ಓಂ ಶಾಂತಿ ಓಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Om Shanti Om
ಚಿತ್ರ:Omshantiom.jpg
Movie poster
ನಿರ್ದೇಶನFarah Khan
ನಿರ್ಮಾಪಕGauri Khan
ಲೇಖಕTopper Alam
Abbas Tyrewala
ಪಾತ್ರವರ್ಗShahrukh Khan
Deepika Padukone
Kirron Kher
Shreyas Talpade
Arjun Rampal
Yuvika Choudhary
ಸಂಗೀತVishal-Shekhar
ಛಾಯಾಗ್ರಹಣV. Manikandan
ಸಂಕಲನShirish Kunder
ವಿತರಕರುRed Chillies Entertainment
Eros Labs
ಬಿಡುಗಡೆಯಾಗಿದ್ದುNovember 9, 2007
ಅವಧಿ170 mins
ದೇಶಭಾರತIndia
ಭಾಷೆHindi
ಬಂಡವಾಳRs. 45 crores
ಬಾಕ್ಸ್ ಆಫೀಸ್$39,987,977[೧]

ಓಂ ಶಾಂತಿ ಓಂ (ಹಿಂದಿ:ओम शान्ति ओम), 2007ರಲ್ಲಿ ಬಂದ ಒಂದು ಬಾಲಿವುಡ್‌ ಚಲನಚಿತ್ರವಾಗಿದ್ದು, ಫರಾಹ್‌ ಖಾನ್‌ ಇದನ್ನು ನಿರ್ದೇಶಿಸಿ, ನೃತ್ಯ ಸಂಯೋಜಿಸಿದ್ದಾರೆ. ಇದರ ಮುಖ್ಯ ಪಾತ್ರಗಳಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಇದ್ದರೆ, ಶ್ರೇಯಸ್ ತಲ್ಪಾಡೆ, ಅರ್ಜುನ್ ರಾಂಪಾಲ್, ಮತ್ತು ಕಿರಣ್ ಖೇರ್ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.ಅರ್ಜುನ್ ರಾಂಪಾಲ್‌ಗೆ ಈ ಚಲನಚಿತ್ರದಲ್ಲಿ ಪ್ರತಿನಾಯಕನ ಪಾತ್ರವಿದೆ.ಬಾಲಿವುಡ್‌ನ ನಲವತ್ತೆರಡಕ್ಕೂ ಹೆಚ್ಚಿನ ಜನಪ್ರಿಯ ತಾರೆಯರು ಈ ಚಲನಚಿತ್ರದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಅವರಲ್ಲಿ ಸುಮಾರು ಮೂವತ್ತು ಮಂದಿ (ಸದರಿ ಚಲನಚಿತ್ರದ ತಾರೆಗಳನ್ನು ಇದರಲ್ಲಿ ಸೇರಿಸಲಾಗಿಲ್ಲ) ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಕಥಾವಸ್ತು[ಬದಲಾಯಿಸಿ]

ನಾಯಕ ಪಾತ್ರದಲ್ಲಿರುವ ಓಂ ಪ್ರಕಾಶ್ ಮಖೀಜಾ (ಶಾರುಖ್ ಖಾನ್) 1970ರ ದಶಕದ ಚಲನಚಿತ್ರೋದ್ಯಮದಲ್ಲಿ ಓರ್ವ ಕೆಳದರ್ಜೆಯ ಕಲಾವಿದನಾಗಿರುತ್ತಾನೆ. ಆತ ಮತ್ತು ಆತನ ಸ್ನೇಹಿತ ಪಪ್ಪು (ಶ್ರೇಯಸ್ ತಲ್ಪಾಡೆ) ಇಬ್ಬರೂ ನಾಯಕ ನಟರಾಗಿ ಯಶಸ್ಸು ಗಳಿಸಲು ಪ್ರಯತ್ನಿಸುತ್ತಿರುತ್ತಾರೆ. ಓಂನ ತಾಯಿಯಾದ ಬೇಲಾ ಮಖೀಜಾ (ಕಿರಣ್ ಖೇರ್), ಸ್ವತಃ ಓರ್ವ ಕೆಳದರ್ಜೆಯ ಕಲಾವಿದೆಯಾಗಿದ್ದು, ತನ್ನ ಮಗನ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹಗಳನ್ನು ನೀಡುತ್ತಿರುತ್ತಾಳೆ. ಆತ ಚಲನಚಿತ್ರ ಕಲಾವಿದೆ ಶಾಂತಿ ಪ್ರಿಯಾಳನ್ನು (ದೀಪಿಕಾ ಪಡುಕೋಣೆ) ಪ್ರೀತಿಸುತ್ತಿರುತ್ತಾನೆ.

ತಾನು ಚಿತ್ರನಟ ಮನೋಜ್ ಕುಮಾರ್ ಎಂದು ಪ್ರತಿಪಾದಿಸಿಕೊಳ್ಳುವ ಮೂಲಕ, ಓಂ ಒಂದು ಸಂಜೆ ಶಾಂತಿ ಪ್ರಿಯಾಳ ಡ್ರೀಮಿ ಗರ್ಲ್‌ ಚಲನಚಿತ್ರದ ಪ್ರಥಮ ಪ್ರದರ್ಶನವನ್ನು ವೀಕ್ಷಿಸುತ್ತಾನೆ. ತೆರೆಯ ಮೇಲೆ ಓಂ ವೀಕ್ಷಿಸುವ ದೃಶ್ಯಗಳನ್ನು ರೂಪಿಸಲು ಹಳೆಯ ಬಾಲಿವುಡ್‌ ಚಲನಚಿತ್ರಗಳ ದೃಶ್ಯಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಡ್ರೀಮಿ ಗರ್ಲ್‌ ಚಿತ್ರವು ಪ್ರಾರಂಭವಾಗುವುದಕ್ಕೆ ಮುಂಚೆ ಹಾಗೂ ಅದರ ಪ್ರದರ್ಶನದ ಅವಧಿಯಲ್ಲಿ, ತಾನು ಆ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವಂತೆ ಹಾಗೂ ಶಾಂತಿ ಪ್ರಿಯಾಳ ಗಮನ ಸೆಳೆಯಲು ಪ್ರಯತ್ನಿಸುತ್ತಿರುವಂತೆ ಆತ ಸ್ವತಃ ಕಲ್ಪಿಸಿಕೊಳ್ಳುತ್ತಿರುವ ಹಾಗೆ ಚಿತ್ರದಲ್ಲಿ ಅವನನ್ನು ತೋರಿಸಲಾಗಿದೆ. ನಂತರ ಅದೇ ರಾತ್ರಿ ಚೆನ್ನಾಗಿ ಕುಡಿದು, ಪಪ್ಪು ಹಾಗೂ ಅಲ್ಲಿನ ಕೆಲವೊಂದು ಮಕ್ಕಳೊಂದಿಗೆ ಮಾತಿಗೆ ತೊಡಗುವ ಓಂ, ಸ್ವತಃ ತಾನೋರ್ವ ಜನಪ್ರಿಯ, ಶ್ರೀಮಂತ ಚಿತ್ರತಾರೆಯೆಂಬಂತೆ ರೂಪಿಸಿಕೊಂಡ ತನ್ನ ದೃಷ್ಟಿಕೋನವನ್ನು ಅವರಿಗೆ ವಿವರಿಸತೊಡಗುತ್ತಾನೆ. ಅವನ ಈ ಮಾತಿನ ಲಹರಿಯಲ್ಲಿ ಹೊರಬೀಳುವ ಆಕರ್ಷಣೆಯ ನಿಯಮದ ಕುರಿತಾದ ಉಲ್ಲೇಖಗಳೇ ಈ ಚಿತ್ರದ ಕಥೆಯಾದ್ಯಂತ ಮರುಕಳಿಸುವ ಆಧಾರಸೂತ್ರವೊಂದನ್ನು ಸೃಷ್ಟಿಸುತ್ತವೆ.

ಮತ್ತೊಂದು ಸನ್ನಿವೇಶದಲ್ಲಿ, ಚಲನಚಿತ್ರದ ದೃಶ್ಯವೊಂದರ ಎಕ್ಸ್‌ಟ್ರಾ-ಕಲಾವಿದನಾಗಿ ಓಂ ಅಭಿನಯಿಸುತ್ತಿರುತ್ತಾನೆ. ಅದರ ಚಿತ್ರೀಕರಣದ ಅವಧಿಯಲ್ಲಿ, ಬೆಂಕಿಯ ದೃಶ್ಯವೊಂದರ ಮಧ್ಯದಲ್ಲಿ ಶಾಂತಿಯು ಸಿಲುಕಿಕೊಂಡಿರುವುದು ಮತ್ತು ಆ ಬೆಂಕಿಯು ಮಿತಿಮೀರಿದ ಪ್ರಮಾಣದಲ್ಲಿರುವುದು ಅವನ ಗಮನಕ್ಕೆ ಬರುತ್ತದೆ. ಸದರಿ ಚಿತ್ರದ ನಾಯಕ ಪಾತ್ರಧಾರಿ ಅವಳನ್ನು ಉಳಿಸಲು ವಿಫಲನಾದಾಗ, ಅವನ ಬದಲಿಗೆ ತೆರಳಿದ ಓಂ ಅವಳನ್ನು ಉಳಿಸುತ್ತಾನೆ ಹಾಗೂ ಇದರಿಂದಾಗಿ ಅವರಿಬ್ಬರೂ ಸ್ನೇಹಿತರಾಗುತ್ತಾರೆ. ತಾನೊಬ್ಬ ನಾಯಕನಟನೆಂಬಂತೆ ಮತ್ತು ತನ್ನ ಚಿತ್ರಗಳನ್ನು ತಾನೇ ನಿರ್ಮಿಸುವುದು ಎಂಬಂತೆ ನಾಟಕವಾಡುವ ಮೂಲಕ ಆಕೆಯನ್ನು ಆಶ್ಚರ್ಯಚಕಿತಗೊಳಿಸಲು ಮೊದಮೊದಲು ಆತ ಪ್ರಯತ್ನಿಸುತ್ತಾನೆ. ಆದರೆ ಈ ಪ್ರಯತ್ನಗಳೆಲ್ಲಾ ಅನವಶ್ಯಕ ಎಂದು ಅರಿವಾದಾಗ ಕೊನೆಗೆ ತಪ್ಪೊಪ್ಪಿಕೊಳ್ಳುತ್ತಾನೆ. ಅದೇ ರಾತ್ರಿ, ಚಲನಚಿತ್ರದ ಸೆಟ್‌ ಒಂದಕ್ಕೆ ಶಾಂತಿಯನ್ನು ಓಂ ಆಹ್ವಾನಿಸುತ್ತಾನೆ. ಅಲ್ಲಿ ಪಪ್ಪುವಿನ ನೆರವಿನೊಂದಿಗೆ ಸೆಟ್‌ನ ಸಾಮಗ್ರಿಗಳು ಹಾಗೂ ಹಲವಾರು ಹಿನ್ನೆಲೆ ದೃಶ್ಯಗಳನ್ನು ಬಳಸಿಕೊಳ್ಳುವ ಆತ ಒಂದು ಅದ್ಭುತವಾದ ದೃಶ್ಯವೈಭವವನ್ನೇ ಸೃಷ್ಟಿಸಿಬಿಡುತ್ತಾನೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ರಮ್ಯವಾದ ಹಾಡಿನ ಸನ್ನಿವೇಶವೇ ಮೈದಳೆಯುತ್ತದೆ.

ಮಾರನೆಯ ದಿನ, ಚಲನಚಿತ್ರದ ಸೆಟ್‌ ಒಂದರಲ್ಲಿ ಶಾಂತಿಯೊಂದಿಗೆ ಮಾತನಾಡಲು ಓಂ ಪ್ರಯತ್ನಿಸುತ್ತಾನೆ. ಆದರೆ ಇದಕ್ಕೆ ಅವಳು ಅಷ್ಟಾಗಿ ಓಗೊಡುವುದಿಲ್ಲ. ಅವಳನ್ನು ಅಲಂಕಾರದ ಕೊಠಡಿಯವರೆಗೂ ಹಿಂಬಾಲಿಸುವ ಆತ, ಚಿತ್ರ ವೀಕ್ಷಕರ ಹೊರತಾಗಿ ಬೇರಾರಿಗೂ ಕಾಣದ ಜಾಗದಲ್ಲಿದ್ದುಕೊಂಡು, ಆ ಚಿತ್ರದ ನಿರ್ಮಾಪಕ ಮುಖೇಶ್ ಮೆಹ್ರಾ (ಅರ್ಜುನ್ ರಾಂಪಾಲ್) ಜೊತೆಗೆ ಆಕೆಯು ವಾದಮಾಡುವುದನ್ನು ಕದ್ದು ಕೇಳಿಸಿಕೊಳ್ಳುತ್ತಾನೆ. ತನ್ನ ಚಿತ್ರಕ್ಕೆ ಹಣಕಾಸಿನ ಸಹಾಯವನ್ನು ಒದಗಿಸಿದ ಓರ್ವ ವ್ಯವಹಾರಸ್ಥನ ನೆರವಿಗೆ ಪ್ರತಿಯಾಗಿ ಆತನ ಮಗಳನ್ನು ಮದುವೆಯಾಗುವುದಾಗಿ ಮುಖೇಶ್ ಇತ್ತೀಚೆಗೆ ಮಾತುಕೊಟ್ಟಿರುವುದರ ಕುರಿತು ಸದರಿ ವಾದವು ನಡೆಯುತ್ತದೆ. ಶಾಂತಿಗೆ ಈಗಾಗಲೇ ಮುಖೇಶ್‌ನೊಂದಿಗೆ ರಹಸ್ಯವಾಗಿ ಮದುವೆಯಾಗಿದೆ ಮತ್ತು ಮುಖೇಶ್‌ನ ಮಗುವಿಗೆ ಶಾಂತಿ ತಾಯಿಯಾಗುತ್ತಿದ್ದಾಳೆ ಎಂಬ ಗುಟ್ಟು ಇಲ್ಲಿ ಅನಾವರಣಗೊಳ್ಳುತ್ತದೆ. ಶಾಂತಿಯೊಂದಿಗಿನ ತನ್ನ ಸಂಬಂಧವನ್ನು ರಹಸ್ಯವಾಗಿಡಬೇಕು ಎಂದು ಒತ್ತಾಯಿಸುವ ಮುಖೇಶ್, ಒಂದು ವೇಳೆ ಈ ರಹಸ್ಯ ಬಹಿರಂಗವಾದರೆ ತನ್ನ ಎಲ್ಲಾ ಯೋಜನೆಗಳೂ ಹಾಳಾಗುತ್ತವೆ ಎಂದು ವಾದಿಸುತ್ತಾನೆ. ಆದರೆ, ತಾವಿಬ್ಬರೂ ಬಹಿರಂಗವಾಗಿಯೇ ಮದುವೆಯಾಗಬೇಕು ಎಂದು ಶಾಂತಿ ಬೇಡಿಕೆಯನ್ನು ಮುಂದಿಡುತ್ತಾಳೆ. ತಾನು ಗರ್ಭಿಣಿಯಾಗಿರುವ ವಿಷಯವನ್ನು ಆಕೆ ಹೊರಗೆಡಹಿದಾಗ ಮುಖೇಶ್ ತನ್ನ ಪಟ್ಟು ಸಡಿಲಿಸುತ್ತಾನೆ. ಇದನ್ನು ಕೇಳಿ ತೀವ್ರ ನಿರಾಶೆಗೆ ಸಿಲುಕುವ ಓಂ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ ಮತ್ತು ಕೆಲವಾರು ದಿನಗಳವರೆಗೆ ಹತಾಶ ಮತ್ತು ದುಃಖಿತ ಸ್ಥಿತಿಯಲ್ಲೇ ಇರುತ್ತಾನೆ.

