ಅನಿಲ್ ಕುಮಾರ್ ಎಚ್.ಎ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಎಚ್. ಎ. ಅನಿಲ್ ಕುಮಾರ್ ಸಮಕಾಲೀನ ಭಾರತೀಯ ಹಾಗೂ ಕರ್ನಾಟಕದ ದೃಶ್ಯಕಲೆಯ ಬಗ್ಗೆ ಕಳೆದೆರೆಡು ದಶಕಗಳಿಂದ (೧೯೯೨ರಿಂದ) ಚಿಂತಿಸಿ,ಶೈಕ್ಷಣಿಕ ಶಿಸ್ತನ್ನು ರೂಪಿಸುತ್ತ, ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಬರೆಯುತ್ತಿರುವ ಕಲಾವಿಮರ್ಶಕ, ಕಲಾಇತಿಹಾಸಕಾರ ಹಾಗೂ ಸಮಕಾಲೀನ ಕ್ಯುರೇಟರ್. ನಿರ್ದಿಷ್ಟವಾಗಿ, ಬೆಂಗಳೂರಿನಲ್ಲಿ ಕಲೆಗೆ ಆರ್ಥಿಕ ಆಧಾರದ ಕೊರತೆ ಇದ್ದಾಗ, ಅದಕ್ಕೆ ಆಸರೆಯಾದ ಗ್ಯಾಲರಿ ವ್ಯವಸ್ಥೆಯ ಗಾಂಭೀರ್ಯರಹಿತತೆಯ ಬಗ್ಗೆ ಒಂದು ತಲೆಮಾರಿನ ಕಲಾವಿದರು ಪ್ರತಿರೋಧ ಒಡ್ಡಿದ್ದಾರೆ. ಅದಕ್ಕೆ ಪರ್ಯಾಯವಾದ ಅರ್ಥಿಕ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಡುಕೊಂಡು, ಅದರಲ್ಲಿ ತಾವೂ ಭಾಗಿಯಾಗಿ, ಅದರಂತೆ ಇತರರನ್ನು, ಒಂದು ತಲೆಮಾರು, ಪೀಳಿಗೆಯ 'ಪರ್ಯಾಯ ಮಾರ್ಗಿ' ಕಲಾಸಮೂಹವನ್ನೇ ಹುಟ್ಟುಹಾಕಿದರು. ಆ ಪೀಳಿಗೆಯಲ್ಲಿ ಬೆರಳೆಣಿಕೆಯಷ್ಟು ಬರಹಗಾರರಲ್ಲಿ ಅನಿಲ್ ಕುಮಾರ್ ಒಬ್ಬರು. ಇವರ ಪ್ರಮುಖ ಚಿಂತನಾಧಾರೆಯು ಮೊದಲಿಗೆ ಕಲಾಶಿಕ್ಷಣದಲ್ಲಿ ಚಾಲ್ತಿಯಲ್ಲಿದ್ದ 'ರೂಪನಿಷ್ಠತೆ'ಯನ್ನು(ಫಾರ್ಮಲಿಸಂ)ಪುನರ್‍‍ವ್ಯಾಖ್ಯಾನಕ್ಕೊಳಪಡಿಸುತ್ತದೆ. ಭಾರತೀಯ ಸಂಸ್ಕೃತಿಯ ಚಿಂತನಾಧಾರೆಯಲ್ಲಿ ಜಾತೀಯತೆಯ ಅಂಶವನ್ನು ವರ್ಗಸಂಘರ್ಷಕ್ಕೆ ಹಾಗೂ ಸಂವರ್ಧನೆಗೆ ಒಡ್ಡಿದಂತೆ, ಅದೇ ಜಾತೀಯತೆಯನ್ನು ರೂಪಕವನ್ನಾಗಿ, ಸಾಂಸ್ಕೃತಿಕ ಚಿಂತನೆಗೂ ಹಚ್ಚಬಹುದಾಗಿದೆ. ಆಗ ಸಾಹಿತ್ಯ ಪ್ರಣೀತ ಸಂಸ್ಕೃತಿಯೊಂದರಲ್ಲಿ ಆಸಡ್ಡೆಗೊಳಗಾದ, ನಿಕೃಷ್ಠತೆಯ ಹೊದಿಕೆ ತೊಟ್ಟಂತಹ ದೃಶ್ಯಕಲೆಯಂತಹ ಅಧ್ಯಯನಾಂಗಗಳ, ಶೈಕ್ಷಣಿಕಾಂಗಗಳ ಪರಿಸ್ಥಿತಿಯೇನು? ಎಂಬಂತಹ ಪ್ರಶ್ನೆಯನ್ನು ತಮ್ಮ ಬರಹ, ಮಾತುಗಳಲ್ಲಿ ಅನಿಲ್ ಕುಮಾರ್ ರೂಪಿಸಿದ್ದಾರೆ. ದೃಶ್ಯಕಲೆಯ ಕೇವಲ ಸಾಮೂಹಿಕ ರಂಜನೆಗಾಗಲ್ಲದೆ, ದೃಶ್ಯತತ್ವ ಪ್ರತಿಪಾದನೆಯ ಆಯಾಮದ ಮಹತ್ವವನ್ನು ಇವರ ಚಿಂತನೆ ಒಳಗೊಂಡಿದೆ.

