ಅಲ್ಲಾವುದ್ದೀನ್ ಖಾನ್
Wikipedia ಇಂದ
ಅಲ್ಲಾವುದ್ದೀನ್ ಖಾನ್ (ಬೆಂಗಾಲಿ: ওস্তাদ আলাউদ্দীন খান,ಬಾಬಾ ಅಲ್ಲಾವುದ್ದೀನ್ ಖಾನ್ ಅಂತಲೂ ಸುಪರಿಚಿತ)(೧೮೬೨-೧೯೭೨) ಇವರು ಭಾರತ ದೇಶ ಕಂಡ ಸುಪ್ರಸಿದ್ಧ ಸರೋದ ವಾದಕರು, ಅನೇಕ ಇತರ ವಾದ್ಯಗಳ ವಾದಕರು ಮತ್ತು ಅತ್ತ್ಯುತ್ತಮ ಸಂಗೀತ ಶಿಕ್ಷಕರು. ಇವರು ಉಸ್ತಾದ್ ಅಲಿ ಅಕ್ಬರ್ ಖಾನ್ ಮತ್ತು ಅನ್ನಪೂರ್ಣಾ ದೇವಿಯವರ ತಂದೆಯವರು. ಪಂಡಿತ್ ರವಿಶಂಕರ್, ಪಂಡಿತ್ ನಿಖಿಲ್ ಬ್ಯಾನರ್ಜಿ, ಉಸ್ತಾದ್ ಅಲಿ ಅಕ್ಬರ್ ಖಾನ್, ಉಸ್ತಾದ್ ಬಹಾದೂರ್ ಖಾನ್, ಉಸ್ತಾದ್ ಆಶಿಶ್ ಖಾನ್, ಮತ್ತು ಪಂಡಿತ್ ಪನ್ನಾಲಾಲ್ ಘೋಷ್ ಇವರ ಗುರುಗಳು. ಇವರು ಹೇಗೆ ಅನೇಕ ಶಿಷ್ಯರಿಗೆ ಗುರುಗಳಾಗಿದ್ದರೋ ಹಾಗೆಯೇ ಸ್ವತಃ ಅನೇಕ ಗುರುಗಳ ಕಡೆಗೆ ವಿದ್ಯಾರ್ಜನೆಯನ್ನು ಮಾಡಿದ್ದರು, ಪ್ರಮುಖವಾಗಿ ಸುಪ್ರಸಿದ್ಧ ವಝಿರ ಖಾನ ಸಾಹೇಬರು ಇವರ ಪ್ರಮುಖ ಗುರುವಾಗಿದ್ದರು. ಇವರು ಸರೋದ್, ಸಿತಾರ್, ವಯೊಲಿನ್ ಮತ್ತು ಸೂರ ಬಹಾರ್ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು.
[ಬದಲಾಯಿಸಿ] ಬಾಲ್ಯ ಜೀವನ ಮತ್ತು ಪ್ರಾಥಮಿಕ ಸಂಗೀತ ಶಿಕ್ಷಣ
ಅಲ್ಲಾವುದ್ದೀನರ ಜನ್ಮವಾಗಿದ್ದು ಈಗೀನ ಬಾಂಗ್ಲಾದೇಶದ ಬ್ರಾಹ್ಮಣ್ ಬರಿಯಾ ಜಿಲ್ಲೆಯ ಶಿಬಪುರದಲ್ಲಿ. ತಂದೆಯ ಹೆಸರು: ಸಬ್ದಾರ ಹೊಸೆನ್ ಖಾನ್ (ಸಾಧು ಖಾನರೆಂದಲೂ ಪರಿಚಿತ). ಅಲ್ಲಾವುದ್ದೀನರಿಗೆ ಅಣ್ಣನಾದ ಫಕಿರ್ ಅಫ್ತಾಬುದ್ದೀನರಿಂದ ಮನೆಯಲ್ಲಿಯೇ ಸಂಗೀತದ ಪ್ರಾಥಮಿಕ ಶಿಕ್ಷಣ.