ಒಂದು ರಾತ್ರಿ, ತಮ್ಮ ಪೂರ್ವ ನಿಯೋಜಿತ ಓಂ ಶಾಂತಿ ಓಂ ಚಿತ್ರದ ಸೆಟ್ಟಿಗೆ ಮುಖೇಶ್ ಶಾಂತಿಯನ್ನು ಕರೆದುಕೊಂಡು ಹೋಗುವುದನ್ನು ಓಂ ನೋಡುತ್ತಾನೆ. ಸೆಟ್ಟಿನ ಒಳಗೆ ಹೋದಾಗ, ಮುಖೇಶ್ ಶಾಂತಿಯೊಂದಿಗೆ ಮಾತನಾಡುತ್ತಾ, ಸದರಿ ಚಲನಚಿತ್ರವನ್ನು ರದ್ದು ಮಾಡುವುದಾಗಿಯೂ, ತಮ್ಮ ಮದುವೆಯನ್ನು ಜನರ ಮುಂದೆ ಬಹಿರಂಗಪಡಿಸುವುದಾಗಿಯೂ, ಈ ಭವ್ಯವಾದ ಸೆಟ್ಟಿನಲ್ಲಿಯೇ ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಳ್ಳುವುದರ ಬಗೆಗೂ ಶಾಂತಿಗೆ ಹೇಳುತ್ತಾನೆ. ಆದರೆ, ಕೆಲ ಕ್ಷಣದಲ್ಲಿಯೇ ಶಾಂತಿಯನ್ನು ನಿಂದಿಸತೊಡಗುತ್ತಾ ತನ್ನ ಮಾತುಗಳನ್ನು ಅಲ್ಲಗಳೆಯಲು ಪ್ರಾರಂಭಿಸುತ್ತಾನೆ. ಸದರಿ ಚಲನಚಿತ್ರ ಹಾಗೂ ಅದರ ಆದಾಯ ತನ್ನ ಕೈಬಿಟ್ಟುಹೋಗುವುದಕ್ಕೆ ಅವಳೇ ಕಾರಣ ಎಂದು ನಿಂದಿಸಿ ಸೆಟ್ಟಿನ ಒಂದೆಡೆಗೆ ಬೆಂಕಿ ಹಚ್ಚಿಬಿಟ್ಟು, ಅವಳನ್ನು ಒಳಗಡೆಯೇ ಬಂಧಿಸಿಟ್ಟು ಹೊರಟುಹೋಗುತ್ತಾನೆ. ಅವಳನ್ನು ರಕ್ಷಿಸಲು ಓಂ ಪ್ರಯತ್ನಿಸುತ್ತಾನಾದರೂ, ಮುಖೇಶ್‌ನ ಜನರಿಂದ ಆತ ಆಕ್ರಮಣಕ್ಕೆ ಒಳಗಾಗುತ್ತಾನೆ. ಅವರಿಂದ ಬಿಡಿಸಿಕೊಂಡು ಬಂದ ಓಂ ಸೆಟ್ಟನ್ನು ಪ್ರವೇಶಿಸಿದರೂ ಸಹ, ಅಲ್ಲಿ ಸಂಭವಿಸುವ ಸ್ಫೋಟವೊಂದರಿಂದಾಗಿ ಶಾಂತಿಯನ್ನು ರಕ್ಷಿಸುವ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಸ್ಫೋಟದಿಂದ ಮಾರಣಾಂತಿಕವಾಗಿ ಗಾಯಗೊಂಡು ಅದರ ರಭಸಕ್ಕೆ ರಸ್ತೆಗೆ ಎಸೆಯಲ್ಪಡುವ ಓಂನಿಗೆ ಕಾರೊಂದು ಢಿಕ್ಕಿ ಹೊಡೆಯುತ್ತದೆ. ಆ ಕಾರು ಓರ್ವ ಜನಪ್ರಿಯ ನಟನಾದ ರಾಜೇಶ್‌ ಕಪೂರ್‌ನದಾಗಿದ್ದು (ಜಾವೇದ್ ಶೇಖ್), ಆತ ತನ್ನ ಪತ್ನಿಯನ್ನು (ಅಸವಾರಿ ಜೋಷಿ) ಅವರ ಮಗುವಿನ ಹೆರಿಗೆಗಾಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುತ್ತಿರುತ್ತಾನೆ.

ತಮ್ಮೊಂದಿಗೆ ಓಂನನ್ನೂ ಆಸ್ಪತ್ರೆಗೆ ರಾಜೇಶ್ ಕಪೂರ್ ಕೊಂಡೊಯ್ಯುತ್ತಾನೆ; ಆದರೆ ಭೀಕರವಾಗಿ ಗಾಯಗೊಂಡಿದ್ದ ಓಂ ಮರಣಹೊಂದುತ್ತಾನೆ. ಕೆಲಕ್ಷಣಗಳ ನಂತರ ರಾಜೇಶ್‌ ಕಪೂರ್‌ಗೆ ಗಂಡುಮಗುವಿನ ಜನನವಾಗುತ್ತದೆ. ಅದಕ್ಕೆ ಓಂ ಎಂದೇ ಹೆಸರಿಡಲಾಗುತ್ತದೆ ಮತ್ತು ಅದನ್ನು ಓಂ ಪ್ರಕಾಶ್‌ನ ಪುನರ್ಜನ್ಮ ಎಂದೇ ಸೂಚಿಸಲಾಗುತ್ತದೆ. ಅಲ್ಲಿಂದ ಚಲನಚಿತ್ರದ ದೃಶ್ಯವು ಬದಲಾವಣೆಗೊಂಡು ಯುವಕ ಓಂನ ಪ್ರೌಢವಯಸ್ಸಿನ ದಿನಗಳೆಡೆಗೆ ಸಾಗುತ್ತದೆ. ಆ ದಿನಗಳಲ್ಲಿ ಆತ ಓರ್ವ ಜನಪ್ರಿಯ ಸಿನಿಮಾ ತಾರೆಯಾಗಿದ್ದು ವೈಭವಪೂರ್ಣವಾದ, ದುಂದುಗಾರಿಕೆಯ ಶೈಲಿಯ ಜೀವನವನ್ನು ನಡೆಸುತ್ತಿರುತ್ತಾನೆ. ಅವನಿಗೆ ಬೆಂಕಿಯ ಭಯದ ಅನುಭವವಾಗುತ್ತದೆ ಮತ್ತು ಆತನ ಹಿಂದಿನ ಜನ್ಮಕ್ಕೆ ಹೋಲಿಸಿದಾಗ ಓರ್ವ ತಾರುಣ್ಯಪೂರ್ಣ, ಅತಿ ಸಿಡುಕಿನ, ನಯನಾಜೂಕಿಲ್ಲದ, ಭಾವುಕತೆಯಿಲ್ಲದ ವ್ಯಕ್ತಿಯಂತೆ ಒಟ್ಟಾರೆಯಾಗಿ ಆತ ಕಂಡುಬರುತ್ತಾನೆ. ಓಂ ಪ್ರಕಾಶ್‌ನ ನೆನಪುಗಳನ್ನೇ ಆತ ಸುಪ್ತಮನಸ್ಸಿನಲ್ಲಿ ಹೊತ್ತುಕೊಂಡು ಬಂದಿರುವಂತೆ ಕೆಲವೊಂದು ದೃಶ್ಯಗಳ ಮೂಲಕ ತೋರಿಸಲಾಗುತ್ತದೆ.

ಪ್ರೇಕ್ಷಕರಿಗೆ ಓಂ ಕಪೂರ್‌ನ ವ್ಯಕ್ತಿತ್ವ, ಅವನ ಜೀವನಶೈಲಿ ಹಾಗೂ "O.K." ಎಂಬ ಅವನ ಅಡ್ಡಹೆಸರು ಇವುಗಳೆಲ್ಲದರ ಪರಿಚಯವಾಗುತ್ತದೆ. ಓಂ ಪ್ರಕಾಶ್ ಮರಣ ಹೊಂದಿದ ಸ್ಥಳವನ್ನೇ ಓಂ ಕಪೂರ್‌ನ ಹೊಸ ಚಲನಚಿತ್ರವೊಂದರ ಸೆಟ್ಟಿಂಗ್ ಪ್ರದೇಶವಾಗಿ ಆತನ ಚಿತ್ರತಂಡ ಬಳಸಿಕೊಳ್ಳ ಹೊರಟಾಗ ಆತನಲ್ಲಿ ಓಂ ಪ್ರಕಾಶ್‌ನ ನೆನಪುಗಳ ಅರಿವು ಮೂಡುವುದನ್ನೂ ಪ್ರೇಕ್ಷಕರು ಕಾಣುತ್ತಾರೆ. ಇಲ್ಲಿ, ಶಾಂತಿ ಪ್ರಿಯಾಳೊಂದಿಗೆ ಮುಖೇಶ್‌ನು ಮಾಡುವ ವಾದದ ಸರಣಿಯ ಚಿತ್ರಿಕೆಗಳನ್ನು O.K. ನೋಡುತ್ತಾನೆ. ಚಿತ್ರತಂಡದ ಓರ್ವ ಸದಸ್ಯನಿಂದಾಗಿ ಅವನ ನೆನಪಿನ ಲಹರಿಗೆ ಭಂಗವುಂಟಾದಾಗ ಈ ಚಿತ್ರಿಕೆಗಳು ಕಣ್ಮರೆಯಾಗುತ್ತವೆ. ಕೆಲ ಕಾಲದ ನಂತರ, ಅಸ್ತಿತ್ವದಲ್ಲಿರುವ ಮತ್ತು ದಂತಕಥೆಯಾಗಿರುವ ಬಾಲಿವುಡ್‌ ಚಲನಚಿತ್ರಗಳು ಹಾಗೂ ಚಿತ್ರತಾರೆಯರನ್ನು (ಪಟ್ಟಿಯನ್ನು ಕೆಳಗೆ ನೀಡಲಾಗಿದೆ) ಒಳಗೊಂಡ ಒಂದು ಸಮಾರಂಭದ ಸಂದರ್ಭದಲ್ಲಿ O.K.ಗೆ 'ಅತ್ಯುತ್ತಮ ನಟ' ಎಂಬ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಭಾಷಣ ಮಾಡುವಾಗ, ಹಿಂದಿನ ಜನ್ಮದಲ್ಲಿನ ಓಂ ಪ್ರಕಾಶ್ ಕುಡಿದು ಪಪ್ಪುವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಅನಿರೀಕ್ಷಿತವಾಗಿ ನೆನಪಿಸಿಕೊಳ್ಳುವ O.K., ಪ್ರಶಸ್ತಿ ನೀಡಿದ ಕೂಟಕ್ಕೆ ಧನ್ಯವಾದವನ್ನು ಹೇಳುತ್ತಾ ಅದೇ ಭಾಷಣವನ್ನು ಮತ್ತೊಮ್ಮೆ ಮಾಡುತ್ತಾನೆ. ದೂರದರ್ಶನದಲ್ಲಿ ಪ್ರಸಾರವಾಗುವ ಈ ತುಣುಕನ್ನು ನೋಡುವ ಪಪ್ಪು ಇದರಿಂದ ಮನವರಿಕೆಗೊಂಡು, O.K. ಮತ್ತು ಓಂ ಪ್ರಕಾಶ್‌ ಇಬ್ಬರೂ ಒಬ್ಬರೇ ಎಂಬ ಬೇಲಾಳ ಗಾಢನಂಬಿಕೆಯನ್ನು ಅಂಗೀಕರಿಸುತ್ತಾನೆ. ತನಗೆ ಪ್ರಶಸ್ತಿ ಬಂದುದರ ಕಾರಣ ಏರ್ಪಡಿಸಲಾಗುವ ಸಂಭ್ರಮಾಚರಣೆಯಲ್ಲಿ (ಇದರಲ್ಲಿ ಮತ್ತೊಮ್ಮೆ ಹಲವಾರು ಬಾಲಿವುಡ್‌ ಚಲನಚಿತ್ರ ತಾರೆಯರು ಕಾಣಿಸಿಕೊಳ್ಳುತ್ತಾರೆ ಹಾಗೂ ಆ ಸಂದರ್ಭದಲ್ಲಿ ಎಲ್ಲರೂ ಕೂಡಿ ಹಾಡುವ ಹಾಡಿನ ಪಲ್ಲವಿಯು ಈ ಚಲನಚಿತ್ರದ ಶೀರ್ಷಿಕೆಯೇ ಆಗಿರುತ್ತದೆ), O.K.ಯನ್ನು ಆತನ ತಂದೆಯು ಮುಖೇಶ್ ಮೆಹ್ರಾನಿಗೆ ಪರಿಚಯಿಸುತ್ತಾನೆ. ಅಷ್ಟು ಹೊತ್ತಿಗಾಗಲೇ, ಆತ ಕಳೆದ ಮೂವತ್ತು ವರ್ಷಗಳಿಂದ ಹಾಲಿವುಡ್‌ನಲ್ಲಿ ಚಲನಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುತ್ತಾನೆ. ಅವನನ್ನು ನೋಡುತ್ತಿದ್ದಂತೆಯೇ O.K.ಗೆ ಓಂ ಪ್ರಕಾಶ್‌ನ ಎಲ್ಲಾ ನೆನಪುಗಳೂ ಮರುಕಳಿಸುತ್ತವೆ.

ಮುಖೇಶ್‌ನ ಗತಜೀವನದ ಕುರಿತಾಗಿ ತನಗೆ ಗೊತ್ತಿರುವುದನ್ನು ಆತ ರಹಸ್ಯವಾಗಿಟ್ಟುಕೊಂಡರೂ, ನಂತರದಲ್ಲಿ ಬೇಲಾ ಮತ್ತು ಪಪ್ಪುರೊಂದಿಗೆ ಮತ್ತೆ ಸೇರಿಕೊಳ್ಳುತ್ತಾನೆ. ಮುಖೇಶ್‌ನನ್ನು ಗಾಬರಿಗೆ ಒಳಪಡಿಸುವ ಮೂಲಕ, ಶಾಂತಿ ಪ್ರಿಯಾಳ ಸಾವಿನಲ್ಲಿ ತನ್ನ ಪಾತ್ರವಿತ್ತು ಎಂದು ಆತ ಒಪ್ಪಿಕೊಳ್ಳುವಂತೆ ಮಾಡಿ, ಅವಳ ಸಾವಿಗೆ ಸೇಡು ತೀರಿಸಿಕೊಳ್ಳಲು ಅವರಿಬ್ಬರೊಂದಿಗೂ ಅವನು ಸಂಚು ಹೂಡುತ್ತಾನೆ.

