ಶ್ರೀರಂಗಪಟ್ಟಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ನಗರದ ಪಕ್ಷಿನೋಟ
ಶ್ರೀರಂಗಪಟ್ಟಣ ನಗರದ ಪಕ್ಷಿನೋಟ
ಶ್ರೀ ರಂಗನಾಥ ಸ್ವಾಮಿ ದೇವಾಲಯ

ಶ್ರೀರಂಗಪಟ್ಟಣ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಮಂಡ್ಯ
ನಿರ್ದೇಶಾಂಕಗಳು 12.414° N 76.704° E
ವಿಸ್ತಾರ 13 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - 1,803.69/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571 438
 - ++08236
 - KA-11

ಶ್ರೀರಂಗಪಟ್ಟಣ, ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ ಮಹತ್ವ ಹೊಂದಿರುವ ಪಟ್ಟಣವಾಗಿದೆ.

ಸ್ಥಳ[ಬದಲಾಯಿಸಿ]

ಮೈಸೂರು ನಗರದಿಂದ ೧೩ ಕಿ.ಮೀ. , ಮಂಡ್ಯ ನಗರದಿಂದ ೨೫ ಕಿ ಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಗಡಿಯಲ್ಲಿದೆ. ಪಟ್ಟಣವು ಸುತ್ತಲೂ ಕಾವೇರಿ ನದಿಯಿಂದ ಆವೃತವಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯು ಪೂರ್ವವಾಹಿನಿ ಹಾಗು ಪಶ್ಚಿಮವಾಹಿನಿಗಳಾಗಿ ಕವಲೊಡೆದು ಹರಿಯುತ್ತದೆ. ಇದರಿಂದಾಗಿ ಶ್ರೀರಂಗಪಟ್ಟನವು ಒಂದು ದ್ವೀಪದಂತಿದೆ.

ಧಾರ್ಮಿಕ ಮಹತ್ವ[ಬದಲಾಯಿಸಿ]

ಶ್ರೀರಂಗನಾಥ ಸ್ವಾಮಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ದೇವಾಲಯವು ಗಂಗ ಅರಸರು ಕಾಲದ್ದೆಂದು ಪ್ರತೀತಿಯಿದೆ. ಇದನ್ನು ೧೨ ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಯಿತು.

ಕಾವೇರಿ ನದಿ ಕವಲೊಡೆಯುವ ಸ್ಥಳಗಳಲ್ಲೆಲ್ಲ ಶ್ರೀರಂಗನಾಥ ಸ್ವಾಮಿಯ ದೇವಾಲಯಗಳಿರುವುದು ಒಂದು ವಿಶೇಷ. ಇವುಗಳೆಂದರೆ:

ಪಶ್ಚಿಮ ವಾಹಿನಿಯು ಹಿಂದುಗಳಿಗೆ ಅಂತಿಮ ಕರ್ಮಗಳನ್ನು ಮಾಡಲು ಒಂದು ಪುಣ್ಯ ಕ್ಷೇತ್ರ. ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೃತರ ಅಸ್ಥಿಗಳನ್ನು ವಿಸರ್ಜಿಸಿದರೆ ಮೋಕ್ಷ ಲಭಿಸುವುದೆಂದು ನಂಬಿಕೆಯಿದೆ.

ಐತಿಹಾಸಿಕ ಮಹತ್ವ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು.ಅದು ಯದು ವಂಶದ ಯದುರಾಯರ ಕಾಲದಿಂದಲೂ ಟಿಪ್ಪು ಸುಲ್ತಾನ್ ನ ತನಕವೂ ಮುಂದುವರೆದಿತ್ತು.ನಂತರ ಅದು ಹತ್ತಿರದ ದವಳಗಿರಿಗೆ ಸ್ಥಳಾಂತರವಯಿತು.

ಪ್ರಾಮುಖ್ಯತೆ[ಬದಲಾಯಿಸಿ]

ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ. ಅದರ ಫಲವಾಗಿ ಈಗ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.