ದೃಶ್ಯತತ್ವ :[ಬದಲಾಯಿಸಿ]

ಕನ್ನಡದಲ್ಲಿ ದೃಶ್ಯಕಲೆಯ ಬಗ್ಗೆ ಅಕೆಡೆಮಿಕ್ ಶಿಸ್ತಿನಿಂದ ಬರೆದ ಮೊದಲಿಗರು ಇವರು. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಒಮ್ಮೆಲೆ ಬರೆವ ಮೂಲಕ 'ಭಾಷಾಂತರ'ವೆಂಬ ದೃಶ್ಯಭಾಷಾ ಶಾಸ್ತ್ರಕ್ಕೂ ಸಾಕಷ್ಟು ಕೊಡುಗೆ ನೀಡಿರುವ ಇವರು ಕರ್ನಾಟಕದ ಪ್ರಮುಖ ಕಲಾಶಾಲೆಗಳ ಕಲಾಇತಿಹಾಸದ ಸಿಲೆಬಸ್ ಅನ್ನು ರೂಪಿಸಿದವರಲ್ಲಿ ಪ್ರಮುಖರು (ಟಿ.ಪಿ.ಇಸ್ಸಾರ್ ಸಮಿತಿಯಲ್ಲಿ). ಇಂದಿಗೂ ಇದು ಅತ್ಯಂತ್ಯ ಪ್ರಸ್ತುತವಿರುವ ಸಿಲಬಸ್. ಕಲಾ ಪತ್ರಿಕಧರ್ಮಕ್ಕೆ (ಆರ್ಟ್ ಜರ್ನಲಿಸಂ)ಹಾಗೂ ದೃಶ್ಯಶೈಕ್ಷಣಿಕತೆಗೆ ಇವರ ಕೊಡುಗೆಯು ಹಲವು ರೂಪಗಳಲ್ಲಿವೆ. ೧೯೯೦ರ ದಶಕದಿಂದ ನಿರಂತರ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಂಸ್ಕೃತಿ ಶಿಬಿರದಿಂದ ಹಿಡಿದಿ ಕರ್ನಾಟಕದ ಪ್ರಮುಖ ಕಲಾಶಾಲೆಗಳಲ್ಲೆಲ್ಲ ಇವರು 'ಕಲಾರಸಗ್ರಹಣ ಶಿಬಿರ'ಗಳನ್ನು ಏರ್ಪಡಿಸಿದ್ದಾರೆ. ದೃಶ್ಯವಿಫುಲತೆ ಇರುವೆಡೆ ದೃಶ್ಯಜ್ನಾನ, ದೃಶ್ಯಗ್ರಹಣವನ್ನು ಹೆಚ್ಚಿಸುವಲ್ಲಿ ಇವರ ಕೊಡುಗೆ ಪುಸ್ತಕಗಳು, ಕೆಟಲಾಗ್‌ಗಳು ಹಾಗೂ ವಿಮರ್ಶಾರೂಪದಲ್ಲಿ ಮೂಡಿಬಂದಿವೆ.