ಯಾರಿಗೂ ಗೊತ್ತಾಗದಂತೆ ಈ ಯೋಜನೆಗೆ ಒಂದು ಚೌಕಟ್ಟನ್ನು ಒದಗಿಸುವ ಸಲುವಾಗಿ, ಓಂ ಶಾಂತಿ ಓಂ ಚಿತ್ರದ ಕಥೆಯನ್ನು ತಮ್ಮ ಶೈಲಿಗೆ ಒಗ್ಗುವಂತೆ ಮಾರ್ಪಡಿಸಿ, ಅದನ್ನು ಮರುಸೃಷ್ಟಿ ಮಾಡುವ ಕುರಿತು O.K. ಮುಖೇಶ್‌ನ ಮನವೊಲಿಸುತ್ತಾನೆ. ಶಾಂತಿ ಪ್ರಿಯಾಳ ಪ್ರೇತವೇ ಮುಖೇಶ್‌ನನ್ನು ಬೆಂಬಿಡದೆ ಕಾಡುತ್ತಿದೆ ಎಂಬಂತೆ ಆತನನ್ನು ನಂಬಿಸುವುದು ಹಾಗೂ ತನ್ಮೂಲಕ ಶಾಂತಿ ಪ್ರಿಯಾಳ ಸಾವಿನಲ್ಲಿ ತನ್ನ ಪಾತ್ರವಿತ್ತು ಎಂಬ ರಹಸ್ಯವನ್ನು ಆತ ಹೊರಗೆಡವುವಷ್ಟರ ಮಟ್ಟಿಗೆ ಆತನನ್ನು ಭಯಕ್ಕೊಳಪಡಿಸುವುದೇ ಅವರ ಯೋಜನೆಯ ಮುಖ್ಯ ಅಂಶ ಎಂದು ಆಗ ತೋರಿಸಲಾಗುತ್ತದೆ. ಇದನ್ನು ಸಾಧಿಸಲು, ಶಾಂತಿ ಪ್ರಿಯಾಳನ್ನೇ ಹೋಲುವ ನಟಿಗಾಗಿ ಅವರು ಪ್ರತಿಭಾ ಶೋಧ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. ಅನಿರೀಕ್ಷಿತವಾಗಿ ಅವಳು ಕಾಣಿಸಿಕೊಂಡಾಗ ಮತ್ತು ಕಣ್ಮರೆಯಾದಂತೆ ಅವನಿಗೆ ತೋರಿದಾಗ, ಮುಖೇಶ್‌ ಗಾಬರಿಗೊಳ್ಳುವ ಮಟ್ಟಕ್ಕೆ ಈ ನಟಿಯು ಇರಬೇಕೆಂಬುದು ಅವರ ಬಯಕೆಯಾಗಿರುತ್ತದೆ.

ಇಂಥಾ ಓರ್ವ ನಟಿಯನ್ನು ಹುಡುಕುವ ಅವರ ಪ್ರಯತ್ನ ವಿಫಲವಾಗುತ್ತದೆ; ಆದರೆ ಕೊನೆಗೆ, ಸಂಧ್ಯಾ (ಚಿಕ್ಕದಾಗಿ "ಸ್ಯಾಂಡಿ) ಎಂಬ ಹೆಸರಿನ O.K.ಯ ಅಭಿಮಾನಿಯೋರ್ವಳು ಈ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾಳೆ. O.K. ಹಾಗೂ ಅವನ ಸಹ-ಸಂಚುಗಾರರು ಶಾಂತಿಯ ಪ್ರೇತವನ್ನು ಪ್ರತಿನಿಧಿಸುವಂತೆ ಸ್ಯಾಂಡಿಗೆ ತರಬೇತಿ ನೀಡುತ್ತಾರೆ. ಆದರೆ, ಅವಳ ನಯನಾಜೂಕಿಲ್ಲದ ಸ್ವಭಾವದ ಕಾರಣದಿಂದಾಗಿ ಯಶ ಕಾಣುವುದಿಲ್ಲ. ಕೊನೆಗೆ, ಅವಳಿಗೆ ತಮ್ಮ ಸಂಪೂರ್ಣ ಯೋಜನೆ ಹಾಗೂ ಅದರ ಹಿಂದಿರುವ ಕಾರಣವನ್ನು ವಿವರಿಸಿದಾಗ ಅವಳಿಗೆ ಅರಿವಾಗಿ, ಯೋಜನೆಯಲ್ಲಿ ಪ್ರಗತಿಯುಂಟಾಗುತ್ತದೆ. ಇದಾದ ನಂತರ ಚಿತ್ರೀಕರಣ ಪ್ರಾರಂಭವಾಗುತ್ತದೆ. ಸ್ಯಾಂಡಿಯು ಅರೆಕ್ಷಣ ಕಾಣಿಸಿಕೊಂಡು ಕಣ್ಮರೆಯಾಗುವುದೂ ಸೇರಿದಂತೆ, ಮುಖೇಶ್‌ನನ್ನು ಗಾಬರಿಗೆ ಸಿಕ್ಕಿಸುವ ಕೆಲವು ಸನ್ನಿವೇಶಗಳನ್ನು ಚಲನಚಿತ್ರದ ಚಿತ್ರೀಕರಣದಾದ್ಯಂತ, O.K. ಮತ್ತು ಅವನ ಸ್ನೇಹಿತರು ವ್ಯವಸ್ಥೆ ಮಾಡುತ್ತಾರೆ. ಸ್ವತಃ ಆ ಸನ್ನಿವೇಶಗಳೇ ಆತನ ಅಪರಾಧಗಳನ್ನು ನೆನಪಿಸುವಂತೆ ವ್ಯವಸ್ಥೆ ಮಾಡಿ, ಅವನೊಂದಿಗಿನ ಅವರ (ಮುಖ್ಯವಾಗಿ O.K.ಯ) ಸಂಭಾಷಣೆಯಿಂದಾಗಿ ಮುಖೇಶ್‌ನ ಭಯವು ಉಲ್ಬಣಗೊಂಡು, ಹೆಚ್ಚೂಕಡಿಮೆ ಆತನಿಗೆ ಹುಚ್ಚು ಹಿಡಿಯುವಂತೆ ಮಾಡಲು ಯೋಜನೆ ಹಾಕುತ್ತಾರೆ. ಆದರೆ, ಅವರ ವ್ಯವಸ್ಥೆಗಳನ್ನು ಪತ್ತೆಹಚ್ಚುವ ಮುಖೇಶ್, ತನ್ನನ್ನು ಅವರೆಲ್ಲರೂ ಮೋಸ ಮಾಡುತ್ತಿದ್ದಾರೆ ಎಂದು ಅನುಮಾನಿಸಲು ಪ್ರಾರಂಭಿಸಿದಾಗ, ಅವರ ಯೋಜನೆಯು ಹಾದಿತಪ್ಪುತ್ತದೆ. ಚಲನಚಿತ್ರದ ಧ್ವನಿಮುದ್ರಿಕೆ ಬಿಡುಗಡೆಯ ಸಂದರ್ಭದಲ್ಲಿ, ಶಾಂತಿ ಪ್ರಿಯಾಳ ಸಾವಿನ ಕುರಿತು ತನಗೆ ಗೊತ್ತಿರುವುದೆಲ್ಲವನ್ನೂ ಬಹಿರಂಗಪಡಿಸುವ ಮೂಲಕ ಮುಖೇಶ್‌ನನ್ನು O.K. ಮೂದಲಿಸಿ ಕೆಣಕುತ್ತಾನೆ. ಹೀಗೆ ಹೇಳುವಾಗ, ಅವನ ಚಿತ್ರದ ಕಥಾವಸ್ತುವು ಆ ಕಥೆಯನ್ನೇ ಅನುಕರಿಸುತ್ತದೆ ಎಂದು ಸೂಚ್ಯವಾಗಿ ಹೇಳುತ್ತಾನೆ.

ಈ ದೃಶ್ಯದ ಅಂತ್ಯದ ವೇಳೆಗೆ, ಸ್ಯಾಂಡಿಯನ್ನು ಬೆನ್ನಟ್ಟಿ ಹೋಗುವ ಮುಖೇಶ್, ಅವಳಿಗೆ ಗಾಯದಿಂದ ರಕ್ತಸ್ರಾವವಾಗುವುದನ್ನು ಕಾಣುತ್ತಾನೆ. ಇದರಿಂದಾಗಿ ಅವಳು ಶಾಂತಿ ಪ್ರಿಯಾಳ ಪ್ರೇತವಲ್ಲವೆಂಬುದು ಅವನಿಗೆ ಮನವರಿಕೆಯಾಗುತ್ತದೆ.

ಸಂಭ್ರಮಾಚರಣೆಯ ನಂತರ ಮುಖಾಮುಖಿಯಾಗುವ ಹೊತ್ತಿಗೆ O.K. ಮತ್ತು ಮುಖೇಶ್ ಇಬ್ಬರಿಗೂ ತಂತಮ್ಮ ನಡೆಗಳ ಕುರಿತು ಸಂಪೂರ್ಣ ಅರಿವು ಮೂಡಿರುತ್ತದೆ. ತಾವಿಬ್ಬರೂ ಯಾರನ್ನು ಸ್ಯಾಂಡಿ ಎಂದುಕೊಂಡಿದ್ದರೋ ಆ ರೂಪವು ಹತ್ತಿರದ ಮೆಟ್ಟಿಲುಗಳ ಬಳಿ ನಿಂತು ರಹಸ್ಯವೊಂದನ್ನು ಬಹಿರಂಗಪಡಿಸಲು ಮುಂದಾದಾಗ, ಅವರಿಬ್ಬರ ನಡೆಗಳಿಗೂ ಅಡ್ಡಿಯಾಗುತ್ತದೆ. ಹೊತ್ತಿ ಉರಿಯುತ್ತಿದ್ದ ಚಿತ್ರದ ಸೆಟ್ಟು ಸ್ಫೋಟಗೊಂಡ ನಂತರ ಅಲ್ಲಿಗೆ ಮರಳಿದ್ದ ಮುಖೇಶ್, ಶಾಂತಿಯು ಸಾಯುವ ಹಾದಿಯಲ್ಲಿದ್ದರೂ ಇನ್ನೂ ಸತ್ತಿಲ್ಲದಿರುವುದನ್ನು ಕಂಡುಕೊಂಡಿದ್ದನ್ನು ಮತ್ತು ಸೆಟ್‌ನ ಮಧ್ಯಭಾಗದಲ್ಲಿ, ತೂಗುವ ಗೊಂಚಲುದೀಪದ (ಷಾಂಡಲಿಯರ್‌) ಅಡಿಯಲ್ಲಿ ಅವಳನ್ನು ಸಮಾಧಿ ಮಾಡಿದ್ದನ್ನು ಆ ರೂಪವು ಬಹಿರಂಗಪಡಿಸುತ್ತದೆ. ಅದೇ ಸ್ಥಾನದಲ್ಲಿ ಸ್ಥಿತವಾಗಿದ್ದು, ಸಂಭ್ರಮಾಚರಣೆಯ ಸಮಯದಲ್ಲಿ ಸಡಿಲಗೊಂಡಿದ್ದ ಅದೇ ರೀತಿಯ ಗೊಂಚಲುದೀಪವೊಂದು ಮುಖೇಶ್‌ನ ಮೇಲೆ ಬಿದ್ದಾಗ ಆತ ಸಾಯುತ್ತಾನೆ. ಕೆಲ ಕ್ಷಣಗಳ ನಂತರ, ಪಪ್ಪು ಮತ್ತು ಸ್ಯಾಂಡಿ O.Kಯ ಜೊತೆಗೂಡಿದಾಗ, ಮುಖೇಶ್‌ಗೆ ಸವಾಲು ಒಡ್ಡಿದ ಆ ಸ್ವರೂಪವು ಶಾಂತಿ ಪ್ರಿಯಾಳ ಪ್ರೇತ ಎಂದು O.Kಗೆ ಮನವರಿಕೆಯಾಗುತ್ತದೆ. ಇದನ್ನು ಆತ ಮನವರಿಕೆ ಮಾಡಿಕೊಳ್ಳುತ್ತಿರುವಂತೆಯೇ, ಆ ಪ್ರೇತವು ನಸುನಕ್ಕು, ಮೆಟ್ಟಿಲುಗಳನ್ನು ಹತ್ತಿಕೊಂಡು ಓಡುತ್ತಾ ನಂತರ ಕಣ್ಮರೆಯಾಗುತ್ತದೆ.

ಪಾತ್ರವರ್ಗ[ಬದಲಾಯಿಸಿ]

"ದೀವಾನ್‌ಗಿ ದೀವಾನ್‌ಗಿ" ಹಾಡಿನ ಸಮಯದಲ್ಲಿ ಕಾಣಿಸಿಕೊಳ್ಳುವ ವಿಶೇಷ ಪಾತ್ರಧಾರಿಗಳು (ಆಂಗ್ಲ ವರ್ಣಮಾಲೆಯ ಕ್ರಮದಲ್ಲಿ):

ಇತರ ವಿಶೇಷ ಪಾತ್ರಧಾರಿಗಳು (ಆಂಗ್ಲ ವರ್ಣಮಾಲೆಯ ಕ್ರಮದಲ್ಲಿ):

ಚಿತ್ರತಂಡ[ಬದಲಾಯಿಸಿ]

ನಿರ್ಮಾಣ[ಬದಲಾಯಿಸಿ]

ಈ ಚಿತ್ರಕ್ಕೂ ಮುಂಚೆ ಶಾರುಖ್‌ ಖಾನ್‌ ಅಭಿನಯದ ಮೈ ಹೂಂ ನಾ (2004) ಚಿತ್ರವನ್ನು ನಿರ್ದೇಶಿಸಿದ್ದ ಫರಾಹ್‌ ಖಾನ್‌ಳ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ, ಈ ಚಿತ್ರದಲ್ಲಿರುವಂತೆಯೇ ಶಾರುಖ್‌ ಖಾನ್ ಕಾಣಿಸಿಕೊಳ್ಳಬೇಕಿತ್ತು. ಆದರೆ ಓಂ ಶಾಂತಿ ಓಂ ಚಿತ್ರವನ್ನು ಮಾಡುವ ಸಲುವಾಗಿ ಆ ಯೋಜನೆಯನ್ನು ಬದಿಗೆ ಸರಿಸಲಾಯಿತು.

