ಅರುಂಧತಿ ನಾಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಂಧತಿ ನಾಗ್
ಉದ್ಯೋಗನಟಿ
ಸಕ್ರಿಯ ವರ್ಷಗಳು೧೯೮೦–ಪ್ರಸ್ತುತ
ಜೀವನ ಸಂಗಾತಿಶಂಕರ್ ನಾಗ್

ಅರುಂಧತಿನಾಗ್ - ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ, ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಲ್ಲೊಬ್ಬರು. ಖ್ಯಾತ ನಟ, ನಿರ್ದೇಶಕ ಶಂಕರನಾಗ್ ಅವರ ಪತ್ನಿ ಅರುಂಧತಿನಾಗ್. ಈ ದಂಪತಿಗಳ ಮಗಳ ಹೆಸರು ಕಾವ್ಯ. ೧೯೯೦ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಅರುಂಧತಿನಾಗ್ ಅವರ ಪತಿ ಶಂಕರನಾಗ್ ಮೃತರಾದರು.

ಬದುಕಿನ ವಿವರಗಳು[ಬದಲಾಯಿಸಿ]

ಅರುಂಧತಿ ನಾಗ್ : ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ. ಪ್ರಸಿದ್ಧ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ (ನೋಡಿ) ಅವರ ಪತ್ನಿ. ಇವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿರುವಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ವ್ಯಕ್ತಿಯಾಗಿದ್ದರು. ಮರಾಠಿ, ಗುಜರಾತಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇವರು ಕೆಲವೊಮ್ಮೆ ತಿಂಗಳಲ್ಲಿ 42 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ಈ ದಿನಗಳಲ್ಲೇ ಸಹ ರಂಗನಟ ಶಂಕರನಾಗ್ ಅವರ ಪರಿಚಯವಾಯಿತು. ಪರಿಚಯ ಪ್ರೇಮವಾಗಿ ವಿವಾಹ ವಾದರು. ಅನಂತರ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಹಾಗೂ ಚಲನಚಿತ್ರ - ಈ ಎರಡೂ ಕ್ಷೇತ್ರಗಳಲ್ಲಿ ಇಬ್ಬರೂ ಕೆಲಸ ಮಾಡತೊಡಗಿದರು. ಈ ಎಲ್ಲ ಸಂದರ್ಭಗಳಲ್ಲಿ ಪತಿ ಶಂಕರನಾಗ್‍ಗೆ ನೆರವಾದರು. ಕೆಲವು ಸಂದರ್ಭಗಳಲ್ಲಿ ಶಂಕರನಾಗ್ ಅವರಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಶಂಕರನಾಗ್ ಹಿಂದಿಯ ಕಿರುತೆರೆಗಾಗಿ ಸಿದ್ಧಪಡಿಸಿದ ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ಇವರಿಬ್ಬರಿಗೂ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಅರುಂಧತಿಯವರು ಅನೇಕ ನಾಟಕ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಎಂಬ ನಾಟಕ ಇವರ ಅಭಿನಯದ ಅತ್ಯಂತ ಜನ ಪ್ರಿಯ ನಾಟಕ. ಇದು ಚಲನಚಿತ್ರವಾ ಗಿಯೂ ಆಪಾರ ಯಶಸ್ವಿಯಾಯಿತು. ಆಕ್ಸಿಡೆಂಟ್, ಗೋಲಿಬಾರ್, ಪರಮೇಶಿಯ ಪ್ರೇಮ ಪ್ರಸಂಗ ಇವರ ಅಭಿನಯದ ಇತರ ಚಿತ್ರಗಳು. ಮಣಿರತ್ನಂಅವರ ದಿಲ್‍ಸೆ ಎಂಬ ಹಿಂದಿ ಚಿತ್ರದಲ್ಲಿಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನಂತರ `ಪಾ’ ಎಂಬ ಹಿಂದಿ ಚಿತ್ರದಲ್ಲಿಅಭಿನಯಿಸಿ ಅಪಾರ ಮನ್ನಣೆಗಳಿಸಿದರು. ಶಂಕರ್‍ನಾಗ್ ನಿರ್ದೇಶನದ ‘ಒಂದು ಮುತ್ತಿನಕಥೆ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ದುಡಿದಿದ್ದಾರೆ. ಕಾರು ಅಪಘಾತವೊಂದರಲ್ಲಿಶಂಕರನಾಗ್ ನಿಧನರಾದಾಗ ಅದೇ ಕಾರಿನಲಿದ್ದ ಅರುಂಧತಿ ಪ್ರಾಣಾಪಾಯದಿಂದ ಪಾರಾದರು. ಪತಿಯನ್ನು ಕಳದುಕೊಂಡು ಕೆಲಕಾಲ ಎಲ್ಲ ಚಟುವಟಿಕೆಗಳಿಂದ ದೂರವಿದ್ದ ಇವರು ಅನಂತರ ಶಂಕರನಾಗ್ ಅವರ ಕನಸಿನ ಕಲ್ಪನೆಯ 'ರಂಗಶಂಕರ' ಎಂಬ ಸಮಗ್ರ ನಾಟಕ ಚಟುವಟಿಕೆಯ ಕೇಂದ್ರವೊಂದರ ನಿರ್ಮಾಣದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದ ಈ ರಂಗಭೂಮಿ ಸಂಕೀರ್ಣ ಯೋಜನೆ ಈಗ ಪೂರ್ಣಗೊಂಡಿದ್ದು ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ (2004). ಸಂಕೇತ್ ಟ್ರಸ್ಟ್ ‘ರಂಗಶಂಕರ’ದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತದೆ. ಗಿರೀಶ್ ಕಾರ್ನಾಡ್ ರಂಗಶಂಕರದ ಅಧ್ಯಕ್ಷರು. ಅರುಂಧತಿ ಅದರ ಕಾರ್ಯನಿರ್ವಾಹಕ ಸದಸ್ಯರು.

ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳು[ಬದಲಾಯಿಸಿ]

ಅರುಂಧತಿನಾಗ್ ಅಭಿನಯದ ಹಿಂದಿ ಚಲನಚಿತ್ರಗಳು[ಬದಲಾಯಿಸಿ]

  • ಪಾ

ರಂಗಶಂಕರ[ಬದಲಾಯಿಸಿ]

ಅರುಂಧತಿನಾಗ್ ನೇತೃತ್ವದ ಶಂಕರನಾಗ್ ಕನಸು

ರಂಗಶಂಕರ - ಕನ್ನಡ ರಂಗಭೂಮಿಗೆ ಶಂಕರನಾಗ್ ಕಂಡ ಕನಸು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ರಂಗಶಂಕರ, ಬೆಂಗಳೂರಿನ ಜೆ.ಪಿ.ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಶಸ್ತಿಗಳು[ಬದಲಾಯಿಸಿ]

೨೦೧೦ರಲ್ಲಿ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ದೇಶಕ ಆರ್.ಬಾಲಕೃಷ್ಣನ್ ಅವರ'ಪಾ'(ಹಿಂದಿ) ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅರುಂಧತಿ ನಾಗ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಈ ಪುಟಗಳನ್ನೂ ನೋಡಿ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: