧೆಯ ಪ್ರದರ್ಶನ ಇವರ ಸಾಧನೆಗೆ ಸಾಕ್ಷಿ. ತೆಂಕು ತಿಟ್ಟಿನ ಚಂಡೆ ವಾದನದಲ್ಲೂ ಇವರದು ನುರಿತ ಕೈ.

ವಿವಿದ ಮೇಳಗಳಲ್ಲಿ[ಬದಲಾಯಿಸಿ]

ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳ ಮೇಳಗಳಲ್ಲಿ ಕೃಷ್ಣ ಯಾಜಿ ಸೇವೆ ಸಲ್ಲಿಸಿದ್ದಾರೆ. ಉಮಾಮಹೇಶ್ವರಿ ಕಲಾವರ್ಧಕ ಸಂಘದ ತಾಳಮದ್ದಲೆ ಕೂಟದಲ್ಲಿ ಪ್ರಧಾನ ಮದ್ದಲೆ ವಾದಕರಾಗಿ, ಶ್ರೀಮಯ ಕಲಾಕೇಂದ್ರ ಗುಣವಂತೆ, ದೇವರು ಹೆಗಡೆ ಯಕ್ಷಗಾನ ಶಾಲೆ ಮುರೂರು ಇಲ್ಲಿ ಯಕ್ಷಗಾನ ಗುರುವಾಗಿ ಇವರು ೧೨-೧೩ ವರ್ಷ ಕಾಲ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡಿದ್ದಾರೆ.

ಚಂಡೆಯ ವ್ಯಾಪ್ತಿ ವಿಸ್ತರಣೆ[ಬದಲಾಯಿಸಿ]

ಯಕ್ಷಗಾನಕ್ಕಷ್ಟೇ ಸೀಮಿತವಾದ ಚಂಡೆಯನ್ನು ನಾಟಕರಂಗಕ್ಕೂ ವಿಸ್ತರಿಸುವ ಮೂಲಕ ಹೊಸ ಪ್ರೇಕ್ಷಕರನ್ನು ಕೃಷ್ಣ ಯಾಜಿ ತಲುಪಿದ್ದಾರೆ. ಇತ್ತೀಚಿನ ಆವಿಷ್ಕಾರವಾದ ಶತಾವಧಾನಿ ಡಾ.ಆರ್. ಗಣೇಶ್ ಅವರ ನಿರ್ದೇಶನದ ಭಾಮಿನಿ ಹಾಗೂ ಕೃಷ್ಣಾರ್ಪಣ ಕಾರ್ಯಕ್ರಮಗಳಿಗೆ ಚಂಡೆವಾದನದ ವಿಶೇಷ ಛಾಪು ಮೂಡಿಸಿದ ಹಿರಿಮೆ ಕೃಷ್ಣ ಯಾಜಿ ಅವರದು. ಗೋಪಾಲಕೃಷ್ಣ ಹೆಗಡೆ ನೇತೃತ್ವದ 'ಲಯಲಾಸ್ಯ' ಕಾರ್ಯಕ್ರಮದಲ್ಲಿ ತಬಲಾ ಮತ್ತು ಮೃದಂಗಗಳೊಂದಿಗೆ ಚಂಡೆವಾದನದ ವಿಭಿನ್ನ ಆಯಾಮ, ಪಟ್ಟು ಮತ್ತು ಪೆಟ್ಟುಗಳ ಪ್ರದರ್ಶನ ನೀಡಿದ್ದು ಮಹತ್ವಪೂರ್ಣವೆನಿಸಿದೆ.