ಈ ಚಿತ್ರದ ಸಂಗೀತ ರಚನೆ ಹಾಗೂ ಧ್ವನಿಪಥವನ್ನು ಸಂಗೀತ ನಿರ್ದೇಶಕ ಜೋಡಿಯಾದ ವಿಶಾಲ್‌-ಶೇಖರ್ ಸಂಯೋಜಿಸಿದ್ದು, ಪ್ರಖ್ಯಾತ ಸಾಹಿತಿ ಜಾವೇದ್ ಅಖ್ತರ್ ಹಾಡುಗಳನ್ನು ಬರೆದಿದ್ದಾರೆ. ಈ ಚಿತ್ರದ ಸಂಗೀತದ ಕೃತಿಸ್ವಾಮ್ಯವನ್ನು ಸಂಗೀತ ನಿರ್ದೇಶಕ A.R.ರಹಮಾನ್‌ ಹಾಗೂ ಗೀತ ಸಾಹಿತಿಯೊಂದಿಗೆ ಹಂಚಿಕೊಳ್ಳಲು T-ಸೀರೀಸ್‌ ಕಂಪನಿಯು ಒಪ್ಪಲಿಲ್ಲವಾದ್ದರಿಂದ, A.R.ರಹಮಾನ್‌ ಈ ಚಿತ್ರದಲ್ಲಿ ಪಾಲ್ಗೊಳ್ಳಲಿಲ್ಲ.[೨]

ಈ ಚಿತ್ರವು ಪುನರ್ಜನ್ಮವನ್ನು ಆಧರಿಸಿದೆ. ಭಾರತದಲ್ಲಿನ ವಿವಿಧ ತಾಣಗಳಲ್ಲಿ ಈ ಚಲನಚಿತ್ರದ ಚಿತ್ರೀಕರಣವು 2007ರ ಜನವರಿಯಲ್ಲಿ ಪ್ರಾರಂಭವಾಯಿತು. ಈ ಚಿತ್ರದಲ್ಲಿನ ಒಂದು ವಿಶೇಷ ಹಾಡಿನಲ್ಲಿ ಬಾಲಿವುಡ್‌ನ 31 ತಾರೆಗಳು ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.[೩] 2007ನವೆಂಬರ್ 9ರಂದು ಈ ಚಿತ್ರವು ಬಿಡುಗಡೆಯಾಯಿತು.

ಹಿಂದೆಂದೂ ಕೇಳಲಾಗದ 2000 ಪ್ರತಿಗಳೊಂದಿಗೆ (ವಿಶ್ವಾದ್ಯಂತ) ಬಿಡುಗಡೆಯಾಗುವುದರ ಮೂಲಕ ಓಂ ಶಾಂತಿ ಓಂ ಚಿತ್ರವು ವಿಭಿನ್ನ ಸ್ವರೂಪದ ಮತ್ತೊಂದು ದಾಖಲೆಯನ್ನು ಸೃಷ್ಟಿಸುವ ಹಾದಿಯಲ್ಲಿದೆ. ಇದುವರೆಗಿನ ಯಾವುದೇ ಭಾರತೀಯ ಚಿತ್ರಕ್ಕೆ ಸಂಬಂಧಿಸಿ ಇದು ಅತ್ಯಂತ ಹೆಚ್ಚಿನ (ಡಿಜಿಟಲ್ ಪ್ರತಿಗಳೂ ಸೇರಿದಂತೆ) ಸಂಖ್ಯೆಯ ಪ್ರತಿಗಳ ದಾಖಲೆಯಾಗಿದೆ.[೪] ಚಿತ್ರದ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆಯು ಪ್ರಾರಂಭವಾಗುವುದಕ್ಕೆ ಒಂದೆರಡು ದಿನ ಮುಂಚಿತವಾಗಿಯೇ, ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿನ ಚಿತ್ರಮಂದಿರಗಳ ಒಂದು ಸರಣಿಯಲ್ಲಿ ಓಂ ಶಾಂತಿ ಓಂ ಚಿತ್ರದ 18,000 ಟಿಕೆಟ್ಟುಗಳ ಪೂರ್ವಭಾವಿ ಮುಂಗಡ ಕಾಯ್ದಿರಿಸುವಿಕೆಯು ನಡೆದಿದ್ದು, ಅದೊಂದು ವಿಭಿನ್ನ ಸ್ವರೂಪದ ದಾಖಲೆಯಾಗಿದೆ.[೫]

ನಿರ್ಮಾಣ ಮತ್ತು ವಿತರಣಾ ಕಂಪನಿಯಾದ ಬಾಬಾ ಫಿಲ್ಮ್ಸ್‌, ಮುಂಬಯಿ ವಲಯದ ಹಕ್ಕುಗಳನ್ನು ಪಡೆಯಲು ದಾಖಲಾರ್ಹವೆನ್ನಬಹುದಾದ 110 ದಶಲಕ್ಷ ರೂಪಾಯಿಗಳ ಬೆಲೆಯನ್ನು ನಮೂದಿಸಿದ್ದು, ಇದರಿಂದಾಗಿ ಜಾನ್-ಎ-ಮನ್ ಚಿತ್ರಕ್ಕಾಗಿ ಈ ಹಿಂದೆ ಇದೇ ಪ್ರಾಂತ್ಯಕ್ಕೆ ನೀಡಲಾಗಿದ್ದ 85 ದಶಲಕ್ಷ ರೂಪಾಯಿಗಳ, ಅದುವರೆಗಿನ ಅತ್ಯಂತ ಹೆಚ್ಚಿನ ಮೊತ್ತವನ್ನು ಅತ್ಯಂತ ಸುಲಭವಾಗಿ ಕೆಳಕ್ಕೆ ತಳ್ಳಿದಂತಾಗಿದೆ.[೬]

SRKಯ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ಸದರಿ ಚಿತ್ರದ ಜಾಗತಿಕ ಹಕ್ಕುಗಳನ್ನು ಎರೋಸ್ ಇಂಟರ್‌ನ್ಯಾಷನಲ್ ಸಂಸ್ಥೆಗೆ ದಾಖಲಾರ್ಹ ಮೊತ್ತಕ್ಕೆ ಮಾರಾಟಮಾಡಿದ್ದು, ಆ ಮೊತ್ತವು 720-750 ದಶಲಕ್ಷ ರೂಪಾಯಿಗಳ ನಡುವೆ ಇದೆ ಎಂಬುದು ಗಮನಾರ್ಹ ಅಂಶ.[೬][೭]

ಮುಷ್ತಾಕ್ ಶೇಖ್‌ ಬರೆದಿರುವ, ದಿ ಮೇಕಿಂಗ್ ಆಫ್ ಓಂ ಶಾಂತಿ ಓಂ ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಚಲನಚಿತ್ರವು ಬಿಡುಗಡೆಯಾದ ನಂತರ ಬಿಡುಗಡೆ ಮಾಡಲಾಗಿದೆ. ಸದರಿ ಚಿತ್ರದ ತಯಾರಿಕೆ ಮತ್ತು ಕ್ಯಾಮೆರಾ ಹಿಂದೆ ನಡೆದಿರುವ ಘಟನಾವಳಿಗಳ ಬಗೆಗೆ ಈ ಪುಸ್ತಕವು ಒಂದಷ್ಟು ಬೆಳಕು ಚೆಲ್ಲುತ್ತದೆ.[೮]

ಮನೆ ವಿಡಿಯೋದ ಬಿಡುಗಡೆ[ಬದಲಾಯಿಸಿ]

2007ರ ನವೆಂಬರ್ 20ರಂದು, ಎರೋಸ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ಓಂ ಶಾಂತಿ ಓಂ ಚಿತ್ರವನ್ನು DVD ಮತ್ತು ಬ್ಲೂ-ರೇ ಸ್ವರೂಪದಲ್ಲಿ ಬಿಡುಗಡೆ ಮಾಡಿತು.[೯]

ಧ್ವನಿಪಥ[ಬದಲಾಯಿಸಿ]

Untitled

ಈ ಚಿತ್ರದ ಧ್ವನಿಪಥವನ್ನು[೧೦] 2007ಸೆಪ್ಟೆಂಬರ್ 18ರಂದು ಬಿಡುಗಡೆ ಮಾಡಲಾಯಿತು. ಈ ಚಿತ್ರದ ಸಂಗೀತಕ್ಕೆ 5 ನಕ್ಷತ್ರಗಳ ಪೈಕಿ 4 ನಕ್ಷತ್ರಗಳ ಶ್ರೇಯಾಂಕವನ್ನು Indiafm.com ನೀಡಿರುವುದೇ ಅಲ್ಲದೇ, "ವಿಶಾಲ್-ಶೇಖರ್ ಮತ್ತು ಜಾವೇದ್ ಅಖ್ತರ್‌ರಂತಹ ಪ್ರತಿಭೆಗಳು ನೀಡಿರುವ ಅತ್ಯಂತ ಪರಿಪೂರ್ಣ ಕೊಡುಗೆ ಅಥವಾ ಸಂಯೋಜನೆಗಳಲ್ಲಿ ಓಂ ಶಾಂತಿ ಓಂ ಚಿತ್ರವು ಒಂದು ಸ್ಥಾನವನ್ನು ಸುಲಭವಾಗಿ ಗಳಿಸಿದೆ" ಎಂದು ಹೇಳಿದೆ.[೧೧] ಅದರಲ್ಲೂ, "ದೀವಾನ್‌ಗಿ ದೀವಾನ್‌ಗಿ" ಹಾಡಿನಲ್ಲಂತೂ ಒಟ್ಟು 31 ತಾರೆಗಳು ನರ್ತಿಸಿದ್ದಾರೆ.

2008ರಲ್ಲಿ ಹಾಂಗ್‌ ಕಾಂಗ್‌ನಲ್ಲಿ ನಡೆದ 2ನೇ ಏಷ್ಯನ್ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ, ಈ ಧ್ವನಿಪಥಕ್ಕಾಗಿ ಅದರ ಸಂಯೋಜಕರು ಅತ್ಯುತ್ತಮ ಸಂಯೋಜಕ ಪ್ರಶಸ್ತಿಯನ್ನು ಗೆದ್ದಿದ್ದಾರೆ.[೧೨]

ಧ್ವನಿಪಥ # ಹಾಡು ಗಾಯಕರು ಅವಧಿ
1 ಅಜಬ್ ಸಿ ಕೆಕೆ 4:01
2 ದರ್ದ್-ಎ-ಡಿಸ್ಕೊ ಸುಖ್ವಿಂದರ್ ಸಿಂಗ್, ಕಾರಾಲಿಸಾ, ನಿಶಾ, ಮೇರಿಯಾನ್ನೆ 4:30
3 ದೀವಾನ್‌ಗಿ ದೀವಾನ್‌ಗಿ ಶಾನ್, ಉದಿತ್ ನಾರಾಯಣ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ರಾಹುಲ್ ಸಕ್ಸೇನಾ 5:54
4 ಮೈ ಅಗರ್ ಕಹೂಂ ಸೋನು ನಿಗಮ್, ಶ್ರೇಯಾ ಘೋಷಾಲ್ 5:08
5 ಜಗ್‌ ಸೂನಾ ಸೂನಾ ಲಗೆ ರಹತ್ ಫತೇ ಆಲಿ ಖಾನ್ 5:34
6 ಧೂಮ್ ತಾನಾ ಅಭಿಜೀತ್, ಶ್ರೇಯಾ ಘೋಷಾಲ್ 6:13
7 ದಾಸ್ತಾನ್-ಎ-ಓಂ ಶಾಂತಿ ಓಂ ಶಾನ್ 7:08
8 ದರ್ದ್‌-ಎ-ಡಿಸ್ಕೊ (ರೀಮಿಕ್ಸ್) ಸುಖ್ವೀಂದರ್ ಸಿಂಗ್, ಕಾರಾಲಿಸಾ, ನಿಶಾ, ಮೇರಿಯಾನ್ನೆ 4:36
9 ದೀವಾನ್‌ಗಿ ದೀವಾನ್‌ಗಿ (ರೇನ್‌ಬೋ ಮಿಕ್ಸ್) ಶಾನ್, ಉದಿತ್ ನಾರಾಯಣ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ರಾಹುಲ್ ಸಕ್ಸೇನಾ 4:48
10 ಓಂ ಶಾಂತಿ ಓಂ (ಮೆಡ್ಲಿ ಮಿಕ್ಸ್‌) ಸುಖ್ವೀಂದರ್ ಸಿಂಗ್, ಕಾರಾಲಿಸಾ, ನಿಶಾ, ಮೇರಿಯಾನ್ನೆ, ಶಾನ್, ಉದಿತ್ ನಾರಾಯಣ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ರಾಹುಲ್ ಸಕ್ಸೇನಾ, ಅಭಿಜೀತ್ 6:06
11 ದಾಸ್ತಾನ್-ಎ-ಓಂ ಶಾಂತಿ ಓಂ (ಡಾರ್ಕ್‌ ಮಿಕ್ಸ್) ಶಾನ್ 6:21
12 ಓಂ ಶಾಂತಿ ಓಂ ವಾದ್ಯಸಂಗೀತ 0:58

ಪುರಸ್ಕಾರ[ಬದಲಾಯಿಸಿ]

ಶ್ರೇಯಾಂಕಗಳು ಮತ್ತು ಗಲ್ಲಾಪೆಟ್ಟಿಗೆ[ಬದಲಾಯಿಸಿ]

ಈ ಚಲನಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು[೧೩] "U/A" (ವಯಸ್ಕರೊಡಗೂಡಿದ ಅನಿರ್ಬಂಧಿತ ಚಿತ್ರ) ಶ್ರೇಯಾಂಕವನ್ನು ನೀಡಿದರೆ, ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್ ಆಫ್ ಅಮೆರಿಕಾ ಸಂಸ್ಥೆಯು PG–13 ಶ್ರೇಯಾಂಕವನ್ನು ನೀಡಿತು.