ಈ ಊರು ಮೈಸೂರಿನ ರಾಜಧಾನಿಯಾದಾಗ ತನ್ನ ಪ್ರಾಮುಖ್ಯತೆಯನ್ನು ಗಳಿಸಿತು.ಇಲ್ಲಿನ ದೇವಾಲಯಗಳು,ದರಿಯಾ ಡೌಲಾತು ಆ ಕಾಲದಲ್ಲೇ ನಿರ್ಮಾಣಗೊಂಡವು.

ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ.

ಶ್ರೀರಂಗಪಟ್ಟಣದ ಸಂಗಮ - ಇಲ್ಲಿ ಉತ್ತರ ಕಾವೇರಿ, ದಕ್ಷಿಣ ಕಾವೇರಿ ಮತ್ತು ಲೋಕಪಾವನಿ ನದಿಗಳು ಕೂಡುವ ಸಂಗಮವಿದ್ದು ನೋಡಲು ಯೋಗ್ಯವಾದ ಸ್ಥಳವಾಗಿದೆ.

ಶ್ರೀರಂಗಪಟ್ಟಣವು ಬೆಂಗಳೂರಿನಿಂದ 127 ಕಿ.ಮೀ ಮತ್ತು ಮೈಸೂರಿನಿಂದ 13 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಊರು ತನ್ನದೆ ಆದ ರೈಲುನಿಲ್ದಾಣವನ್ನುಹೊಂದಿದೆ. ಮೈಸೂರು ಇಲ್ಲಿಗೆ ಸಮೀಪದ ವಿಮಾನನಿಲ್ದಾಣವಾಗಿದೆ. ರಸ್ತೆಯಮೂಲಕವು ಶ್ರೀರಂಗಪಟ್ಟಣಕ್ಕೆ ಸುಲಭವಾಗಿ ತಲುಪಬಹುದು. ಈ ದ್ವೀಪವು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನೆಲೆಸಿದೆ.

ಮದ್ದಿನಮನೆ[ಬದಲಾಯಿಸಿ]

  • 28 Mar, 2017
  • ಶ್ರೀರಂಗಪಟ್ಟಣದ ರೈಲು ನಿಲ್ದಾಣದ ಎದುರು ಇದ್ದ ಶಸ್ತ್ರಾಗಾರ (ಮದ್ದಿನ ಮನೆ) ವನ್ನು ರಾಜ್ಯ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ಸಮ್ಮತಿ ಪಡೆದು ರೈಲ್ವೆ ಇಲಾಖೆ, ಬೆಂಗಳೂರು–ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿತ್ತು ಎಂಬ ಕಾರಣಕ್ಕೆ ಸ್ಥಳಾಂತರಿಸಿದೆ.
  • 200 ವರ್ಷಗಳ ಹಿಂದಿನ, ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಮಾರಕವನ್ನು ಮೂಲ ಸ್ಥಳದಿಂದ 130 ಮೀಟರ್‌ ದೂರದ ಮತ್ತೊಂದು ಸ್ಥಳಕ್ಕೆ ಲವಲೇಶವೂ ಮುಕ್ಕಾಗದಂತೆ ಅಮೆರಿಕದ ವುಲ್ಫೆ ಮತ್ತು ನಮ್ಮದೇ ದೇಶದ ಪಿಎಸ್‌ಎಲ್‌ ಕಂಪೆನಿಗಳು, ಸ್ಥಳಾಂತರಿಸಿವೆ.

ವಿವರ[ಬದಲಾಯಿಸಿ]