ಪುಸ್ತಕಗಳು:[ಬದಲಾಯಿಸಿ]

  • "ನೋಟ ಪಲ್ಲಟ",(ಕನ್ನಡ, ೧೯೯೮, ೨೦೦೦, ೨೦೦೮)ಸಮಕಾಲೀನ ದೃಶ್ಯಕಲೆ (ಕರ್ನಾಟಕವನ್ನೂ ಸೇರಿಸಿದಂತೆ)ಯನ್ನು ಕುರಿತ ಲೇಖನಗಳ ಸಂಗ್ರಹ.
  • "ಕೆ.ಟಿ.ಶಿವಪ್ರಸಾದ್" (ಇಂಗ್ಲೀಷ್-ಕನ್ನಡ, ೧೯೯೮), ಕರ್ನಾಟಕದ ಕಲಾವಿದರನ್ನು ಕುರಿತ ಮೊನೊಗ್ರಾಫ್.
  • "ಶಂಕರೇಗೊಡ ಬೆಟ್ಟದೂರು" (ಇಂಗ್ಲೀಷ್-ಕನ್ನಡ, ೨೦೦೮), ಶಾಂತಿನಿಕೇತನದಲ್ಲಿ ಅಧ್ಯನಯ ಮಾಡಿದ ಮೊದಲ ಕರ್ನಾಟಕದ ಕಲಾವಿದನನ್ನು ಕುರಿತ ಮೊನೊಗ್ರಾಫ್.
  • "Call of the Mountains" (ಇಂಗ್ಲೀಷ್, ಸಹಸಂಪಾದಕ, ೨೦೦೩), ಸ್ವೆಟಸ್ಲಾವ್ ಮತ್ತು ನಿಕೊಲಸ್ ರೋರಿಕ್ ಕಲಾವಿದರ ಕೊಡುಗೆಯನ್ನು ಕುರಿತ ಸಹಲ್ತ್ದೇಖಕತ್ವದ ಪುಸ್ತಕ,ಕಲಾವಿಮರ್ಶಕ ಎಸ್.ಎನ್.ಚಂದ್ರಶೇಖರ್ ಸಂಪಾದಿಸಿರುವ ಈ ಪುಸ್ತಕವು ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಪ್ರಕಟಿಸಲ್ಪಟ್ಟಿದೆ.
  • "ಕಿಟಕಿಯಾಚೆಗೊಂದು ಉತ್ತರ ಧೃವ--ಫಿನ್ಲೆಂಡ್ ಮತ್ತು ರಷ್ಯ ಪ್ರವಾಸ ಕಥನ" (ಕನ್ನಡ, ೨೦೧೧, ಬೆಳಕಿಂಡಿ ಪ್ರಕಾಶನ), ೨೦೦೧ ಹಾಗೂ ೨೦೦೪ರಲ್ಲಿ ಯುನೆಸ್ಕೊ-ಆಶ್‍ಬರ್ಗ್ ಕಲಾವೇತನದಡಿ (ಫೆಲೋಷಿಪ್) ಅಲ್ಲಿನ ಕಲಾರಂಗವನ್ನು ಅಧ್ಯಯನ ಮಾಡಲು ಕೈಗೊಂಡ ಮೂರು ತಿಂಗಳ ಕಲಾನುಭವದ ಪ್ರವಾಸಕಥನವಿದು.