ಆಸ್ಟ್ರೇಲಿಯಾ ಮತ್ತು UKಯಂತಹ ಇತರ ದೇಶಗಳಲ್ಲೂ ಚಿತ್ರಕ್ಕೆ ಇದೇ ಸ್ವರೂಪದ ಶ್ರೇಯಾಂಕವನ್ನು ನೀಡಲಾಯಿತು.[೧೪][೧೫]

ಓಂ ಶಾಂತಿ ಓಂ ಚಿತ್ರವು ವಿಶ್ವಾದ್ಯಂತದ ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ 45 ದಶಲಕ್ಷ $ನಷ್ಟು ಹಣವನ್ನು ಸಂಗ್ರಹಿಸುವ ಮೂಲಕ ಸಾರ್ವಕಾಲಿಕ ಶ್ರೇಯಾಂಕ ಪಟ್ಟಿಯಲ್ಲಿ ಅತಿಹೆಚ್ಚಿನ ಗಳಿಕೆಯನ್ನು ದಾಖಲಿಸಿದ ಹಿಂದಿ ಚಲನಚಿತ್ರವಾಗಿದೆ ಎಂದು ಲಂಡನ್‌ನಲ್ಲಿನ ಅಗ್ರಗಣ್ಯ ವಿತರಕ ಸಂಸ್ಥೆಯಾದ ಎರೋಸ್ ಇಂಟರ್‌ನ್ಯಾಷನಲ್ ದೃಢೀಕರಿಸಿದೆ. ಆದರೆ ಪ್ರಸ್ತುತ ಈ ಚಿತ್ರವು 7ನೇ ಸ್ಥಾನದಲ್ಲಿದೆ.[೧೬]

ಒಟ್ಟಾರೆಯಾಗಿ 878 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ[೧೭] ಓಂ ಶಾಂತಿ ಓಂ ಚಲನಚಿತ್ರವು, ಭಾರತದಲ್ಲಿನ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ತನ್ನ ಎರಡು ವಾರಗಳ ಓಟದಲ್ಲಿ ಇದುವರೆಗೂ ಸುಮಾರು 65,65,00,000 ರೂಪಾಯಿಗಳನ್ನು ಸಂಗ್ರಹಿಸಿದೆ.[೧೮]

U.Sನಲ್ಲಿ ಕೇವಲ 114 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೂ ಸಹ, ಮೊದಲ ಮೂರು ದಿನಗಳ ಓಟದಲ್ಲೇ 1.764 ದಶಲಕ್ಷ $ನಷ್ಟು ಹಣವನ್ನು ಸಂಗ್ರಹಿಸುವ ಮೂಲಕ U.S ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದ ಚಿತ್ರವೆನಿಸಿಕೊಂಡಿತು.[೧೯] USನಲ್ಲಿ ಈ ಚಿತ್ರದ ಒಟ್ಟಾರೆ ಗಳಿಕೆಯು 3,597,000$ನಷ್ಟಿದ್ದು, ಬಾಲಿವುಡ್‌ ಚಿತ್ರವೊಂದಕ್ಕೆ ಸಂಬಂಧಿಸಿದಂತೆ ಇದು ಅತಿ ಹೆಚ್ಚಿನ ಗಳಿಕೆಯಾಗಿದೆ. ಒಟ್ಟು 1,350,000£ನಷ್ಟು (US $2,626,000 - INR 10,500,000) ಹಣವನ್ನು ಗಳಿಸುವ ಮೂಲಕ ಓಂ ಶಾಂತಿ ಓಂ ಚಿತ್ರವು ಯುನೈಟೆಡ್ ಕಿಂಗ್‌ಡಂನಲ್ಲಿ 2007ರ ಅತಿದೊಡ್ಡ ಬಾಲಿವುಡ್‌ ಚಲನಚಿತ್ರವಾಗಿ ಹೊರಹೊಮ್ಮಿದೆ.[೨೦] ಈ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿಯೇ ವಿಶ್ವಾದ್ಯಂತ ಒಟ್ಟಾರೆಯಾಗಿ 20 ದಶಲಕ್ಷ$ಗೂ ಮೀರಿದ ಹಣವನ್ನು ಸಂಗ್ರಹಿಸಿದ್ದು, ಅದರಲ್ಲಿ ಭಾರತದಲ್ಲಿ ಗಳಿಸಿದ 13.5 ದಶಲಕ್ಷ$, ಪಾಕಿಸ್ತಾನದಲ್ಲಿ ಗಳಿಸಿದ 5 ದಶಲಕ್ಷ$ ಹಾಗೂ ಉತ್ತರ ಅಮೆರಿಕಾದಲ್ಲಿ ಗಳಿಸಿದ 2 ದಶಲಕ್ಷ$ಗೂ ಮೀರಿದ ಗಳಿಕೆಗಳು ಸೇರಿವೆ.[೨೧]

ಈ ಚಿತ್ರವು ವಿಶ್ವಾದ್ಯಂತ ಒಟ್ಟಾರೆಯಾಗಿ 39,539,517$ ನಷ್ಟು (ರೂ.155,78,56,969.8ಗಳಷ್ಟು)[೨೨] ಹಣವನ್ನು ಸಂಗ್ರಹಿಸುವ ಮೂಲಕ, ಬಿಡುಗಡೆಯ ಸಮಯದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಹಣವನ್ನು ಗಳಿಸಿದ 2ನೇ ಹಿಂದಿ ಚಲನಚಿತ್ರವಾಗಿದೆ.

ದೇಶ (2007) ಒಟ್ಟು ಸಂಗ್ರಹಣೆ
ಆಸ್ಟ್ರೇಲಿಯಾ $378,711[೨೨]
ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್‌ $26,373[೨೨]
ಭಾರತ $27,678,629[೨೨] (ರೂ. 109,05,37,983)
ಮಲೇಷ್ಯಾ $95,339[೨೨]
ನ್ಯೂ ಜೀಲ್ಯಾಂಡ್‌ $113,444[೨೨]
ಪಾಕಿಸ್ತಾನ $12,220,243[೨೨]
ಯುನೈಟೆಡ್ ಕಿಂಗ್‌ಡಂ $2,622,627[೨೨]
ಸಂಯುಕ್ತ ಸಂಸ್ಥಾನಗಳು $3,597,372[೨೨]
ವಿಶ್ವಾದ್ಯಂತ '$39,539,517[೨೨] (ರೂ. 155,78,56,969.8)'

ವಿಮರ್ಶೆಗಳು[ಬದಲಾಯಿಸಿ]

ಈ ಚಿತ್ರಕ್ಕೆ BBCಯ ತೇಜ್‌ಪಾಲ್‌ ರಾಥೋಡ್‌ ಐದು ನಕ್ಷತ್ರಗಳ ಪೈಕಿ ನಾಲ್ಕು ನಕ್ಷತ್ರಗಳ ಶ್ರೇಯಾಂಕವನ್ನು ನೀಡಿರುವುದೇ ಅಲ್ಲದೇ, "ಬಾಲಿವುಡ್‌ಗೆ ನೀಡಲಾಗಿರುವ ಗೌರವ ಮತ್ತು ಬಾಲಿವುಡ್‌ನ ವಿಡಂಬನೆ ಎರಡೂ ಆಗಿರುವ ಈ ಚಿತ್ರವು ಒಂದು ಸಿನಿಮೀಯ ರಸದೌತಣವಾಗಿದ್ದು, ಚಲನಚಿತ್ರೋದ್ಯಮದ ಹೃದಯಾಂತರಾಳದಿಂದ ನೇರವಾಗಿ ಹೊರಹೊಮ್ಮಿರುವ ಕೃತಿಯಾಗಿದೆ ಮತ್ತು ಅಂತ್ಯದವರೆಗೂ ನಿಮ್ಮ ಕುರ್ಚಿಗಳಿಗೆ ಅಂಟಿಕೊಂಡೇ ಕುಳಿತಿರುವಂತೆ ಮಾಡುತ್ತದೆ" ಎಂದು ವಿಮರ್ಶಿಸಿದ್ದಾರೆ.[೨೩] ನ್ಯಾಷನಲ್ ಪೋಸ್ಟ್‌ನ ಮಾರ್ಕ್‌ ಮೆಡ್ಲಿ ಈ ಚಿತ್ರಕ್ಕೆ 3 ನಕ್ಷತ್ರಗಳ ಶ್ರೇಯಾಂಕವನ್ನು ನೀಡುವುದರ ಜೊತೆಗೆ, "ಈ ಚಿತ್ರವು ಹಾಸ್ಯ, ನಾಟಕೀಯ ಸನ್ನಿವೇಶಗಳು, ಪ್ರಣಯ, ಹೊಡೆದಾಟ ಮತ್ತು ಅತೀಂದ್ರಿಯ ಶಕ್ತಿಯಂತಹ ಎಲ್ಲ ಸೂಕ್ತ ಅಂಶಗಳ ಕಲಸುಮೇಲೋಗರವಾಗಿದ್ದರೂ, ವಾಸ್ತವವಾಗಿ ಒಂದು ಹಾಡು-ಮತ್ತು-ನೃತ್ಯದ ಸನ್ನಿವೇಶದಿಂದ ಮತ್ತೊಂದಕ್ಕೆ ಸಾಗಲು ಇದರ ಕಥಾವಸ್ತುವನ್ನು ಕೇವಲ ಒಂದು ವಾಹಕವಾಗಿ ಬಳಸಲಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.[೨೪]

Rediff.comನ ರಾಜ ಸೇನ್ ಈ ಚಿತ್ರಕ್ಕೆ ಮೂರುವರೆ ನಕ್ಷತ್ರಗಳ ಶ್ರೇಯಾಂಕವನ್ನು ನೀಡಿರುವುದೇ ಅಲ್ಲದೇ, "ಓಂ ಶಾಂತಿ ಓಂ ಬಾಲಿವುಡ್‌ನಲ್ಲಿನ ಒಂದು ಆನಂದಭರಿತ, ಅಮಲೇರಿಸುವ, ಹರ್ಷಕಾರಕ ಚಿತ್ರವಾಗಿದ್ದು, ಬಹುತೇಕ ಪಾನಗೋಷ್ಠಿಗಳಲ್ಲಿ ಮದ್ಯವು ಮುಕ್ತವಾಗಿ ಹರಿಯುವಂತೆಯೇ ಈ ಚಿತ್ರದಲ್ಲಿಯೂ ಬಾಲಿಶವಾದ ಹಾಸ್ಯ ಮತ್ತು ಅತೀವವಾದ ಅಪ್ರಬುದ್ಧತೆಯು ಕಾಣಿಸುತ್ತದೆ. ಈ ಚಿತ್ರದ ಸಿನಿಮೀಯ ವಾತಾವರಣದಲ್ಲಿ ನೀವು ಅದನ್ನೇ ಉಸಿರಾಡುತ್ತೀರಿ, ನಿಮ್ಮದೇ ಕಾಲರ್-ತುದಿಗಳನ್ನು ಮೇಲಕ್ಕೆತ್ತಿಕೊಳ್ಳುತ್ತೀರಿ ಹಾಗೂ ವಿವೇಚನೆಯನ್ನು ಆಚೆಗೆ ಇಡುತ್ತೀರಿ. ಸಂಭಾಷಣೆಗಿಂತ ಮಿಗಿಲಾಗಿ ಈ ಚಿತ್ರದಲ್ಲಿ ದೃಶ್ಯವೈಭವವನ್ನೇ ಹೆಚ್ಚಾಗಿ ತೋರಿಸಲಾಗಿರುವುದರಿಂದ, ನೀವು ಕುರ್ಚಿಗೆ ಆರಾಮವಾಗಿ ಒರಗಿಕೊಂಡು ಚಿತ್ರದಲ್ಲಿ ಬರುವ ಪ್ರಸಿದ್ಧ-ವ್ಯಕ್ತಿಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವ ಆಟದಲ್ಲಿ ತೊಡಗಿಸಿಕೊಳ್ಳುತ್ತೀರಿ.

ಅಥವಾ, ಬೆಳ್ಳಿತೆರೆಯ ಮೇಲೆ ಖಾನ್‌ ವಿಜೃಂಭಿಸುವುದನ್ನು ನೋಡುತ್ತಾ ಕುಳಿತುಕೊಳ್ಳುತ್ತೀರಿ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.[೨೫] ಈ ಚಿತ್ರಕ್ಕೆ Indiafmನ ತರಣ್ ಆದರ್ಶ್‌ ಭಯಮಿಶ್ರಿತ ಗೌರವ ಹುಟ್ಟುವ ರೀತಿಯಲ್ಲಿ, 5 ನಕ್ಷತ್ರಗಳ ಪೈಕಿ 4 ನಕ್ಷತ್ರಗಳ ಶ್ರೇಯಾಂಕವನ್ನು ನೀಡಿದ್ದು, ಈ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ: "ಮುಂಬರುವ ದಿನಗಳಲ್ಲಿ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಲಿದೆ. ಅಷ್ಟೇ ಅಲ್ಲ, SRKಯ ವೃತ್ತಿಜೀವನದ ಅತಿದೊಡ್ಡ ಯಶಸ್ವೀ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮುವ ಶಕ್ತಿಯೂ ಈ ಚಿತ್ರಕ್ಕಿದೆ".[೨೬]

ಈ ಚಿತ್ರಕ್ಕೆ AOL ಇಂಡಿಯಾದ ನೊಯೊನ್ ಜ್ಯೋತಿ ಪರಾಶರ, 5 ನಕ್ಷತ್ರಗಳ ಪೈಕಿ 3 ನಕ್ಷತ್ರಗಳ ಶ್ರೇಯಾಂಕವನ್ನು ನೀಡಿರುವುದರ ಜೊತೆಗೆ, "ಸಂತೋಷದಿಂದ ಮೊದಲ್ಗೊಂಡು ದುಃಖ-ಪ್ರಣಯ-ದ್ವೇಷದವರೆಗಿನ, ಭಾರತೀಯ ಸಿನಿಮಾದ 'ನವರತ್ನಗಳು' ಎನ್ನಬಹುದಾದ ಎಲ್ಲಾ ಅಗತ್ಯ ಅಂಶಗಳನ್ನೂ ಈ ಚಿತ್ರವು ಒಳಗೊಂಡಿದೆ. ಹಾಗೂ ಅವಳು (ನಿರ್ದೇಶಕಿ ಫರಾಹ್‌ ಖಾನ್) ಇವೆಲ್ಲವನ್ನೂ ಹದವಾಗಿ ಬೆರೆಸಿ, ಒಂದು ರುಚಿಕರ ಉದರ-ಪೋಷಕ ಅಡುಗೆಯನ್ನು ಮಾಡಿದ್ದು, ಅದು ಖಂಡಿತವಾಗಿಯೂ ಅತ್ಯಂತ ಯಶಸ್ವಿ ಕೊಡುಗೆಯಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. http://www.aol.in/bollywood/story/2007110908139019000001/index.html SearchIndia.com ತಾಣವು ಈ ಚಿತ್ರಕ್ಕೆ ನಿರಾಕರಣೆಯ (ಥಮ್ಸ್-ಡೌನ್) ಸಂಜ್ಞೆಯನ್ನು ಸೂಚಿಸುವುದರ ಜೊತೆಗೆ, "ಪುನರ್ಜನ್ಮದ ಸಪ್ಪೆಯಾದ ಚರ್ವಿತಚರ್ವಣ ವಿಷಯವೊಂದನ್ನು ನಕಲು-ಕಾಗದದಷ್ಟು-ತೆಳುವಾದ, ಅಸಂಗತವಾದ ಕಥಾವಸ್ತುವಿನೊಳಗೆ ಸೇರಿಸಿ, ಪ್ರಮುಖ ಪಾತ್ರಧಾರಿಗಳಿಂದ ನೀರಸವಾದ ಅಭಿನಯವನ್ನು ಮಾಡಿಸಿ ರೂಪಿಸಲಾದ ಒಂದು ಸಾಧಾರಣ ಗುಣಮಟ್ಟದ ಚಿತ್ರವಿದು. ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್‌ ಖಾನ್‌ನ ತಲೆಕೆಟ್ಟ ಅಭಿಮಾನಿಗಳು ಮಾತ್ರವೇ ಈ ಚಿತ್ರವನ್ನು ಇಷ್ಟಪಡಬಹುದು" ಎಂದು ವಿಮರ್ಶೆ ಮಾಡಿದೆ.[೨೭] CNN-IBNನ ರಾಜೀವ್ ಮನ್‌ಸದ್‌ ಓಂ ಶಾಂತಿ ಓಂ ಚಿತ್ರಕ್ಕೆ 5 ನಕ್ಷತ್ರಗಳ ಪೈಕಿ 3 ನಕ್ಷತ್ರಗಳನ್ನು ನೀಡುವುದರ ಜೊತೆಗೆ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ: "...