  • ನೆಲಮಟ್ಟದಿಂದ 20 ಅಡಿ ಆಳದಲ್ಲಿ ಕಾಲುವೆ ತೋಡಿ. ಅದರ ಮೇಲೆ ಬಲಶಾಲಿಯಾದ ಉಕ್ಕಿನ ತೊಲೆಗಳನ್ನು ಅಳವಡಿಸಿ, ವಿವಿಧ ಗಾತ್ರದ ಮತ್ತು ಉದ್ದದ ಬೀಮ್‌ಗಳ ಮೇಲೆ ಸ್ಮಾರಕವನ್ನು ಕೂರಿಸಿ ವಿದೇಶದ ‘ಯುನಿಫೈಡ್‌ ಜಾಕಿಂಗ್‌ ಸಿಸ್ಟಂ’ ಎಂಬ ವಿಶೇಷ ತಂತ್ರಜ್ಞಾನದ ಸಹಾಯದಿಂದ ಈ ಸ್ಮಾರಕವನ್ನು ನಿಗದಿತ ಸ್ಥಳಕ್ಕೆ ಮುನ್ನೂಕಲು ಯಶಸ್ವಿಯಾಗಿರುವ ರೈಲ್ವೆ ಇಲಾಖೆ ಗೆಲುವಿನ ನಗೆ ಬೀರಿದೆ.

130 ಮೀಟರ್‌ ದೂರಕ್ಕೆ ಸ್ಥಳಾಂತರ[ಬದಲಾಯಿಸಿ]

  • ಈ ಸ್ಮಾರಕ ಮೊದಲಿದ್ದ ಸ್ಥಳದಿಂದ 130 ಮೀಟರ್‌ ದೂರಕ್ಕೆ ಸ್ಥಳಾಂತರಗೊಂಡಿದೆ. 90 ಡಿಗ್ರಿ ಕೋನದಲ್ಲಿ 100 ಮೀಟರ್‌ ಸಾಗಿಸಿ ಅಲ್ಲಿಂದ ಮತ್ತೆ ಬಲಕ್ಕೆ 30 ಮೀಟರ್‌ ದೂರ (ಇಂಗ್ಲಿಷ್‌ನ ‘ಎಲ್‌’ ಆಕಾರದಲ್ಲಿ) ತಳ್ಳಲಾಗಿದೆ. ಮೊದಲ ದಿನ (ಮಾರ್ಚ್‌ 6) 40 ಮೀಟರ್‌, ಎರಡನೇ ದಿನ 42 ಮೀಟರ್‌, 3ನೇ ದಿನ 18 ಮೀಟರ್‌ ಮತ್ತು 4ನೇ ಪ್ರಯತ್ನದಲ್ಲಿ 30 ಮೀಟರ್‌ ದೂರಕ್ಕೆ ಈ ಶಸ್ತ್ರಾಗಾರ ಕ್ರಮಿಸಿದೆ.
  • ಸ್ಮಾರಕದ ತಳಭಾಗದ ಕೆಲವು ಬೀಮ್‌ಗಳನ್ನು ಬೇರ್ಪಡಿಸುವ ಮತ್ತು ಅದರ ಸುತ್ತ ಕಾಂಪೌಂಡ್‌ ನಿರ್ಮಿಸುವ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಸ್ಮಾರಕ ಸ್ಥಳಾಂತರಕ್ಕೆ ಒಟ್ಟು 13.6 ಕೋಟಿ ವೆಚ್ಚವಾಗಿದ್ದು, ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಿದೆ.
  • ಈ ಸ್ಮಾರಕ ಸ್ಥಳಾಂತರಿಸುವ ಸಂಬಂಧ 2013, ಮಾರ್ಚ್‌ 14ರಂದು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಅನುಮತಿ ನೀಡಿತ್ತು. 2015ರ ಅಕ್ಟೋಬರ್‌ ತಿಂಗಳಲ್ಲಿ ಮದ್ದಿನ ಮನೆ ಸ್ಥಳಾಂತರಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ಭಾರತದ ಪಿಎಸ್‌ಎಲ್‌ ಎಂಜಿನಿಯರಿಂಗ್‌ ಮತ್ತು ಅಮೆರಿಕದ ವುಲ್ಫೆ ಕಂಪೆನಿಗಳು ಜಂಟಿ ಹೊಣೆಗಾರಿಕೆಯಲ್ಲಿ ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದವು.
  • ಸ್ಮಾರಕವನ್ನು 3 ವಲಯವಾಗಿ ವಿಭಾಗಿಸಿ ಅದರ ಕೆಳಭಾಗವನ್ನು ಭೂಮಿಯಿಂದ ಬೇರ್ಪಡಿಸಿ ‘ಕ್ಯಾರಿ ಲೈನ್‌’ (ನೆಲದಿಂದ ಎರಡು ಅಡಿ ಎತ್ತರದ ರೇಖೆಗೆ)ಗೆ ತರಲಾಯಿತು. ಸ್ಮಾರಕದ ಕೆಳಗೆ 5 ಮುಖ್ಯ ಕಬ್ಬಿಣ ತೊಲೆಗಳು, 11 ಕ್ರಾಸ್‌ ಬೀಮ್‌ಗಳು ಮತ್ತು 31 ನೀಡಲ್‌ ಬೀಮ್‌ಗಳನ್ನು ಅಳವಡಿಸಲಾಗಿತ್ತು.
  • ಈ ಎಲ್ಲ ಬೀಮ್‌ಗಳನ್ನು ಜಬಲ್‌ಪುರದಿಂದ ತರಿಸಲಾಗಿತ್ತು. ಅವುಗಳಿಗೆ ಒಟ್ಟು 37 ಜಾಕ್‌ಗಳನ್ನು ಸೇರಿಸಿ ಮುನ್ನೂಕುವ ಪ್ರಕ್ರಿಯೆ ಆರಂಭಿಸಲಾಯಿತು. ಇಡೀ ಕಟ್ಟಡ ಒಮ್ಮೆಗೇ ಮುನ್ನಡೆಯುವಂತೆ ಮಾಡಲು ‘ಯೂನಿಫೈಡ್‌ ಜಾಕಿಂಗ್‌ ಸಿಸ್ಟಂ (ಯುಜೆಎಸ್‌)’ ಎಂಬ ವಿನೂತನ ತಂತ್ರಜ್ಞಾನವನ್ನು ಬಳಕೆ ಮಾಡಲಾಯಿತು.
  • ಕಬ್ಬಿಣದ ತೊಲೆಗಳ ಮಧ್ಯೆ ಮರದ ತುಂಡುಗಳನ್ನು ಹೈಡ್ರಾಲಿಕ್‌ ಬಾಡಿ ಪುಷ್‌ ರ‍್ಯಾಮ್‌ಗಳನ್ನಾಗಿ ಬಳಸಲಾಯಿತು. ಸಾಮಾನ್ಯ ಯಂತ್ರದಂತೆ ಕಾಣುವ ಯುಜೆಎಸ್‌ ಯಂತ್ರ ಇಲ್ಲಿ ಮುಖ್ಯ ಚಾಲಕಶಕ್ತಿಯಾಗಿ ಕೆಲಸ ಮಾಡಿದ್ದು ಗಮನಾರ್ಹ ಸಂಗತಿ.
  • ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆಗೆ ಅಮೆರಿಕದ ವುಲ್ಫೆ ಕಂಪೆನಿಯ ನಿರ್ವಾಹಕ ಜೇಮಿನ್‌ ಬಕಿಂಗ್‌ಹ್ಯಾಂ ಸೇರಿ 6 ಮಂದಿ, ಪಿಎಸ್‌ಎಲ್‌ ಕಂಪೆನಿಯ 20 ಜನ ತಜ್ಞರು ಹಾಗೂ ನೈರುತ್ಯ ರೈಲ್ವೆಯ 20 ಮಂದಿ ಮತ್ತು ಪುರಾತತ್ವ ಇಲಾಖೆ ಸೇರಿ 50ಕ್ಕೂ ಹೆಚ್ಚು ಮಂದಿ ಒಂದೂವರೆ ತಿಂಗಳು ಸತತ ಕೆಲಸ ಮಾಡಿದ್ದಾರೆ.
  • 10/13 ಮೀಟರ್‌ ಅಳತೆಯ, 900 ಮೆಟ್ರಿಕ್‌ ಟನ್‌ ತೂಕದ ಈ ಸ್ಮಾರಕವನ್ನು ಅದರ ಮೂಲನೆಲೆಯಿಂದ ರೈಲು ಹಳಿಗಳಿಂದ ಸಾಕಷ್ಟು ದೂರದಲ್ಲಿ ಗೊತ್ತುಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಮಾರಕದ ಸ್ಥಳಾಂತರ ಪ್ರಕ್ರಿಯೆಗೂ ಮುನ್ನ ಅದು ಸಾಗುವ ಮಾರ್ಗದ ಉದ್ದಕ್ಕೂ 20 ಅಡಿ ಆಳದ ಕಾಲುವೆ ತೋಡಲಾಗಿತ್ತು.
  • ಹೀಗೆ ಹಳ್ಳ ತೋಡುವುದರಿಂದ ಈಗಾಗಲೇ ಇರುವ ಬ್ರಾಡ್‌ಗೇಜ್‌ ರೈಲು ಹಳಿಗಳು ಕುಸಿಯಬಹುದು ಎಂಬ ಕಾರಣಕ್ಕೆ ರೈಲು ಹಳಿಗಳಿಗೆ ಸಮಾನಾಂತರವಾಗಿ ಸಿಮೆಂಟ್‌ ಪಿಲ್ಲರ್‌ಗಳನ್ನು ನಿರ್ಮಿಸಿ ಎಚ್ಚರವಹಿಸಲಾಗಿತ್ತು.