  • "ಶಾಂತಿನಿಕೇತನ ಎಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ" (ಕನ್ನಡ, ೨೦೧೧, ಬೆಳಕಿಂಡಿ ಪ್ರಕಾಶನ), ೧೯೯೦ರಿಂದ ೨೦೧೦ರವರೆಗೆ ಅನಿಲ್ ಕುಮಾರ್ ಶಾಂತಿನಿಕೇತನದ ಕಲಾಇತಿಹಾಸದ ವಿದ್ಯಾರ್ಥಿಯಾಗಿ, ತದನಂತರ ಕಲಾಇತಿಹಾಸಕಾರ ಮತ್ತು ವಿಮರ್ಶಕನಾಗಿ, ಪುನಃ ಪುನಃ ಭಾರತದ ಮೊದಲ ಆಧುನಿಕ ಕಲೆಗಳ ತವರಾದ ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದು, ಅಲ್ಲಿನ ಕಲಾವಿದ್ಯಾರ್ಥಿಗಳು, ಉಪಾಧ್ಯಾಯರು, ಕಲಾವಿದರು ಹಾಗೂ ಕಲಾಕೃತಿಗಳೊಂದಿಗೆ ಆದ ಅನುಭವ, ಅನಿಸಿಕೆ, ವಿಮರ್ಶೆ ಹಾಗೂ ವ್ಯಾಖ್ಯಾನವನ್ನು ಈ ಪುಸ್ತಕ ಒಳಗೊಂಡಿದೆ. ಹಾಸ್ಯಮಿಶ್ರಿತ ಕುತೂಹಲ ಬೆರೆತ ಶೈಲಿಯೊಂದನ್ನು ಕಲಾರಸಸ್ವಾಧನೆಗೆ ಅಳವಡಿಸಲು ಸಾಧ್ಯವೆ ಎಂಬ ಪ್ರಯೋಗದ ಪರಿಣಾಮವೇ ಈ ಪುಸ್ತಕಗಳು ಎಂದು ಲೇಖಕರು ಮುನ್ನುಡಿಯಲ್ಲಿ ಹೇಳಿದ್ದಾರೆ. ಅಪರೂಪವಾಗುತ್ತಿರುವ ಕನ್ನಡ ದೃಶ್ಯಕಲಾಸಾಹಿತ್ಯಕ್ಕೆ ಇದೊಂದು ಅಪರೂಪದ ಸೇರ್ಪಡೆ. ಕಲಾವಿದ್ಯಾರ್ಥಿಗಳಿಗೇ ನಿರ್ದಿಷ್ಟವಾದ ಶೈಕ್ಷಣಿಕ ಮಹತ್ವದ ಕೃತಿಗಳಿವು.
  • ""'ನೋಡುವ ಬಗೆ'"", (ಕಡಲು ಪ್ರಕಾಶನ, ಬೆಂಗಳೂರು, ೨೦೧೨): ದೃಶ್ಯಕಲೆಯನ್ನು ಕುರಿತಾದ ಬಿ.ಬಿ.ಸಿ ಕಲಾ ರಸಗ್ರಹಣ ಟೆಲಿವಿಷನ್ ಕಾರ್ಯಕ್ರಮವನ್ನು ‘ವೇಸ್ ಆಫ್ ಸೀಯಿಂಗ್’ (೧೯೭೨) ಪುಸ್ತಕವನ್ನಾಗಿ ಜಾನ್ ಬರ್ಜರನು ಪ್ರಸಿದ್ಧಗೊಳಿಸಿದ ವರ್ಷವೇ ಆತನಿಗೆ ‘ಬುಕರ್ ಪ್ರಶಸ್ತಿ’ಯೂ ದೊರಕಿತು. ಎಡಪಂಥೀಯ, ಮಾರ್ಕ್ಸ್-ವಾದಿ ದೃಷ್ಟಿಕೋನದಿಂದ ದೃಶ್ಯಕಲೆಯನ್ನು ಪರಿಗಣಿಸಲಾಗಿರುವ ಈ ಪುಸ್ತಕವು ಭಾರತೀಯ ಕಲಾಶಾಲೆಗಳಲ್ಲಿ ಅನೌಪಕಾರಿಕ ಪಠ್ಯಪುಸ್ತಕವು ಆಗಿತ್ತು. ಪ್ರಾಯಶಃ ಮೊದಲ ಭಾರಿಗೆ, ನಾಲ್ಕು ದಶಕದ ನಂತರ ಯಾವುದೇ ಭಾರತೀಯ ಭಾಷೆಗೆ ಭಾಷಾಂತರವಾಗಿರುವ ಈ ಪುಸ್ತಕ ಪ್ರಕಟವಾಗಿರುವುದು ಕನ್ನಡದಲ್ಲಿಯೇ, ‘ನೋಡುವ ಬಗೆ’ ಪುಸ್ತಕವಾಗಿ. ಅಸಲಿ ಪುಸ್ತಕದ ವಿನ್ಯಾಸದಲ್ಲಿ ಮೂರೂ ಅಧ್ಯಾಯಗಳು ಅಕ್ಷರಗಳಿಲ್ಲದ ದೃಶ್ಯಾಧ್ಯಾಯಗಳಾಗಿರುವುದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಈ ತರ್ಜುಮೆಗೊಂಡಿರುವ ಪುಸ್ತಕದಲ್ಲಿಯೂ ಸಹ. ಕರ್ನಾಟಕದ ಕಲಾಶಾಲೆಗಲ್ಲಿ, ಕನ್ನಡದಲ್ಲಿಯೇ ಜಗತ್ತಿನ ಕಲೆಯ ಬಗ್ಗೆ ಅರಿವು ಮೂಡಿಸಲು ಈ ಪುಸ್ತಕವನ್ನು ಪ್ರಕಟಿಸಲಾಗಿದೆ.