ತಮ್ಮ ಹತ್ತನೇಯ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋದ ಅಲ್ಲಾವುದ್ದೀನರು ಬಂಗಾಲದ ಸಾಂಪ್ರದಾಯಿಕ ನಾಟಕ ತಂಡವಾಗಿದ್ದ 'ಜಾತ್ರಾ'ವನ್ನು ಸೇರಿದರು. ಅದು ಅವರಿಗೆ ಬಂಗಾಲದ ಶ್ರೀಮಂತ ಜಾನಪದ ಸಂಗೀತವನ್ನು ಪರಿಚಯಿಸಿತು. ಮುಂದೆ ಸ್ವಲ್ಪ ಸಮಯದ ನಂತರ ಕೊಲ್ಕತ್ತಾಗೆ ಹೋದಾಗ ಅಲ್ಲಿ ಗೋಪಾಲ ಕೃಷ್ಣ ಭಟ್ಟಾಚಾರ್ಯ(ನುಲೊ ಗೋಪಾಲರೆಂದಲೂ ಪರಿಚಿತ)ರು ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.ಅವರ ಹತ್ತಿರ ೧೨ವರ್ಷ ಕಾಲ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆಯುವದಾಗಿ ದೀಕ್ಷೆ ತೊಟ್ಟರು. ಆದರೆ, ಇವರ ೭ವರ್ಷದ ಶಿಕ್ಷಣದ ನಂತರ ನುಲೊ ಗೋಪಾಲರು ಪ್ಲೇಗಿಗೆ ಬಲಿಯಾದರು. ನಂತರ ಇವರು ಸ್ವಾಮಿ ವಿವೇಕಾನಂದರ ಹತ್ತಿರದ ಸಂಬಂಧಿಯಾಗಿದ್ದ ಮತ್ತು ಕೊಲ್ಕತ್ತಾದ ಸ್ಟಾರ ಥಿಯೆಟರದ ಸಂಗೀತ ನಿರ್ದೇಶಕರಾಗಿದ್ದ ಅಮೃತಲಾಲ ದತ್ತರ ಬಳಿ ವಾದ್ಯ ವಾದಕರಾಗಬೇಕೆಂಬ ಗುರಿಯಿಂದ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಇದೇ ಸಮಯದಲ್ಲಿಯೇ ಗೋವಾದಲ್ಲಿ ಬ್ಯಾಂಡಮಾಸ್ಟರರಾಗಿದ್ದ ಮಿ. ಲೊಬೊ ಎಂಬುವರ ಬಳಿ ಯುರೊಪಿಯನ್ ಶಾಸ್ತ್ರೀಯ ವಯಲಿನ್ನನ್ನು ಸಹ ಅಭ್ಯಸಿಸಿದರು.
[ಬದಲಾಯಿಸಿ] ಸರೋದ
ಒಮ್ಮೆ ಮುಕ್ತಾಗಚ್ಛಾದ ಜಮೀನ್ದಾರರಾಗಿದ್ದ ಜಗತ್ ಕಿಶೋರ ಆಚಾರ್ಯರ ಮನೆಯಲ್ಲಿ ಅಸ್ಘರ್ ಅಲಿ ಖಾನ(ಉ. ಅಮ್ಜದ ಅಲಿ ಖಾನರ ಅಜ್ಜನ ಸೋದರ)ರ ಶಿಷ್ಯರಾಗಿದ್ದ ಅಹ್ಮೆದ್ ಅಲಿ ಖಾನರ ಸರೋದ ವಾದನವನ್ನು ಕೇಳಿದ ನಂತರ ಅಲ್ಲಾವುದ್ದೀನರಿಗೆ ಸರೋದ ಕಲಿಯಬೇಕೆಂಬ ಆಸಕ್ತಿಯುಂಟಾಯಿತು.ಅಹ್ಮದ್ ಅಲಿಯವರ ಶಿಷ್ಯತ್ವ ಸ್ವೀಕರಿಸಿದ ಅಲ್ಲಾವುದ್ದೀನರು ಅವರ ಬಳಿ ೫ವರ್ಷಗಳ ಕಾಲ ಸರೋದ ವಾದನವನ್ನು ಅಭ್ಯಸಿಸಿದರು. ಇವರ ಮುಂದಿನ ಘಟ್ಟ, ತಾನಸೇನರ ಕೊನೆಯ ನೇರ ಸಂಬಂಧಿಯಾಗಿದ್ದ ಮತ್ತು ರಾಮಪುರದ ನವಾಬನ ಆಸ್ಥಾನದಲ್ಲಿ ಸಂಗೀತ ವಿದ್ವಾನರಾಗಿದ್ದ ಬಿನ್ ಕಾರ ವಝಿರ ಖಾನರ ಬಳಿ ಸಂಗೀತ ಕಲಿಯುವದಾಗಿತ್ತು. ಇದರೊಂದಿಗೆ ಇವರಿಗೆ ಉತ್ತರ ಭಾರತ ಸಂಗೀತದ ಅತ್ಯತ್ಕೃಷ್ಟ ಜ್ಞಾನ ನಿಧಿಯಾಗಿದ್ದ ಸೇನಿಯ ಘರಾಣಾ(ತಾನಸೇನರ ಸಂಗೀತ ಪರಂಪರೆ)ಕ್ಕೆ ನೇರ ಪ್ರವೇಶ ದೊರಕಿತು. ಮುಂದೆ ಇವರು ಮಧ್ಯ ಪ್ರಾಂತದ ಮೈಹಾರ ಪ್ರದೇಶದ ರಾಜನಾಗಿದ್ದ ಬ್ರಿಜ್ ನಾಥ ಸಿಂಘರ ಆಸ್ಥಾನ ಸಂಗೀತ ವಿದ್ವಾನರಾದರು.