ಶಸ್ತ್ರಾಗಾರದ ರಚನೆ[ಬದಲಾಯಿಸಿ]

  • ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್‌ ಕಾಲದ 8 ಶಸ್ತ್ರಾಗಾರಗಳ ಪೈಕಿ ಜೋಡಿ ರೈಲು ಮಾರ್ಗ ನಿರ್ಮಾಣ ಉದ್ದೇಶಕ್ಕೆ ಸ್ಥಳಾಂತರಗೊಂಡಿರುವ ಶಸ್ತ್ರಾಗಾರ ಷಡ್ಕೋನಾಕೃತಿಯ ಸ್ಮಾರಕ. ಈ ದ್ವೀಪ ಪಟ್ಟಣದ 3 ಸುತ್ತಿನ ಕೋಟೆಯ ಸುತ್ತ ಕಾವಲು ಕಾಯುವ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಲು ಇವುಗಳನ್ನು ಟಿಪ್ಪು ಸುಲ್ತಾನ್‌ ನಿರ್ಮಿಸಿದ್ದ.
  • ಚುರಕಿ ಗಾರೆಯಿಂದ (ಸುಣ್ಣ, ಸುಟ್ಟ ಇಟ್ಟಿಗೆ, ಮರವಜ್ರ ಮಿಶ್ರಣ) ಬಳಸಿ ಇದನ್ನು ನಿರ್ಮಿಸಲಾಗಿದೆ. ಸ್ಮಾರಕ ಗೋಡೆ ಒಂದು ಮೀಟರ್‌ ದಪ್ಪ ಇದೆ. ಮೇಲ್ಭಾಗದಲ್ಲಿ ಬೆಳಕಿಂಡಿ ಇಡಲಾಗಿದೆ.
  • ನೆಲಮಟ್ಟದಿಂದ ಕೆಳಗೆ ಸುಮಾರು 10 ಅಡಿ ಆಳದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ವ್ಯವಸ್ಥೆ ರೂಪಿಸಲಾಗಿದೆ. 200 ವರ್ಷಗಳ ಹಿಂದೆಯೇ ಜ್ಯಾಮಿತಿಯ ತತ್ವದ ಆಧಾರದ ಮೇಲೆ ಇಳಿಜಾರು ಚಾವಣಿ ಮಾದರಿಯಲ್ಲಿ ಈ ಶಸ್ತ್ರಾಗಾರ ನಿರ್ಮಿಸಿರುವುದು ವಿಶೇಷ.[೧] ಶ್ರೀ ರಂಗಪಟ್ಟಣ.