ಈ ಚಿತ್ರದ ಅದ್ಭುತ ಸಂಭಾಷಣೆಯ ಬಗೆಗೆ ವಿಶೇಷವಾಗಿ ಪ್ರಸ್ತಾಪಿಸಬೇಕಾಗುತ್ತದೆ. ಏಕೆಂದರೆ, ಬಾಲಿವುಡ್‌ನ ಅತ್ಯಂತ ಹಳೆಯ ಚರ್ವಿತಚರ್ವಣ ಮಾತುಗಳನ್ನು ಈ ಪಾತ್ರಗಳ ಪ್ರತಿದಿನದ ರೂಢಿಮಾತುಗಳೊಳಗೆ ಅತ್ಯಂತ ಜಾಣತನದಿಂದ ಹೆಣೆಯಲಾಗಿದೆ...."

[೨೮]. ದಿ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯ ನಿಖತ್ ಕಜ್ಮಿ ಈ ಚಿತ್ರಕ್ಕೆ 5 ನಕ್ಷತ್ರಗಳ ಪೈಕಿ 3.5 ನಕ್ಷತ್ರಗಳ ಶ್ರೇಯಾಂಕವನ್ನು ನೀಡಿದ್ದು, ಈ ಚಿತ್ರ ಕರ್ಜ್‌ ಚಿತ್ರಕ್ಕೆ ಸಲ್ಲಿಸಲಾಗಿರುವ ಒಂದು ನಿಜವಾದ ಗೌರವವಾಗಿದ್ದು, ಜನರು ತೆತ್ತ ಹಣಕ್ಕೆ ಸಂಪೂರ್ಣ ತೃಪ್ತಿಯನ್ನು ನೀಡುತ್ತದೆ ಎಂದು ವಿಮರ್ಶಿಸಿದ್ದಾರೆ.[೨೯] ಹಿಂದೂಸ್ತಾನ್ ಟೈಮ್ಸ್‌ನ ಖಾಲಿದ್ ಮೆಹಮೂದ್ ಈ ಚಿತ್ರಕ್ಕೆ 5ರಲ್ಲಿ 4 ಅಂಕಗಳನ್ನು ನೀಡಿದ್ದು, ಓಂ ಶಾಂತಿ ಓಂ ಚಿತ್ರವು ಸಂಪೂರ್ಣ ಮೆದುಳಿಲ್ಲದ ಮಜಾ ಎಂದು ಉಲ್ಲೇಖಿಸಿದ್ದಾರೆ.[೩೦]

ದಿ ಹಿಂದೂ ಪತ್ರಿಕೆಯ ಸುದೀಶ್ ಕಾಮ್‌ನಾಥ್‌ ಅಭಿಪ್ರಾಯ ಈ ರೀತಿ ಇದೆ: "ಹಿಂದಿ ಸಿನಿಮಾ ರಂಗವನ್ನು ನಾವು ಅರಿತಿರುವ ಮತ್ತು ಅದನ್ನು ಪ್ರೀತಿಸುವ ರೀತಿಯಲ್ಲಿ ಹೇಳುವುದಾದರೆ, ತನ್ನೆಲ್ಲಾ ನ್ಯೂನತೆಗಳು, ರೂಪಿಸಿರುವಿಕೆ ಮತ್ತು ಅಸಂಭಾವ್ಯತೆಗಳ ಹೊರತಾಗಿಯೂ ಓಂ ಶಾಂತಿ ಓಂ ಚಿತ್ರವು ಹಿಂದಿ ಸಿನಿಮಾ ರಂಗಕ್ಕೆ ಸಲ್ಲಿಸಿದ ಒಂದು ಖುಷಿಕರ ಗೌರವವಾಗಿದೆ. [...]ಅದನ್ನು ಹೊರತುಪಡಿಸಿದರೆ, ಚಿತ್ರವು ಒಂದು ಅತ್ಯಮೋಘ ಸಂತೋಷಕೂಟದಂತಿದ್ದು, ನಗು, ಹಾಡುಗಳು ಮತ್ತು ನೃತ್ಯಗಳ ಒಂದು ಸರಣಿಯೊಂದಿಗೆ ಚೂರು-ಪಾರುಗಳನ್ನು ಪೋಣಿಸಿದ ಒಂದು ಪ್ರಚಂಡ ಚಿತ್ರವಾಗಿದೆ.

ತಾನು ಏಕೆ ನಮ್ಮ ಕಾಲದ ರಾಕ್‌-ತಾರೆ ಎಂಬುದನ್ನು SRK ಈ ಮೂಲಕ ತೋರಿಸುತ್ತಾನೆ.

"[೩೧]

6 ವಿಮರ್ಶೆಗಳ (5 ತಾಜಾ ಮತ್ತು 1 ಹಳೆಯ ವಿಮರ್ಶೆಗಳು) ಆಧಾರದ ಮೇಲೆ, ವಿಮರ್ಶಾ ಸಂಗ್ರಾಹಕವಾಗಿರುವ ರಾಟನ್ ಟೊಮ್ಯಾಟೋಸ್‌ ಓಂ ಶಾಂತಿ ಓಂ ಚಿತ್ರಕ್ಕೆ 83%ನಷ್ಟು ಶ್ರೇಯಾಂಕವನ್ನು ನೀಡಿದೆ.[೩೨]

ವಿವಾದ[ಬದಲಾಯಿಸಿ]

ಪರಿಣಿತ ನಟ ಮನೋಜ್‌ ಕುಮಾರ್‌ನನ್ನು (ವಾಸ್ತವವಾಗಿ ಆತನನ್ನು ಹೋಲುವ ಮತ್ತೋರ್ವನನ್ನು) ಚಿತ್ರದಲ್ಲಿ ಕೆಟ್ಟ ಅಭಿರುಚಿಯ ಸ್ವರೂಪದಲ್ಲಿ ತೋರಿಸಿದ್ದಕ್ಕಾಗಿ ಓಂ ಶಾಂತಿ ಓಂ ಚಿತ್ರವು ಮನೋಜ್‌ ಕುಮಾರ್‌ನೊಂದಿಗೆ ವಿವಾದಕ್ಕೆ ಸಿಲುಕಬೇಕಾಯಿತು. ಈ ಚಿತ್ರದಲ್ಲಿ, ಒಂದು ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಪ್ರವೇಶಿಸಲು ಶ್ರೇಯಸ್ ತಲ್ಪಾಡೆಯ (ಪಪ್ಪು) ಪಾತ್ರವು ಮನೋಜ್‌ ಕುಮಾರ್‌ನ ಬಳಿಯಿದ್ದ ಚಲನಚಿತ್ರದ ಉಚಿತ ಚೀಟಿಗಳನ್ನು (ಪಾಸುಗಳನ್ನು) ಎಗರಿಸಿಕೊಂಡು ಬರುತ್ತದೆ. ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಭಾಗವಹಿಸಲು ನಿಜವಾದ ಮನೋಜ್‌ ಕುಮಾರ್ (ಚಿತ್ರದಲ್ಲಿ ತದ್ರೂಪಿ) ಕಾಣಿಸಿಕೊಂಡಾಗ, ಭದ್ರತಾ ಭಟರು ಗುರುತಿನ ಚೀಟಿ ತೋರಿಸುವಂತೆ ಅವನನ್ನು ಕೇಳುತ್ತಾರೆ. ಆಗ ಅವನು ತನ್ನ ಮುಖವನ್ನು ಕೈನಲ್ಲಿ ಮುಚ್ಚಿಕೊಂಡಿರುವ ಛಾಯಾಚಿತ್ರವನ್ನೊಳಗೊಂಡ (ಅವನ ಶಿಷ್ಟ ನಟನಾಶೈಲಿಯ ಒಂದು ಅಣಕುರೂಪ) ತನ್ನ ಚಾಲನಾ ಪರವಾನಗಿಯನ್ನು ಅವರಿಗೆ ತೋರಿಸುತ್ತಾನೆ.

ಭದ್ರತಾ ಭಟರು ಅವನನ್ನು ಗುರುತಿಸುವುದಿಲ್ಲವಾದ್ದರಿಂದ, ಅವನೊಬ್ಬ ಮೋಸಗಾರ ಎಂದು ನಿರ್ಧರಿಸಿ ಕೋಲು ಹಿಡಿದು ಅವನನ್ನು ಅಟ್ಟಿಸಿಕೊಂಡು ಹೋಗಿ ಚಿತ್ರಮಂದಿರದ ಆವರಣದಿಂದ ಆಚೆಗೆ ಕಳಿಸುತ್ತಾರೆ.[೩೩]

ಮತ್ತೊಂದು ವಿಭಿನ್ನ ದೃಶ್ಯದಲ್ಲಿ, ಶಾರುಖ್‌ ಖಾನ್‌ನ್ನು (ಓಂ ಪ್ರಕಾಶ್ ಮಖೀಜಾ ಆಗಿ) ಕುಡಿದಿರುವ ಸ್ಥಿತಿಯಲ್ಲಿ ಅಣಕುಶೈಲಿಯ ವಂದನಾರ್ಪಣೆ ಭಾಷಣ ಮಾಡುವವನಂತೆ ಹಾಗೂ ಈ ಭಾಷಣದಲ್ಲಿ, ತಾನು ಮನೋಜ್‌ ಕುಮಾರ್ ಎಂದು ಆತ ಹೇಳಿಕೊಳ್ಳುವಂತೆ ತೋರಿಸಲಾಗಿದೆ.[೩೩]

ಈ ಸನ್ನಿವೇಶದಿಂದಾಗಿ ಮನನೊಂದ ಮನೋಜ್‌ ಕುಮಾರ್, 'ಓಂ ಶಾಂತಿ ಓಂ' ಚಿತ್ರದ ನಿರ್ಮಾಪಕರ ವಿರುದ್ಧ ದಾವೆ ಹೂಡಲು ಯೋಜಿಸಿದರು. ಚಿತ್ರದ ಈ ಸನ್ನಿವೇಶಕ್ಕೆ ಸಂಬಂಧಿಸಿದ ಅವರ ಪ್ರತಿಕ್ರಿಯೆ ಹೀಗಿತ್ತು: "ಭಾರತೀಯ ಪ್ರೇಕ್ಷಕರು ಮನೋಜ್‌ ಕುಮಾರ್‌ಗೆ ಒಂದು ಪೂಜನೀಯ ಸ್ಥಾನವನ್ನು ಕೊಟ್ಟಿದ್ದಾರೆ... ಆ ಸ್ಥಾನಕ್ಕೀಗ ಧಕ್ಕೆಯಾಗಿದೆ, ಅದನ್ನು ಅಪಹಾಸ್ಯ ಮಾಡಲಾಗಿದೆ.... ಕಾನೂನಿನ ಕ್ರಮವೊಂದಕ್ಕಿಂತ ನೈತಿಕ ಕ್ರಮವನ್ನು ತೆಗೆದುಕೊಳ್ಳುವುದು ಈಗ ಹೆಚ್ಚು ಮುಖ್ಯವಾಗಿದೆ".ಅವರು ಮತ್ತೂ ಮುಂದುವರಿದು, "ಇಂಥಾ ಚಿತ್ರಗಳನ್ನು ನಿರ್ಮಿಸುವ ಜನರಿಗೆ ಮರ್ಯಾದೆ ಮತ್ತು ಘನತೆ ಎಂಬ ಪದಗಳ ಅರ್ಥವೇ ಗೊತ್ತಿಲ್ಲ. ಅವರು ಅಪರಾಧಿಗಳು" ಎಂದೂ ನುಡಿದರು.[೩೩] ಮತ್ತಷ್ಟು ಮುಂದುವರಿದ ಮನೋಜ್ ಕುಮಾರ್, "ಮುಂಬಯಿ ಪೊಲೀಸರು ಮನೋಜ್‌ ಕುಮಾರ್‌ನನ್ನು ಗುರುತಿಸಲಾಗದಷ್ಟು ಮುಟ್ಠಾಳರೇ ಮತ್ತು 70ರ ದಶಕದಲ್ಲಿ ಸ್ವತಃ ಅವನೊಬ್ಬ ತಾರೆಯಾಗಿದ್ದಾಗ ಅವನಿಗೆ ಲಾಟಿ ಏಟನ್ನು ನೀಡಲು ಸಾಧ್ಯವೇ?" ಎಂದು ಪ್ರಶ್ನಿಸಿದರು[೩೪]. ಶಾರುಖ್ ಖಾನ್ ಓರ್ವ ಕೋಮುವಾದಿ ಎಂದೂ ಸಹ ಮನೋಜ್ ಕುಮಾರ್ ಆಪಾದಿಸಿದರು.[೩೫]

