ಅವಿನಾಶ್ ಕಾಮತ್
ಅವಿನಾಶ್ ಕಾಮತ್ ಮುಂಬೈಯ ಕನ್ನಡ ರಂಗಭೂಮಿಯ ಪ್ರತಿಭಾನ್ವಿತ ನಟರು.
ಪರಿವಿಡಿ |
ಜನನ, ವಿದ್ಯಾಭ್ಯಾಸ, ಕುಟುಂಬ [ಬದಲಾಯಿಸಿ]
ಅವಿನಾಶ್ ಕಾಮತ್ ಅವರು ದಿನಾಂಕ: ಏಪ್ರಿಲ್ ೨೬, ೧೯೭೭ರಂದು ಬೆಳಗಾವಿಯಲ್ಲಿ ಜನಿಸಿದರು.
ಇವರ ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀ. ಎಮ್.ಎಸ್.ಕಾಮತ್ ಅವರು. ತಾಯಿ ಶ್ರೀಮತಿ.ಪದ್ಮಾ ಕಾಮತ್.
ಅವಿನಾಶ್ ಕಾಮತ್ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ಧಾರವಾಡದ ಕೆ. ಇ. ಬೋರ್ಡ್ಸ್ ಶಾಲೆಯಲ್ಲಾಯಿತು.
ನಂತರ ಇವರ ತಂದೆ-ತಾಯಿ ಮುಂಬೈಗೆ ವಲಸೆ ಬಂದ ಕಾರಣ ಹೈಸ್ಕೂಲು ಮತ್ತು ಕಾಲೇಜಿನ ವಿದ್ಯಾಭ್ಯಾಸ ಮುಂಬೈನಲ್ಲಾಯಿತು.
‘ಬೆಳೆವ ಪೈರು ಮೊಳಕೆಯಲ್ಲೇ ನೋಡು’ ಎನ್ನುವ ಮಾತನ್ನು ಸಾರ್ಥಕಗೊಳಿಸುವಂತೆ ಅವಿನಾಶ್ ಕಾಮತ್ ಅವರು ತಮ್ಮ ಶಾಲಾದಿನಗಳಲ್ಲೇ, ಅಂದರೆ ಅವರು ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು. ಆಕಾಶವಾಣಿಯ ಬಾಲಕಲಾವಿದರಾಗಿದ್ದವರು.
ವಿದ್ಯಾಭಾಸ ಮುಗಿಸಿದ ನಂತರ ೧೯೯೮ರಲ್ಲಿ ಮುಂಬೈನ ಕನ್ನಡ ರಂಗಭೂಮಿಯ ಖ್ಯಾತ ನಿರ್ದೇಶಕರಾದ ಭರತ್ ಕುಮಾರ್ ಪೊಲಿಪು ಅವರ ನಿರ್ದೇಶನದಲ್ಲಿ, ಮಾಟುಂಗ ಕರ್ನಾಟಕ ಸಂಘದ ಕಲಾಭಾರತಿ ತಂಡದಿಂದ ಶ್ರೀರಂಗರು ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸುವುದರ ಮೂಲಕ ಅವಿನಾಶ್ ಮತ್ತೆ ಅಭಿನಯವನ್ನು ಮುಂದುವರೆಸಿದರು.
ಅವಿನಾಶ್ ಕಾಮತ್ ಇಲ್ಲಿಯವರೆಗೆ ಅಭಿನಯಿಸಿದ ಮುಖ್ಯ ನಾಟಕಗಳು [ಬದಲಾಯಿಸಿ]
- ಗುಮ್ಮನೆಲ್ಲಿಹ ತೋರಮ್ಮ (ರಚನೆ: ಶ್ರೀರಂಗ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಕೈಗೆ ಬಂದ ತುತ್ತು (ರಚನೆ ಮತ್ತು ನಿರ್ದೇಶನ: ಬಾಲಕೃಷ್ಣ ನಿಡ್ವಣ್ಣಾಯ)
- ಗೌರಿ (ರಚನೆ ಮತ್ತು ನಿರ್ದೇಶನ: ವಸಂತ ಹೆರಳೆ)
- ಆಷಾಢದ ಒಂದು ದಿನ ( ರಚನೆ: ಹಿಂದಿ ಮೂಲ-ಮೋಹನ್ ರಾಕೇಶ್, ಕನ್ನಡಕ್ಕೆ- ಸಿದ್ಧಲಿಂಗ ಪಟ್ಟಣಶೆಟ್ಟಿ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ರಾವಿ ನದಿ ದಂಡೆಯಲ್ಲಿ (ರಚನೆ:ಮೂಲ-ಅಸ್ಘರ್ ವಜಾಹತ್, ಕನ್ನಡಕ್ಕೆ- ಡಾ.ತಿಪ್ಪೇಸ್ವಾಮಿ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ನಟ ಸಾಮ್ರಾಟ (ರಚನೆ: ಮರಾಠಿ ಮೂಲ-ವಿ.ವ.ಶಿರ್ವಡ್ಕರ್, ಕನ್ನಡಕ್ಕೆ- ಕೆ.ಜೆ.ರಾವ್, ನಿರ್ದೇಶನ: ಗುಣಪಾಲ ಉಡುಪಿ)
- ಆಟ (ರಚನೆ ಮತ್ತು ನಿರ್ದೇಶನ: ಅವಿನಾಶ್ ಕಾಮತ್)
- ಶಾಂಡಿಲ್ಯ ಪ್ರಹಸನ (ರಚನೆ: ಕನ್ನಡಕ್ಕೆ- ಕೆ.ವಿ.ಸುಬ್ಬಣ್ಣ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಪುಷ್ಪರಾಣಿ (ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಜಯಲಕ್ಷ್ಮೀ ಪಾಟೀಲ್)
- ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ (ರಚನೆ: ಶ್ರೀರಂಗ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಅಂಬೆ (ರಚನೆ: ಕನ್ನಡಕ್ಕೆ- ಸರಜೂ ಕಾಟ್ಕರ್, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಮೃಗತೃಷ್ಣ (ರಚನೆ:ವಸುಮತಿ ಉಡುಪ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಮಣ್ಣದ ಲೆಪ್ಪು (ತುಳು ನಾಟಕ) (ರಚನೆ: ಮೂಲ-ವಸುಮತಿ ಉಡುಪ, ತುಳುವಿಗೆ- ಶಿಮುಂಜೆ ಪರಾರಿ, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಒರಿ ಮಾಸ್ಟ್ರೆನ ಕತೆ (ತುಳು ನಾಟಕ) (ಹಿಂದಿ ಮೂಲ: ಡಾ. ಶಂಕರ್ ಶೇಷ್, ತುಳುವಿಗೆ- ಗಂಗಾಧರ ಫಣಿಯೂರು, ನಿರ್ದೇಶನ: ಭರತ್ ಕುಮಾರ್ ಪೊಲಿಪು)
- ಇನ್ನೊಬ್ಬ ದ್ರೋಣಾಚಾರ್ಯ (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಆರ್.ಲಕ್ಷ್ಮೀನಾರಾಯಣ, ನಿರ್ದೇಶನ ಭರತ್ ಕುಮಾರ್ ಪೊಲಿಪು)
ಅವಿನಾಶ್ ಕಾಮತ್ ಅವರು ಅಭಿನಯಿಸಿದ ನಾಟಕಗಳ ಕೆಲವು ಭಾವಚಿತ್ರಗಳು [ಬದಲಾಯಿಸಿ]
ಬಹುಮುಖ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರ [ಬದಲಾಯಿಸಿ]
ಮುಂಬೈಯಲ್ಲಿ ನೆಲೆಸಿರುವ ಅವಿನಾಶ್ ಕಾಮತ್ ವೃತ್ತಿಯಲ್ಲಿ ಜಾಹೀರಾತುಗಳ ಕಂಠದಾನ ಕಲಾವಿದರೂ, ಚಲನಚಿತ್ರ ಪಠ್ಯ ಹಾಗೂ ಜಾಹಿರಾತುಗಳ ಅನುವಾದಕರೂ ಆಗಿರುವರಲ್ಲದೆ, ಇವರು ಉತ್ತಮ ಕಥೆಗಾರರೂ ಸಹ. ಇವರ ಕೆಲವು ಕಥೆಗಳನ್ನು ಹಾಗೂ ಬರಹಗಳನ್ನು ಇವರದೇ ಬ್ಲಾಗ್ [[೧]] ಮತ್ತು ಸಂಪದದಲ್ಲಿ [೨] ನೀವು ಓದಬಹುದು.
ಅವಿನಾಶ್ ಕಾಮತ್ ಅವರು ಕನ್ನಡ ರಂಗಭೂಮಿ ಕಲಾವಿದರು ಮಾತ್ರವಲ್ಲ, ರಂಗ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಹೌದು.
ಮಾಟುಂಗ ಕರ್ನಾಟಕ ಸಂಘ ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ಯಲ್ಲಿ ಇವರೇ ನಿರ್ದೇಶಿಸಿದ ‘ಆಟ’ ನಾಟಕದಲ್ಲಿನ ಅಭಿನಯಕ್ಕಾಗಿ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ಅವಿನಾಶ್ ಕಾಮತ್ ಅವರು ರಚಿಸಿದ ’ಕಲಿಯುಗ ಬಂದೈತಿ ನೋಡ’ ನಾಟಕವು, 'ಸ್ನೇಹ ಸಂಬಂಧ ಪತ್ರಿಕೆ'ಯು ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗದಲ್ಲಿ, ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ ಪಡೆದಿದೆ.
೨೦೧೧ರ ಡಿಸೆಂಬರ್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’ಒರಿ ಮಾಸ್ಟ್ರೆನ ಕತೆ ನಾಟಕಕ್ಕೆ ಅವಿನಾಶ್ ಕಾಮತ್ ಅವರು ನೀಡಿದ ಸಂಗೀತಕ್ಕೆ ಮೂರನೇ ಅತ್ಯುತ್ತಮ ಸಂಗೀತ ಪ್ರಶಸ್ತಿ ಲಭಿಸಿದೆ.