ವಿಶ್ವದೆಲ್ಲೆಡೆ ಚಂಡೆಯ ಮಾರ್ದನಿ[ಬದಲಾಯಿಸಿ]

ದೆಹಲಿ, ಮುಂಬಯಿ, ಕೋಲ್ಕತ್ತಾ, ಅಮೃತಸರ, ತ್ರಿವೇಂಡ್ರಂ, ಭೋಪಾಲ್, ಝಾನ್ಸಿ, ಬೆಂಗಳೂರು ಮುಂತಾದೆಡೆ ಕಾರ್ಯಕ್ರಮ ನೀಡಿರುವ ಇವರು ವಿದೇಶಗಳಲ್ಲಿಯೂ ಚಂಡೆಯ ಸದ್ದು ಮೊಳಗಿಸಿದ್ದಾರೆ. ಲಂಡನ್, ಸ್ಪೇನ್, ಫ್ರಾನ್ಸ್, ಚೀನಾ, ನೇಪಾಳ, ಬರ್ಮಾ, ಲಾಹೋತ್ಸೆ, ಮಲೇಶಿಯಾ, ಸಿಂಗಾಪುರ, ಫಿಲಿಪ್ಪೀನ್ಸ್ ರಾಷ್ಟ್ರಗಳಿಗೆ ಇವರು ಇಡಗುಂಜಿ ಮೇಳದೊಂದಿಗೆ ತೆರಳಿದ್ದರು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿಯಲ್ಲಿ ಮೊದಲಿಗರಾದ ಕೃಷ್ಣ ಯಾಜಿ ಅವರು, ೨೦೧೨ರಲ್ಲಿ ಉಡುಪಿ ಕಲಾಕೇಂದ್ರದಿಂದ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, ೨೦೧೨ರಲ್ಲಿ ಕಾಶ್ಶಪ ಪ್ರತಿಷ್ಠಾನ, ವಿದ್ಯಾ ಸಂಸ್ಕೃತಿ ಟ್ರಸ್ಟ್ ಗಡಿಗೆಹೊಳೆ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ಗೌರವ ಮೊದಲಾದ ಯಕ್ಷರಂಗದ ಸಾಧಕರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ,Ashvasan foundation award,ಸಾಧಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇದಲ್ಲದೆ ವಾದನ ರತ್ನಾಕರರೆಂಬ ಬಿರುದಾಂಕಿತರಾಗಿದ್ದಾರೆ.ಸ್ತ್ರೀ ವೇಷಕ್ಕೂ ಚಂಡೆ ನುಡಿಸುವುದು ಹೇಗೆಂದು ತೋರಿಸಿಕೊಟ್ಟ ಮೊದಲಿಗರಾಗಿದ್ದಾರೆ.

ಕಲೆಯೇ ಕಾಯಕ[ಬದಲಾಯಿಸಿ]

ಮದ್ದಲೆ ಹಾಗೂ ಚಂಡೆ ವಾದನಗಳೆರಡರಲ್ಲೂ ಅತ್ಯುನ್ನತ ಕಲಾವಿದರಾದರೂ 'ಸಾಧನೆ ಸಾಲದು' ಎಂಬ ಮನೋಭಾವ; ವಿನಯ ಮತ್ತು ಶಿಸ್ತು ಜೀವನದ ಜೀವಾಳವಾಗಿರಬೇಕೆಂಬ ಸಂಕಲ್ಪ; ಸೋಲೊಪ್ಪದ ಸಂಯಮದ ಬದುಕು ಕೃಷ್ಣ ಯಾಜಿ ಅವರದು. ಯಕ್ಷಗಾನ ಕಲೆಗಾಗಿ ಜೀವ ತೇಯುತ್ತಿರುವ ಯಾಜಿಯವರರಿಗೆ ಕಲೆಯೇ ಕಾಯಕ, ಯಕ್ಷಗಾನವೇ ಅನ್ನದ ದಿಕ್ಕು- ಬದುಕಿನ ದಾರಿ.

ಮಾಹಿತಿ ಕೃಪೆ[ಬದಲಾಯಿಸಿ]

ಕನ್ನಡ ಪ್ರಭ ಪತ್ರಿಕೆಯಲ್ಲಿ ರಾಜೇಶ್ ಅವರ ಲೇಖನ