ಕೆಲ ಕಾಲದ ನಂತರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಮತ್ತು ನಿರ್ದೇಶಕಿ ಫರಾಹ್ ಖಾನ್ ಕ್ಷಮೆ ಕೋರಿದರು. ತನ್ನ ತಪ್ಪುಗಳನ್ನು ಒಪ್ಪಿಕೊಂಡ ಶಾರುಖ್ ಕ್ಷಮೆ ಯಾಚಿಸಿ, "ಇದು ಯಾರಿಗಾದರೂ ನೋವುಂಟುಮಾಡಬಹುದು ಎಂಬ ಅಂಶವನ್ನು ಗಮನಿಸದೇ ಇರುವುದು ಒಂದು ತಪ್ಪಾಗಿದೆ. ನಾನು ಅವರನ್ನು ಅಪಹಾಸ್ಯಕ್ಕೀಡುಮಾಡಿದ್ದೇನೆ ಎಂದು ಯಾರಿಗಾದರೂ ಅನಿಸಿದ್ದಲ್ಲಿ, ಅವರೆಲ್ಲರನ್ನೂ ನಾನು ನಿಜವಾಗಿ ಕ್ಷಮೆ ಯಾಚಿಸುವೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಯಾರನ್ನಾದರೂ ನಿಷೇಧಾತ್ಮಕ ಸ್ವರೂಪದಲ್ಲಿ ತೋರಿಸಬೇಕೆನ್ನುವ ಅಥವಾ ಯಾರನ್ನಾದರೂ ಅವನತಿಗೆ ಒಯ್ಯಬೇಕು ಎನ್ನುವ ಇರಾದೆ ನನ್ನದಾಗಿರಲಿಲ್ಲ" ಎಂದು ನುಡಿದರು.[೩೬] ಫರಾಹ್ ಖಾನ್ ಮತ್ತೂ ಮುಂದುವರಿದು, ಮನೋಜ್‌ ಕುಮಾರ್ ತುಂಬಾ ಮನನೊಂದುಕೊಂಡರು ಎಂದು ಹೇಳಲಾದ ದೃಶ್ಯಗಳನ್ನು ಕತ್ತರಿಸಿಹಾಕುವ ಕುರಿತೂ ತಿಳಿಸಿದರು. ಆದರೆ, ಮನೋಜ್‌ ಕುಮಾರ್ ಇದಕ್ಕೆ ನಿರಾಕರಿಸಿದರು. "ನಾನು (ಫರಾಹ್ ಖಾನ್) ಅವರ ಮಗಳಿದ್ದಂತೆ ಎಂದು ಹೇಳಿದ್ದ ಮಾತನ್ನು ಅವರು ಗಣನೆಗೆ ತೆಗೆದುಕೊಂಡಿದ್ದರು. 'ಬೇಟಿಯಾಂ ಮಾಫೀ ನಹೀ ಮಾಂಗ್‌ತಿ' (ಹೆಣ್ಣು ಮಕ್ಕಳು ಕ್ಷಮೆಯನ್ನು ಕೇಳಬಾರದು) ಎಂದು ಅವರು ಹೇಳಿದರು. ಇದರ ಬದಲಿಗೆ ಅವರು ನನ್ನನ್ನು ಕರೆಯಬಹುದಿತ್ತು ಮತ್ತು ನನ್ನನ್ನು ಬಯ್ಯಬಹುದಿತ್ತು ಎಂದು ನಾನು ಅವರಿಗೆ ತಿಳಿಸಿದೆ" ಎಂಬುದು ಫರಾಹ್‌ ಖಾನ್ ಅಭಿಪ್ರಾಯವಾಗಿತ್ತು.[೩೬]

ನಂತರ ಮನೋಜ್‌ ಕುಮಾರ್ ಮಾತನಾಡುತ್ತಾ, ಈ ಘಟನೆಯು ತಮ್ಮ ಮನನೋಯಿಸಿದ್ದರೂ ಸಹ, ಅದನ್ನು ಕ್ಷಮಿಸಿ, ನಿರ್ಲಕ್ಷಿಸಿ, ಮುಂದೆ ಸಾಗಲು ತಾವು ಬಯಸುವುದಾಗಿ ಹೇಳಿ, "ಪ್ರತಿಯೊಬ್ಬರಲ್ಲೂ ರಾಮನನ್ನು ಕಾಣುವ ಮತ್ತು ರಾವಣನನ್ನು ನಿರ್ಲಕ್ಷಿಸುವ ಕಡೆಗೆ" ತಾವು ಆದ್ಯತೆ ನೀಡುವುದಾಗಿ ತಿಳಿಸಿದರು.[೩೭]

ಅಂತಿಮವಾಗಿ, 2008ರಲ್ಲಿ, ಸೋನಿ TVಯ ಮೂಲಕ ಈ ಚಿತ್ರದ ದೂರದರ್ಶನದ ಪ್ರಥಮ ಪ್ರದರ್ಶನವು ನಡೆಯುವುದಕ್ಕೆ ಮುಂಚಿತವಾಗಿಯೇ, ಪರಿಣಿತ ನಟರಾದ ಮನೋಜ್‌ ಕುಮಾರ್ ಮುಂಬಯಿಯಲ್ಲಿನ ಸಿವಿಲ್ ನ್ಯಾಯಾಲಯವೊಂದರಲ್ಲಿ ಸದರಿ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದರು. 2008ರ ಆಗಸ್ಟ್‌ 8ರಂದು, ತಮ್ಮನ್ನು ಲೇವಡಿ ಮಾಡಿದ 'ಓಂ ಶಾಂತಿ ಓಂ' ಚಿತ್ರದಲ್ಲಿನ ದೃಶ್ಯಗಳ ಮೇಲೆ, ಅವರು ಖಾಯಂ ತಡೆಗಟ್ಟಳೆಯನ್ನು (ನಷ್ಟ ಪರಿಹಾರಾಜ್ಞೆಯನ್ನು) ಗೆದ್ದರು. 2008ರ ಆಗಸ್ಟ್‌ 10ರಂದು ಸದರಿ ಚಿತ್ರವನ್ನು ವಾಹಿನಿಯಲ್ಲಿ ಪ್ರದರ್ಶಿಸುವುದಕ್ಕೆ ಮುಂಚಿತವಾಗಿ, ಮನೋಜ್‌ ಕುಮಾರ್‌ರಂತೆಯೇ ಇರುವ ಕಲಾವಿದನು ಪಾಲ್ಗೊಂಡಿರುವ ದೃಶ್ಯಗಳನ್ನು ಕತ್ತರಿಸಿ ಹಾಕಲು ನ್ಯಾಯಾಲಯವು ಚಿತ್ರದ ನಿರ್ಮಾಪಕರು ಹಾಗೂ ಸೋನಿ ಎಂಟರ್‌ಟೈನ್‌ಮೆಂಟ್‌ ಟೆಲಿವಿಷನ್ ಸಂಸ್ಥೆಗೆ ಆದೇಶ ನೀಡಿತು.

ಸದರಿ ದೃಶ್ಯಾವಳಿಗಳನ್ನು ಕತ್ತರಿಸದೆಯೇ, TV, DVD ಅಥವಾ ಅಂತರ್ಜಾಲವೇ ಮೊದಲಾದ ಯಾವುದೇ ಮಾಧ್ಯಮದಲ್ಲೂ ಈ ಚಿತ್ರವನ್ನು ಪ್ರದರ್ಶಿಸುವಂತಿಲ್ಲ ಎಂದೂ ಸಹ ನ್ಯಾಯಾಲಯ ಆದೇಶಿಸಿತು.[೩೮][೩೯]

ತಮ್ಮನ್ನು ಓಂ ಶಾಂತಿ ಓಂ ಚಿತ್ರದಲ್ಲಿ ಗೇಲಿಮಾಡಿದ್ದಕ್ಕಾಗಿ ನಟ ಶಾರುಖ್ ಖಾನ್‌, ಅವರ ನಿರ್ಮಾಣ ಸಂಸ್ಥೆಯ ನಿರ್ದೇಶಕಿ ಹಾಗೂ ಅವರ ಪತ್ನಿಯಾದ ಗೌರಿ ಖಾನ್ ಹಾಗೂ ಚಿತ್ರದ ನಿರ್ದೇಶಕಿ ಫರಾಹ್ ಖಾನ್‌ರ ವಿರುದ್ಧ ೨೦೦೮ಆಗಸ್ಟ್ 12ರಂದು ಮನೋಜ್‌ ಕುಮಾರ್ ಎರಡು ಪ್ರಕರಣಗಳನ್ನು ದಾಖಲಿಸಿದರು. ಮೊದಲನೆಯದು ಮಾನನಷ್ಟ ಮೊಕದ್ದಮೆಯ ಪ್ರಕರಣವಾಗಿದ್ದು ತಮಗಾದ ಹಾನಿಗೆ 1 ರೂಪಾಯಿಯ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದರೆ, ಎರಡನೆಯದು ಮೋಸದ ಪ್ರಕರಣಕ್ಕೆ ಸಂಬಂಧಿಸಿತ್ತು. ಚಲನಚಿತ್ರದ ಬಿಡುಗಡೆಯ ಸಮಯದಲ್ಲಿ ವಾಗ್ದಾನ ಮಾಡಿದಂತೆ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸುವ ತಮ್ಮ ಮಾತನ್ನು ಉಳಿಸಿಕೊಳ್ಳದಿದ್ದುದಕ್ಕಾಗಿ ಈ ಎರಡನೇ ಪ್ರಕರಣವನ್ನು ದಾಖಲಿಸಲಾಗಿತ್ತು.[೪೦]

ಕೃತಿಚೌರ್ಯ[ಬದಲಾಯಿಸಿ]

ಚಿತ್ರವು ದೂರದರ್ಶನದಲ್ಲಿ ಬಿಡುಗಡೆಯಾಗುವುದಕ್ಕೆ ಮುಂಚೆಯೇ, ಮಧುರ್ ಭಂಡಾರ್‌ಕರ್‌ಕಾರ್ಪೊರೇಟ್‌ (2006) ಮತ್ತು ಫ್ಯಾಷನ್ (2008) ಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆದಿದ್ದ ಚಿತ್ರಕಥಾ ಲೇಖಕ ಅಜಯ್‌ ಮೋಂಗಾ ಕೂಡಾ ೨೦೦೮ಆಗಸ್ಟ್‌ 7ರಂದು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು. 2006ರಲ್ಲಿ ತಾವು ಶಾರುಖ್‌ ಖಾನ್‌ಗೆ ಇ-ಮೇಲ್‌ ಮೂಲಕ ಕಳಿಸಿದ್ದ ಚಲನಚಿತ್ರದ ಚಿತ್ರಕಥೆಯೊಂದರಿಂದ ಓಂ ಶಾಂತಿ ಓಂ ಚಿತ್ರದ ಮೂಲಕಥೆಯ ಎಳೆಯನ್ನು ಎತ್ತಿಕೊಳ್ಳಲಾಗಿದೆ ಎಂಬುದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪವಾಗಿತ್ತು. ಸದರಿ ಮನವಿಯ ಅನುಸಾರ, "ಹೇಮಂತ್ ಹೆಗ್ಡೆ ಎಂಬ ಮತ್ತೋರ್ವ ಬರಹಗಾರನೊಂದಿಗೆ, ಮೋಂಗಾ ಸದರಿ ಚಿತ್ರಕಥೆಯನ್ನು 2005ರ ಸೆಪ್ಟೆಂಬರ್‌ನಲ್ಲಿ ಚಲನಚಿತ್ರ ಬರಹಗಾರರ ಸಂಘದಲ್ಲಿ (ಸಿನಿ ರೈಟರ್ಸ್‌ ಅಸೋಸಿಯೇಷನ್-CWA) ನೋಂದಾಯಿಸಿದ್ದರು.... ನಂತರ ನಾನು ಈ ಚಿತ್ರಕಥೆಯನ್ನು 2006ರಲ್ಲಿ ರೆಡ್‌ ಚಿಲ್ಲೀಸ್‌ ಸಂಸ್ಥೆಗೆ ತೆಗೆದುಕೊಂಡು ಹೋದೆ. ಆ ಸಮಯದಲ್ಲಿ ಶಾರುಖ್ ಮಲೇಷಿಯಾದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರಿಂದ, ಚಿತ್ರಕಥೆಯನ್ನು ಇ-ಮೇಲ್ ಮೂಲಕ ಅವರಿಗೆ ಕಳಿಸಲಾಯಿತು. ಆದರೆ ಈ ಕುರಿತು ಅವರು ಎಂದಿಗೂ ನನ್ನನ್ನು ಸಂಪರ್ಕಿಸಲಿಲ್ಲ. ನಾನು ಈ ಚಿತ್ರವನ್ನು ನೋಡಿದ ನಂತರವಷ್ಟೇ ಇದು ಸಂಪೂರ್ಣವಾಗಿ ನನ್ನ ಚಿತ್ರಕಥೆಯನ್ನು ಆಧರಿಸಿದ್ದು ಎಂದು ನನಗೆ ಅರಿವಾಯಿತು."

2008ರ ಜನವರಿಯಲ್ಲಿ, ಚಲನಚಿತ್ರ ಬರಹಗಾರರ ಸಂಘವು (CWA), ಫೆಬ್ರವರಿಯಲ್ಲಿ ಸಭೆ ಸೇರುವ ವಿಶೇಷ ಕಾರ್ಯಕಾರಿ ಸಮಿತಿಯೊಂದರಲ್ಲಿ ಮೋಂಗಾರ ಮನವಿಯನ್ನು ತಿರಸ್ಕರಿಸಿತು. ಅದರ ನಂತರ, ಸದರಿ ಚಿತ್ರವು ದೂರದರ್ಶನದಲ್ಲಿ ಪ್ರದರ್ಶನ ಕಾಣುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ದೂರದರ್ಶನದ ಮೂಲಕ ಚಿತ್ರವು ಪ್ರಸಾರವಾಗುವುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ಮೋಂಗಾರ ಮನವಿಯನ್ನು ಆಗಸ್ಟ್ 6ರಂದು ನ್ಯಾಯಾಲಯವು ತಿರಸ್ಕರಿಸಿತಾದರೂ, ಶಾರುಖ್ ಖಾನ್, ಫರಾಹ್ ಖಾನ್ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ, 3}ಗೌರಿ ಖಾನ್ (ರೆಡ್ ಚಿಲ್ಲೀಸ್ ಸಂಸ್ಥೆಯ ನಿರ್ದೇಶಕಿ) ಮತ್ತು ಚಿತ್ರದ ಸಹ-ಕತೆಗಾರ ಮುಷ್ತಾಕ್ ಶೇಖ್ ಇವರೇ ಮೊದಲಾದವರನ್ನು ಒಳಗೊಂಡಂತೆ ಎಲ್ಲ ಪ್ರತಿವಾದಿಗಳಿಗೂ ಮುಂದಿನ ವಿಚಾರಣೆಯ ದಿನಾಂಕವಾದ ೨೦೦೮ಸೆಪ್ಟೆಂಬರ್ 29ರ ಒಳಗಾಗಿ ತಂತಮ್ಮ ಹೇಳಿಕೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತು.[೪೧][೪೨][೪೩]

2008ರ ನವೆಂಬರ್‌ನಲ್ಲಿ ರೆಡ್ ಚಿಲ್ಲೀಸ್ ಸಂಸ್ಥೆ ಹಾಗೂ ಅಜಯ್ ಮೋಂಗಾರಿಗೆ ಪತ್ರವೊಂದನ್ನು ಬರೆದ ಚಲನಚಿತ್ರ ಬರಹಗಾರರ ಸಂಘವು, ಓಂ ಶಾಂತಿ ಓಂ ಹಾಗೂ ಮೋಂಗಾರ ಚಿತ್ರಕಥೆಗಳಲ್ಲಿ ಸಾಮ್ಯತೆಗಳು ಇರುವುದನ್ನು ತಾನು ಕಂಡುಕೊಂಡಿರುವುದಾಗಿ ತಿಳಿಸಿತು. ಚಲನಚಿತ್ರ ಬರಹಗಾರರ ಸಂಘದ ಪರವಾಗಿ ಪ್ರಕರಣದ ತನಿಖೆಯನ್ನು ನಡೆಸಿದ ವಿಶೇಷ ಸಮಿತಿಯೊಂದರ ಅಧ್ಯಕ್ಷತೆಯನ್ನು ವಹಿಸಿದ್ದ ಸೂನಿ ತಾರಾಪೋರ್‌ವಾಲಾರ ಪ್ರಕಾರ, ಈ ಸಾಮ್ಯತೆಗಳು ಕೇವಲ ಕಾಕತಾಳಿಯ ಎಂಬುದನ್ನೂ ಮೀರಿದವಾಗಿದ್ದವು.[೪೪]

