ಚಾಮರಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಮರಸಸು. 1430.ಕನ್ನಡದ ಪ್ರಸಿದ್ಧ ಕವಿ. ಇವರು ಪ್ರಭುಲಿಂಗ ಲೀಲೆಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯ.ಇಮ್ಮಡಿ ಪ್ರೌಢದೇವರಾಯರ ರಾಜಾಶ್ರಯದಲಿದ್ದರು . ಅನ್ಯಮತ ಕೋಳಾಹಲ (ಈ ರೀತಿ ಬಿರುದಿದ್ದರೂ ಅವನ ಕಾವ್ಯಗಳಲ್ಲಿ ಯಾವುದೇ ಮತೀಯ ವಾದ ಕಂಡು ಬರುವುದಿಲ್ಲ) , ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವರ ಬಿರುದುಗಳು.

ಪ್ರಸಿದ್ಧಿ[ಬದಲಾಯಿಸಿ]

ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ಪ್ರಭುಲಿಂಗಲೀಲೆಯ ಕರ್ತೃ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರಮಾರ್ಗಸಾರೋದ್ಧಾರ, ಅನ್ಯಮತಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ ಈತನ ಸ್ಥಳ ಗದಗು ಇಲ್ಲವೆ ನಾಗಣಾಪುರ ಎಂದು ಹೇಳಲಾಗಿದೆ.

ಕಾವ್ಯ[ಬದಲಾಯಿಸಿ]

ಹರಿಹರ ರಾಘವಾಂಕರ ತರುವಾಯ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ ಅಗ್ರಗಣ್ಯ. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ಪ್ರಭುಲಿಂಗಲೀಲೆ ಮಧ್ಯಮ ಗಾತ್ರದ ಕಾವ್ಯ. ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ, ಸಂಯಮಿಯೂ ಸದಾಜಾರ ಸಂಪನ್ನನೂ ಆಗಿದ್ದನೆಂದು ಊಹಿಸಬಹುದಾಗಿದೆ.

ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ ಸಮಸ್ತಜಾತಿಯ ಜಾಲವನ್ನು ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಈ ಕಾವ್ಯ ಅಪೂರ್ವವಾದ ರೀತಿಯಲ್ಲಿ ಚಿತ್ರಿಸುತ್ತದೆ. ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ `ಲಲಿತನಿರ್ಮಲ ಚಂದ್ರಕಾಂತದ ಶಿಲೆಯ ಹತ್ತಿರ ಲತೆಯ ದಾವಾನಳನು ಕೊಳಲಾಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ ತಿಳಿಯದಯದ ಜನಕೆ ಮಾಯೆಯ ತಳಿತ ಕಾಮಜ್ವಾಲೆಯಲ್ಲಮನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ-ಎಂದು ಚಾಮರಸ ಅಲ್ಲಮನ ಗುರುಗುಹೇಶ್ವರ ಸ್ವರೂಪದ ದರ್ಶನ ಮಾಡಿಸಿದ್ದಾನೆ. ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು ಎಂದಿರುವುದು ಕವಿಯ ಉದ್ದೇಶಕ್ಕೆ ಸಾಕ್ಷಿ.

ಮಲಯಜದ ಮರ ಗಾಳಿ ಸೋಂಕಿನಲುಳಿದ ಮರ ಪರಿಮಳಿಸುವಂತೆ ಅಲ್ಲಮನ ದಿವ್ಯ ಸಂಪರ್ಕದಿಂದ ಬಸವಣ್ಣ, ಸಿದ್ಧರಾಮ, ಗೊಗ್ಗಯ್ಯ, ಗೋರಕ್ಷ, ಮಾಯಾದೇವಿ, ಮಹಾದೇವಿಯಕ್ಕ, ಮುಕ್ತಾಯಕ್ಕ ಮೊದಲಾದವರು ಕಣ್ಗೆಸೆದರೂ ಆಯಾ ಪಾತ್ರವೃಕ್ಷಗಳು ತಮ್ಮ ಸತ್ತ್ವದಿಂದಲೇ ಬೆಳೆದು, ತಂತಮ್ಮ ನೆಲೆಯಲ್ಲಿ ನಿಂತು ಅಲ್ಲಮನ ಪಾದಕ್ಕೆ ಬಾಗಿ ಹೂ ಬಿಟ್ಟಿವೆ. ಒಂದು ದೃಷ್ಟಿಯಿಂದ ಪಾರ್ವತಿಯ ತಾಮಸಕಳೆಯಾಗಿ ಬಂದ ಮಾಯೆ ಅವಳಿಗೆ ತಿಳಿವನ್ನು ಕೊಟ್ಟ ವಿಮಳೆ, ಸಾತ್ತ್ವಿಕ ಕಳೆಯಾಗಿ ಬಂದ ಅಕ್ಕಮಹಾದೇವಿ, ಸುಜ್ಞಾನಿ ನಿರಹಂಕಾರರ ಮಗನಾಗಿ ಹುಟ್ಟಿದ ಅಲ್ಲಮ-ಈ ಮುಂತಾದ ಕಥಾರಚನೆಯಲ್ಲಿ ಆಧ್ಯಾತ್ಮಿಕವಾದ ಸಾಂಕೇತಿಕ ಧ್ವನಿಯ ಏಕತೆ ಕಾಣುತ್ತದೆ. `ಶಿವನ ನಟ ನಾಟಕದ ಮಹಿಮೆಯನ್ನು ತೆರೆದು ತೋರಿಸುವ ಈ ಕಾವ್ಯದಲ್ಲಿ ಎಲ್ಲ ಪಾತ್ರಗಳೂ ಜೀವಕಳೆಯಿಂದ ಕೂಡಿ ಶಿವಕಳೆಯನ್ನು ಬೆಳಗುತ್ತವೆ.

ತಿಳಿಗನ್ನಡದ ತುಂಬಿದ ತೊರೆಯಂತೆ ನಿರರ್ಗಳವಾಗಿ ಹರಿಯುವ ಚಾಮರಸನ ಭಾಮಿನೀ ಷಟ್ಟದಿಯ ಶೈಲಿಯನ್ನು ಕುಮಾರವ್ಯಾಸನೊಡನೆ ಹೋಲಿಸಬಹುದಾದರೂ ಇವನ ಭಾಷೆ ನಯಗಾರಿಕೆಯಿಂದ ಕೂಡಿದೆ. ಆ ಕಾಲದ ಶಿವಶರಣರ ವಚನಗಳನ್ನು ಕವಿ ಚೆನ್ನಾಗಿ ಅಭ್ಯಾಸಮಾಡಿದ್ದ ಎಂಬುದಕ್ಕೆ ಇವನ ವಾಣಿ ಸಾಕ್ಷಿ ಹೇಳುತ್ತದೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ.

ಚಾಮರಸನ ಪ್ರಭುಲಿಂಗಲೀಲೆ ಸಂಸ್ಕೃತ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ತನ ಹೊಂದಿದ ಕೀರ್ತಿ ಪಡೆದ ಏಕಮಾತ್ರ ಕನ್ನಡ ಕಾವ್ಯವಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಾಮರಸ&oldid=1097776" ಇಂದ ಪಡೆಯಲ್ಪಟ್ಟಿದೆ