ಶ್ರೀರಂಗಪಟ್ಟಣದಲ್ಲಿ ನೋಡುವ ಸ್ಥಳಗಳು[ಬದಲಾಯಿಸಿ]

ಗುಂಬಜ್ ಕೃಷ್ಣ ರಾಜ ಸಾಗರ ಬಲಮುರಿ ಎಡಮುರಿ ಸಂಗಮ್ ಗೋಸಾಯ್ ಘಾಟ್ ಧ್ವನಿ ಬೆಳಕು ಕಾರ್ಯಕ್ರಮ ಸ್ನಾನ ಘಟ್ಟ ಚಾಮರಾಜೇಂದ್ರ ವಸ್ತು ಸಂಗ್ರಹಾಲಯ ಕಾವೇರಿನದಿ ಮಹದೇವಪುರ


ಬನ್ನಹಳ್ಳಿ ಶ್ರೀ ತಿರುಮಲ ದೇವರು

ಶ್ರೀರಂಗಪಟ್ಟಣ ತಾಲೂಕಿನ ಒಂದು ಪುಟ್ಟಗ್ರಾಮ ಬನ್ನಹಳ್ಳಿ. ತಾಲೂಕಿನ ಗಡಿ ಭಾಗದಲ್ಲಿರುವ ಇದು ಮಂಡ್ಯ ನಗರಕ್ಕೆ ಅತಿ ಸಮೀಪವಿದೆ. ಈ ಕಾರಣದಿಂದ ಬನ್ನಹಳ್ಳಿಯ ಹೆಚ್ಚಿನ ವ್ಯವಹಾರ ಮ೦ಡ್ಯದೊ೦ದಿಗೆ. ಈಗ ಒಂದು ರೀತಿಯಲ್ಲಿ ಈ ಹಳ್ಳಿ ನಿದ್ರಿಸುತ್ತಿದೆ ಎಂದು ಹೇಳಬೇಕು. ಕೆಲ ಶತಮಾನಗಳ   ಹಿಂದಿನವರೆಗೆ ಇದು ಅತ್ಯಂತ ಚಟುವಟಿಕೆಯಿಂದ ಕೂಡಿದ ಸ್ಥಳವಾಗಿತ್ತು. ಇದರ ಇತಿಹಾಸವನ್ನು ಇದುವರೆಗೆ ಯಾರೂ ಬರೆಯದಿದ್ದರು ಐತಿಹಾಸಿಕ ಮಹತ್ವ ಪಡೆದ ಸ್ಥಳ ಇದಾಗಿದೆ.

ಬನ್ನಹಳ್ಳಿಯ ಕೇ೦ದ್ರಬಿಂದು ಶ್ರೀ ತಿರುಮಲ ದೇವಾಲಯ. ಗ್ರಾಮದ ಜನರಿಗೆ ಈ ದೇವರ ಬಗ್ಗೆ ಅಪಾರ ಶ್ರದ್ಧೆ, ಭಕ್ತಿ ಮತ್ತು ನ೦ಬಿಕೆ. ಈ ದೇವರ ಕಾರ್ಯಗಳಲ್ಲಿ ಗ್ರಾಮದ ಜನರೆಲ್ಲಾ ಒಂದಾಗಿ ಸೇರಿ ಯಶಸ್ವಿಗೊಳಿಸುವುದು ಅಪೂರ್ವ ಸನ್ನಿವೇಶವೆ ಸರಿ. ಈ ತೆರೆನಾದ ಧಾರ್ಮಿಕ ನಡಾವಳಿ ಇರುವ ಈ ಸಮಾಜಕ್ಕೆ ಅದರದೇ ಆದ ಇತಿಹಾಸ ಮತ್ತು ಪರಂಪರೆಯ ಇದೆ.

ಚಿತ್ರಶಾಲೆ[ಬದಲಾಯಿಸಿ]

ಉಲ್ಲೇಖನಗಳು[ಬದಲಾಯಿಸಿ]

  1. "ಮೊದಲ ಯಶಸ್ವಿ ಪ್ರಯತ್ನ!;ಹೊಸ ನೆಲೆಯಲಿ 'ಮದ್ದಿನ ಮನೆ';ಗಣಂಗೂರು ನಂಜೇಗೌಡ;28 Mar, 2017". Archived from the original on 2017-03-27. Retrieved 2017-03-28.