ಕೃತಿಚೌರ್ಯದ ಮತ್ತೊಂದು ಆಪಾದನೆಯು ಮಧುಮತಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ದಿವಂಗತ ಬಿಮಲ್‌ ರಾಯ್‌ರವರ ಮಗಳಾದ ರಿಂಕಿ ಭಟ್ಟಾಚಾರ್ಯರಿಂದ ಬಂತು. ಓಂ ಶಾಂತಿ ಓಂ ಚಿತ್ರದ ದ್ವಿತೀಯಾರ್ಧವು ತಮ್ಮ ತಂದೆಯವರ, ಪುನರ್ಜನ್ಮ ಕಥೆಯನ್ನು ಹೊಂದಿರುವ ಮಧುಮತಿ ಚಿತ್ರವನ್ನೇ ಹೋಲುವಂತಿದೆ ಎಂಬ ಭಾವವನ್ನು ವ್ಯಕ್ತಪಡಿಸಿದ ಆಕೆಯು, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಹಾಗೂ ಓಂ ಶಾಂತಿ ಓಂ ಚಿತ್ರದ ನಿರ್ಮಾಪಕ-ನಿರ್ದೇಶಕರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವುದಾಗಿಯೂ ಬೆದರಿಕೆ ಹಾಕಿದರು.[೪೧][೪೨]

ಪ್ರಶಸ್ತಿಗಳು[ಬದಲಾಯಿಸಿ]

ಫಿಲ್ಮ್‌ಫೇರ್ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ವಿಭಾಗ ತಾರೆ / ತಂತ್ರಜ್ಞರು
2008 ಅತ್ಯುತ್ತಮ ಸ್ತ್ರೀ ಪ್ರಥಮ ಪರಿಚಯ ದೀಪಿಕಾ ಪಡುಕೋಣೆ
2008 ಅತ್ಯುತ್ತಮ ವಿಶೇಷ ಪರಿಣಾಮಗಳು ರೆಡ್ ಚಿಲ್ಲೀಸ್ VFX

ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ವಿಭಾಗ ತಾರೆ / ತಂತ್ರಜ್ಞರು
2008 ಅತ್ಯುತ್ತಮ ಸ್ತ್ರೀ ಹೊಸಮುಖ ದೀಪಿಕಾ ಪಡುಕೋಣೆ
2008 ಅತ್ಯುತ್ತಮ ನೃತ್ಯ ಸಂಯೋಜಕರು ಫರಾಹ್ ಖಾನ್
2008 ಜೋಡಿ ನಂ. 1 ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ

ಸ್ಟಾರ್‌ಡಸ್ಟ್ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ವಿಭಾಗ ತಾರೆ / ತಂತ್ರಜ್ಞರು
2008 ಸ್ಟಾರ್‌ಡಸ್ಟ್ ಕನಸಿನ ನಿರ್ದೇಶಕ ಪ್ರಶಸ್ತಿ ಫರಾಹ್ ಖಾನ್
2008 ನಿಷೇಧಾತ್ಮಕ ಪಾತ್ರವೊಂದರಲ್ಲಿನ ಅತ್ಯುತ್ತಮ ನಟ ಅರ್ಜುನ್ ರಾಂಪಾಲ್
2008 ಅದ್ಭುತ ಅಭಿನಯ ನೀಡಿರುವ ಪುರುಷ ಪಾತ್ರಧಾರಿ ಶ್ರೇಯಸ್ ತಲ್ಪಾಡೆ

ಝೀ ಸಿನಿ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ನಟ ಚಿತ್ರ
2008 ನಿಷೇಧಾತ್ಮಕ ಪಾತ್ರವೊಂದರಲ್ಲಿನ ಅತ್ಯುತ್ತಮ ನಟ ಅರ್ಜುನ್ ರಾಂಪಾಲ್
2008 ಅತ್ಯುತ್ತಮ ಸ್ತ್ರೀ ಪ್ರಥಮ ಪರಿಚಯ ದೀಪಿಕಾ ಪಡುಕೋಣೆ
2008 ಅತ್ಯುತ್ತಮ ನೃತ್ಯ ಸಂಯೋಜನೆ ಫರಾಹ್ ಖಾನ್
2008 ಅತ್ಯುತ್ತಮ ಉಡುಗೆ-ತೊಡುಗೆಗಳು ಮನೀಷ್ ಮಲ್ಹೋತ್ರಾ, ಕರಣ್ ಜೋಹರ್ ಮತ್ತು ಸಂಜೀವ್ ಮುಲ್‌ಚಂದಾನಿ
2008 ಅತ್ಯುತ್ತಮ ದೃಶ್ಯ ಪರಿಣಾಮಗಳು ರೆಡ್ ಚಿಲ್ಲೀಸ್ VFX

IIFA ಪ್ರಶಸ್ತಿಗಳು[ಬದಲಾಯಿಸಿ]

ಏಷ್ಯಾ ಪೆಸಿಫಿಕ್ ಸ್ಕ್ರೀನ್ ಪ್ರಶಸ್ತಿಗಳು[ಬದಲಾಯಿಸಿ]

  • ನಾಮನಿರ್ದೇಶಿತವಾಗಿದ್ದು - ಅತ್ಯುತ್ತಮ ರೂಪಕ ಚಿತ್ರ

ಏಷ್ಯಾ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. Om Shanti Om at Box Office Mojo
  2. "MITHUN,RAJNIKANT,GOVINDA,CHUNKY PANDEYget framed for a special song". DNA. Retrieved 2007-04-25.
  3. "SRK to release 2K prints of Om Shanti Om". TNN. Retrieved 2007-09-08.
  4. "Record Pre Advance Opening". Indiafm.com. Retrieved 2007-11-04.
  5. ೬.೦ ೬.೧ "'ಓಂ ಶಾಂತಿ ಓಂ' ಈಗಾಗಲೇ ದಾಖಲೆಗಳನ್ನು ಮುರಿಯುತ್ತಿರುವುದು". Archived from the original on 2008-09-17. Retrieved 2009-11-02.
  6. "ಓಂ ಶಾಂತಿ ಓಂ ಚಿತ್ರದ ಮೂಲಕ ಶಾರುಖ್ ಖಾನ್ ಈಗಾಗಲೇ 50 ಕೋಟಿಗೂ ಮೀರಿ ಸಂಪಾದಿಸಿದ್ದಾರೆ". Archived from the original on 2008-10-13. Retrieved 2009-11-02.
  7. http://www.indiafm.com/features/2007/11/22/3283/ http://www.indiafm.com/features/2007/11/26/3294/
  8. http://www.amazon.com/Shanti-Blu-ray-Shah-Rukh-Khan/dp/B00124ONSS
  9. "Bollybreak.com: Exclusive Leak : Songs of Om Shanti Om with lyrics". DNA. Retrieved 2007-09-14.
  10. "Indiafm.com: Music review of Om Shanti Om". DNA. Retrieved 2007-04-25.
  11. "Asian Film Awards: Nominations & Winners". Retrieved 2008-03-19.
  12. "More on SAAWARIYA and OM SHANTI OM! - bollywood news : glamsham.com". Archived from the original on 2009-02-20. Retrieved 2009-11-02.
  13. "ವರ್ಗೀಕರಣ ಮಂಡಳಿ ಮತ್ತು ವರ್ಗೀಕರಣ ಅವಲೋಕನ ಮಂಡಳಿ". Archived from the original on 2008-12-08. Retrieved 2021-08-27.
  14. ಓಂ ಶಾಂತಿ ಓಂ (2007) - ಪೇರೆಂಟ್ಸ್ ಗೈಡ್
  15. "ಓಂ ಶಾಂತಿ ಓಂ ಚಿತ್ರ ವಿಶ್ವಾದ್ಯಂತ 45 ದಶಲಕ್ಷ $ನಷ್ಟು ಹಣ ಗಳಿಸಿದೆ". Archived from the original on 2015-05-07. Retrieved 2009-11-02.
  16. "09/11/07-22/11/07ರ ವರೆಗಿನ ಗಲ್ಲಾಪೆಟ್ಟಿಗೆ ಗಳಿಕೆಗಳು". Archived from the original on 2007-01-03. Retrieved 2007-01-03.
  17. "Om Shanti Om first week box office collections". 2007-11-17. Archived from the original on 2007-11-19. Retrieved 2007-11-19. {{cite news}}: Check date values in: |date= (help)
  18. "Yahoo! ಮೂವೀಸ್ - ವೀಕೆಂಡ್ ಬಾಕ್ಸ್ ಆಫೀಸ್ ಅಂಡ್ ಬಝ್". Archived from the original on 2012-05-11. Retrieved 2021-07-20.
  19. UK BOX OFFICE: OM SHANTI OM IS NUMBER 1 OF 2007!
  20. 19 ದಶಲಕ್ಷ $ ಮುಟ್ಟಿದ ಓಂ ಶಾಂತಿ ಓಂ ಚಿತ್ರದ ಗಳಿಕೆಗಳು
  21. ೨೨.೦೦ ೨೨.೦೧ ೨೨.೦೨ ೨೨.೦೩ ೨೨.೦೪ ೨೨.೦೫ ೨೨.೦೬ ೨೨.೦೭ ೨೨.೦೮ ೨೨.೦೯ ಮೋಜೋ ಇಂಟರ್‌ನ್ಯಾಷನಲ್ ಗಲ್ಲಾ ಪೆಟ್ಟಿಗೆಯಲ್ಲಿ ಓಂ ಶಾಂತಿ ಓಂ
  22. Tajpal Rathore. "BBC: OSO Review".
  23. Mark Medley. "National Post: OSO Review". Archived from the original on 2007-11-19. Retrieved 2009-11-02.
  24. Raja Sen. "Rediff: OSO Review".
  25. Taran Adarsh. "Indiafm.com: Movie review of Om Shanti Om". DNA. Retrieved 2007-11-06.
  26. [indiablogs.searchindia.com/2007/11/09/om-shanti-om-a-breath-of-stale-air/ "SearchIndia.com: Movie review of Om Shanti Om"]. SearchIndia.com. Retrieved 2007-11-08. {{cite web}}: Check |url= value (help)
  27. Rajeev Masand. "CNN-IBN: OSO Review".
  28. Nikhat Kazmi. "The Times of India: OSO Review".
  29. Khalid Mehmood. "Hindustan Times Review". Archived from the original on 2009-01-02. Retrieved 2009-11-02.
  30. Sudish Kamnath. "The Hindu: OSO Review". Archived from the original on 2007-11-18. Retrieved 2009-11-02.
  31. http://www.rottentomatoes.com/m/om_shanti_om/
  32. ೩೩.೦ ೩೩.೧ ೩೩.೨ "Shahrukh Khan apologises to Manoj Kumar". CNN-IBN. 2007-11-16. Retrieved 2007-11-25.
  33. Deshpande, Swati (2007-11-16). "Hurt Manoj Kumar wants to sue SRK". The Times of India. Retrieved 2007-11-25.
  34. "ಮನೋಜ್ ಕುಮಾರ್: ಶಾರುಖ್ ಖಾನ್ ಓರ್ವ ಕೋಮುವಾದಿ". Archived from the original on 2013-01-03. Retrieved 2021-08-27.
  35. ೩೬.೦ ೩೬.೧ "SRK apologises to Manoj Kumar". The Times of India. 2007-11-17. Retrieved 2007-11-25.
  36. Sharma, Purnima (2007-11-23). "Some shanti for Manoj". The Times of India. Retrieved 2007-11-25.
  37. ದೂರದರ್ಶನದಲ್ಲಿ OSO ಚಿತ್ರವು ಪ್ರಸಾರವಾಗುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನೋಜ್ ಕುಮಾರ್ ಮನವಿ Archived 2008-12-08 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದೂಸ್ತಾನ್ ಟೈಮ್ಸ್, ಆಗಸ್ಟ್ 9, ೨೦೦೮.
  38. ಮನೋಜ್‌ ಕುಮಾರ್‌ನಂತೆಯೇ ಇರುವ ವ್ಯಕ್ತಿ ಕಾಣಿಸುವ "ಓಂ ಶಾಂತಿ ಓಂ" ಚಿತ್ರದಲ್ಲಿನ ದೃಶ್ಯವನ್ನು ತೆಗೆದುಹಾಕಿ: ನ್ಯಾಯಾಲಯ Archived 2008-12-08 ವೇಬ್ಯಾಕ್ ಮೆಷಿನ್ ನಲ್ಲಿ. ರಾಯಿಟರ್ಸ್, ಆಗಸ್ಟ್ 8, ೨೦೦೮
  39. Manoj Kumar files two cases against Shah Rukh, Farah Khan Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. Hindustan Times, August 12, ೨೦೦೮.
  40. ೪೧.೦ ೪೧.೧ ಓಂ ಶಾಂತಿ ಓಂನ್ನು ಪೀಡಿಸುತ್ತಿರುವ ಅಶಾಂತಿ Archived 2007-10-24 ವೇಬ್ಯಾಕ್ ಮೆಷಿನ್ ನಲ್ಲಿ. ಮುಂಬಯಿ ಮಿರರ್, ಆಗಸ್ಟ್ 7, ೨೦೦೮.
  41. ೪೨.೦ ೪೨.೧ "ಶಾರುಖ್, ಫರಾಹ್‌ ವಿರುದ್ಧ ದಾವೆ: ಓಂ ಶಾಂತಿ ಓಂ ಚಿತ್ರಕ್ಕಾಗಿ ತನ್ನ ಚಿತ್ರಕಥೆಯನ್ನು SRK ಕದ್ದರೆಂದು ಸಮರ್ಥಿಸುವ ಬರಹಗಾರ". Archived from the original on 2009-04-13. Retrieved 2009-11-02.
  42. SRK, ಫರಾಹ್ ವಿರುದ್ಧವಾಗಿ ತೀರ್ಪು ನೀಡಿದ HC ದಿ ಟ್ರಿಬ್ಯೂನ್, ಆಗಸ್ಟ್ 8, ೨೦೦೮.
  43. [https://web.archive.org/web/20110718043755/http://www.punemirror.in/index.aspx?page=article&sectid=19&contentid=200811222008112204184051347fa014d&sectxslt=&pageno=3 Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ. "Case Study" Pune Mirror Deshmukh, Ashwini 2008-11-22]

ಹೊರಗಿನ ಕೊಂಡಿಗಳು[ಬದಲಾಯಿಸಿ]