  • ""ಪ್ರೊ.ಎಂ.ಎಸ್. ನಂಜುಂಡರಾವ್: ದೃಶ್ಯಶಿಕ್ಷಣದ ಸೂತ್ರಧಾರ"", (ಕನ್ನಡ ಹಾಗೂ ಇಂಗ್ಲೀಷ್, ದ್ವಿಭಾಷೀಯ), ನವೆಂಬರ್ ೨೦೧೮, ಲಲಿತಕಲಾ ಅಕಾಡೆಮಿ ಪ್ರಕಟಣೆ, ೨೦೧೯

ಪ್ರಶಸ್ತಿ ಪುರಸ್ಕಾರಗಳು:[ಬದಲಾಯಿಸಿ]

  • ೨೦೦೪ -- ಫಿನ್ಲೆಂಡಿನ ಹೆಲ್ಸಿಂಕಿ ನಗರದ 'ಹಿಯಾಪ್'(ಹೆಲ್ಸಿಂಕಿ ಅಂತರರಾಷ್ಟ್ರೀಯ ಕಲಾ ರೆಸಿಡೆನ್ಸಿ ಪ್ರೊಗ್ರಾಮ್)ನಲ್ಲಿ ಯುನೆಸ್ಕೊ-ಆಶ್‌ಬರ್ಗ್ ಪ್ರಶಸ್ತಿ ಆಧಾರದಿಂದ ಮೂರು ತಿಂಗಳು ಅಲ್ಲಿನ ಸಮಕಾಲೀನ ಕಲೆಯ ಅಧ್ಯಯನ.
  • ೨೦೦೪ - ೨೦೦೫ -- ಚಾರ್ಲ್ಸ್ ವಾಲೆಸ್ ಟ್ರಸ್ಟ್ ಆಫ್ ಇಂಡಿಯ (ಬ್ರಿಟಿಷ್ ಸಂಸ್ಥೆಯ)ಫೆಲೋಷಿಪ್ ಪಡೆದು, ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ ಎಂ.ಎಂ ಅಧ್ಯಯನ (ಸಮಕಾಲೀನ ಕ್ಯುರೇಷನ್ನಿನಲ್ಲಿ)
  • ೨೦೧೨ - ಪ್ರೊ-ಹೇಲ್ವೇಶಿಯಾ ಸ್ವಿಟ್ಸಲೆಂಡ್ ಕಲಾ ಪ್ರವಾಸ ಫೆಲೋಶಿಪ್
  • ೨೦೧೩ - ‘ಡೆಡಿಕೇಟೆಡ್ ಟೀಚರ್’ ಬಿ.ಸಿ. ಸನ್ಯಾಲ್ ಪ್ರಶಸ್ತಿ, ಡೆಲ್ಲಿ ಕಾಲೇಜ್ ಆಫ್ ಆರ್ಟ್ಸ್
  • ೨೦೧೭ - ’ಚಾಣಕ್ಯ ಪ್ರಶಸ್ತಿ’, ವರ್ಷದ ಅತ್ಯುತ್ತಮ ಸಂವಹನಕಾರ (ಪಿ.ಆರ್.ಸಿ.ಐ: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಪ್ ಇಂಡಿಯಾ)
  • ೨೦೧೯ - ’ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ (ಚಿತ್ರಕಲೆ), ಕರ್ನಾಟಕ ಸರ್ಕಾರ.

ಅನ್ಯ ಆಧಾರಗಳು:[ಬದಲಾಯಿಸಿ]