ಅಷ್ಟಾವಕ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಷ್ಟಾವಕ್ರ ಪ್ರಾಚೀನ ಭಾರತದ ಋಷಿ. ಈತ ಕಹೋಡ ಮಹರ್ಷಿ ಮತ್ತು ಸುಜಾತೆಯ ಮಗ. ಜನ್ಮತಃ ಅಸಾಧಾರಣ ಬುದ್ಧಿಶಕ್ತಿಯುಳ್ಳ ಪ್ರತಿಭಾವಂತ. ದೇಹದ ಎಂಟು ಅಂಗಗಳಲ್ಲಿ ವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ್ದರಿಂದ ಅಷ್ಟಾವಕ್ರನೆಂದು ಪ್ರಖ್ಯಾತನಾದ.

ಹಿನ್ನೆಲೆ[ಬದಲಾಯಿಸಿ]

ಉದ್ಧಾಲಕನೆಂಬ ಮಹರ್ಷಿಯು ಆಶ್ರಮವೊಂದರಲ್ಲಿ ವೇದೋಪನಿಷತ್ತನ್ನು ಕಲಿಸುತ್ತಿದ್ದರು. ಬಾಲಕ ಕಹೋಡ ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದನು. ಮುಂದೆ ಕಹೋಡನ ಸೇವಾಪ್ರೀತಿಗೆ ಸಂಪ್ರೀತಗೊಂಡ ಉದ್ಧಾಲಕರು ತಮ್ಮ ಮಗಳಾದ ಸುಜಾತಳನ್ನು ಕಹೋಡನಿಗೆ ಕೊಟ್ಟು ಮದುವೆ ಮಾಡಿಸುತ್ತಾರೆ. ಇತ್ತ ಒಂದು ದಿನ ಕಹೋಡ ಮುನಿ ತಮ್ಮ ವೇದ ಅಧ್ಯಯನವನ್ನು ನಡೆಸುತ್ತಿರುವಾಗ ಗರ್ಭಿಣಿ ಸುಜಾತೆಯು ಅಲ್ಲಿಗೆ ಬಂದು ಗಂಡನ ಅಧ್ಯಯನವನ್ನು ಗಮನಿಸುತ್ತಿರುತ್ತಾಳೆ. ಇದ್ಯಾವುದರ ಅರಿವಿಲ್ಲದ ಕಹೋಡಮುನಿಗಳು ತಮ್ಮ ಮಂತ್ರೋಪಚಾರಣೆಯನ್ನು ಜೋರಾಗಿ ಹೇಳಿಕೊಳ್ಳುತ್ತಿರುತ್ತಾರೆ. ಮಧ್ಯೆ ಒಂದೆರಡು ಕಡೆ ತಪ್ಪಾಗಿ ಮಂತ್ರ ಉಚ್ಛರಿಸುತ್ತಾರೆ. ಆಗ ಸುಜಾತೆಯ ಗರ್ಭದಲ್ಲಿದ್ದ ಮಗು ಕಹೋಡಮುನಿಯ ಗೇಲಿ ಮಾಡಿ ನಗುತ್ತದೆ. ಸುಜಾತೆಗೆ ಗರ್ಭದಲ್ಲಿರುವ ಮಗುವಿನ ಗೇಲಿ ಅರ್ಥವಾಗುತ್ತದೆ. ಆದರೆ ಪತಿಗೆ ಹೇಳುವದಿಲ್ಲ. ಆದರೆ ಕಹೋಡ ಮಹರ್ಷಿ ಎಂಟು ಸಲ ಮಂತ್ರವನ್ನು ತಪ್ಪಾಗಿ ಉಚ್ಛರಿಸುತ್ತಾರೆ. ಪ್ರತೀಸಲವೂ ಮಗು ನಕ್ಕು ಗೇಲಿ ಮಾಡುತ್ತದೆ. ಆದರೆ ಎಂಟನೇ ಸಲ ಮಾತ್ರ ಸುಜಾತಳಿಗೆ ತಡೆಯಲಾಗುವದಿಲ್ಲ. ಪತಿ ಕಹೋಡ ಮಹರ್ಷಿಗೆ ಸಮಸ್ತ ವಿಷಯವನ್ನು ತಿಳಿಸುತ್ತಾಳೆ. ಆದರೆ ವಿದ್ಯೆಯ ಅಹಂಕಾರದಿಂದ ಮದವೇರಿದ್ದ ಕಹೋಡರಿಗೆ ತಮ್ಮ ತಪ್ಪಿನ ಅರಿವಾಗುವದಿಲ್ಲ. ಬದಲಾಗಿ ತಮ್ಮನ್ನು ಎಂಟು ಸಲ ಗೇಲಿ ಮಾಡಿ ನಕ್ಕ ಗರ್ಭದಲ್ಲಿನ ಮಗುವಿನ ಮೇಲೆ ಅಸಾಧ್ಯ ಕೋಪ ಬರುತ್ತದೆ. ತಕ್ಷಣವೇ ಸುಜಾತೆಯ ಗರ್ಭಕ್ಕೆ 'ಎಂಟು ಸಲ ನನ್ನನ್ನು ಅವಮಾನಿಸಿದ ನಿನ್ನ ಎಂಟು ಅಂಗಗಳು ಕೂಡ ಊನವಾಗಲಿ..' ಅಂತ ಶಪಿಸುತ್ತಾರೆ. ಹಾಗೆ ಎಂಟು ಅಂಗಗಳನ್ನು ಹೊತ್ತುಕೊಂಡು ಹುಟ್ಟಿದವನೇ ಅಷ್ಟಾವಕ್ರ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]